
ರಾಜ್ಯದ ಪ್ರಗತಿಗಾಗಿ ಇನ್ನೂ ಹೆಚ್ಚು ದುಡಿಯಲು ಪ್ರೇರಣೆ ದೊರೆತಿದೆ
ಪ್ರಗತಿವಾಹಿನಿ ಸುದ್ದಿ, ಶಿಗ್ಗಾಂವಿ –
ಶಿಗ್ಗಾಂವಿ ಕ್ಷೇತ್ರದ ಅಭಿವೃದ್ಧಿಗೆ ಕಂಡ ಕನಸುಗಳನ್ನು ಪೂರ್ತಿ ಮಾಡುವ ದಿನಗಳು ಬಂದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ಶಿಗ್ಗಾಂವಿಯಲ್ಲಿ ಶ್ರೀಮತಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
*ಕೆಲಸವೇ ಮಾತನಾಡಲಿದೆ*
ಈ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ, ಕುಡಿಯುವ ನೀರು, ವಿದ್ಯುತ್, ಮನೆಗಳು ಜೊತೆಗೆ ಕೈಗಾರಿಕೆ, ದುಡಿಯುವ . ಕೈಗಳಿಗೆ ಉದ್ಯೋಗ ನೀಡುವ ದಿನಗಳು ಬಂದಿವೆ. ಬರುವ ದಿನಗಳಲ್ಲಿ ತಾವು ಇದರ ಲಾಭ ಪಡೆಯುವಿರಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ನಿಮ್ಮ ಮತದಲ್ಲಿ ಎಷ್ಟೊಂದು ಶಕ್ತಿ ಇದೆಯೆಂದರೆ, ಆ ಮೂಲಕ ಶಾಸಕ, ಸಚಿವ ಹಾಗೂ ಮುಖ್ಯಮಂತ್ರಿ ಹುದ್ದೆ ದೊರೆತಿದೆ. ಈ ಶಕ್ತಿಯ ಲಾಭ ತಾಲೂಕಿಗೆ ಆಗಬೇಕಾಗಿದೆ. ಈ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದು, ದೊಡ್ಡ ಪ್ರಮಾಣದ ಬದಲಾವಣೆ ತಾಲ್ಲೂಕಿನಲ್ಲಿ ಆಗಲಿದೆ. ನಾನು ಮಾತನಾಡುವುದಿಲ್ಲ. ನನ್ನ ಕೆಲಸಗಳು ಮಾತನಾಡುತ್ತವೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸಗಳು ಮಾತನಾಡ ಲಿವೆ ಎಂದು ನುಡಿದರು.
ರಾಗ ದ್ವೇಷ, ಬಡವ ಬಲ್ಲಿದ ಎನ್ನದೆ ತಾವು ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
*ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ :*
ಎಸ್ ಸಿ , ಎಸ್ ಟಿ ಮಹಿಳೆಯರು ಮತ್ತು ಯುವಕರಿಗಾಗಿ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇವರಿಗೆ ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ ಇವುಗಳು ಪ್ರಮುಖವಾಗಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ನಿಮ್ಮ ಪ್ರೀತಿ ವಿಶ್ವಾಸ ಸದಾ ಕಾಲ ಇರಬೇಕು. ಹೆಣ್ಣುಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳನ್ನು ಡಿಸೆಂಬರ್ ಮಾಹೆಯಲ್ಲಿ ಪ್ರಾರಂಭಿಸಲಾಗುವುದು. ಮಹಿಳೆಯರಿಗೆ ಉದ್ಯೋಗ ನೀಡಿ, ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಲಾಗುವುದು, ರೈತ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ ಎಂದರು.
*ರಾಜ್ಯದ ಪ್ರಗತಿಗಾಗಿ ಇನ್ನೂ ಹೆಚ್ಚು ದುಡಿಯಲು ಪ್ರೇರಣೆ ದೊರೆತಿದೆ*
ಬ್ರಿಟೀಷ್ ಸೈನ್ಯವನ್ನು ಸೋಲಿಸಿ ಥ್ಯಾಕರೆಯನ್ನು ಕೊಂದಂತಹ ದಿನ. ಇಂದು ಕಿತ್ತೂರು ರಾಣಿ ಚೆನ್ನಮ್ಮನಿಗೆ ಗೌರವ ಸಲ್ಲಿಸುವ ದಿನ. ಚೆನ್ನಮ್ಮನ ಶೌರ್ಯವನ್ನು ರಾಜ್ಯದ ಪ್ರಗತಿಯಲ್ಲಿ ತೋರಬೇಕಿದೆ. ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆಯಾಗಿದ್ದಾರೆ. ಇಂತಹ ಪವಿತ್ರ ನಾಡಿನಲ್ಲಿ ನಾವಿದ್ದೇವೆ. ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು. ಈ ಕಾರ್ಯಕ್ರಮದಿಂದ ಅದಮ್ಯವಾದ ಶಕ್ತಿ ನನಗೆ ದೊರೆತಿದೆ. ಮೊದಲು 14 – 15 ಗಂಟೆಗಳು ಕೆಲಸ ಮಾಡುತ್ತಿದ್ದು, ರಾಜ್ಯದ ಪ್ರಗತಿಗಾಗಿ ಇನ್ನೂ ಹೆಚ್ಚು ದುಡಿಯಲು ಹೆಚ್ಚಿನ ಪ್ರೇರಣೆ ದೊರೆತಿದೆ ಎಂದರು.
https://pragati.taskdun.com/latest/channammas-kittur-utsav-2022-grand-drive-for-state-level-festival-cultural-program/