ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ಪಟ್ಟಣದ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯಲ್ಲಿ ಈಚೆಗೆ ಪ್ರಶಿಕ್ಷಣಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಅಧಿಕಾರಿಗಳು, ಸಿಬ್ಬಂದಿಯ ವಸತಿ ನಿಲಯಗಳಿಗೆ ಸೋಲಾರ್ ಬಿಸಿನೀರಿನ ಘಟಕಗಳನ್ನು ಇಲಾಖೆಯ ಐಜಿಪಿ (ತರಬೇತಿ) ಎಸ್.ರವಿ ಲೋಕಾರ್ಪಣೆಗೊಳಿಸಿದರು.
ಬಳಿಕ ತರಬೇತಿ ಶಾಲೆಯ ಸಭಾಗೃಹದಲ್ಲಿ ಜರುಗಿದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ತರಬೇತಿ ಶಾಲೆಯ ಇತಿಹಾಸದಲ್ಲಿ ಮೊದಲ ಸಲ ಕಾರಾಗೃಹ ಇಲಾಖೆಯ ವಾರ್ಡರ್ಗಳಿಗೆ ೯ ತಿಂಗಳ ಬುನಾದಿ ತರಬೇತಿಯನ್ನು ನೀಡಲಾಗುತ್ತಿದೆ. ಈಗಾಗಲೇ ಮೊದಲ ಬ್ಯಾಚ್ ತರಬೇತಿ ಪೂರೈಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈಗ ೨ನೇ ಬ್ಯಾಚ್ನಲ್ಲಿ ರಾಜ್ಯದ ವಿವಿಧ ಕಾರಾಗೃಹಗಳ ೧೮೯ ಪ್ರಶಿಕ್ಷಣಾರ್ಥಿಗಳನ್ನು ತರಬೇತಿ ಪಡೆಯುತ್ತಿದ್ದಾರೆ ಎಂದರು.
ವಾರ್ಡರ್ಗಳ ತರಬೇತಿಗಾಗಿ ತರಬೇತಿ ಶಾಲೆಯ ಪರಿಣಿತರಿಂದ ಕಾರಾಗೃಹ ಇಲಾಖೆಯ ಹೊಸ ಕಾನೂನುಗಳ ಬಗ್ಗೆ, ಪರಿಷ್ಕೃತ ನಿಯಮಗಳ ಬಗ್ಗೆ ಮತ್ತು ಕಾರಾಗೃಹಗಳಲ್ಲಿ ಕೈದಿಗಳ ನಿರ್ವಹಣೆಯ ಬಗ್ಗೆ ವಿವರವಾದ ತರಬೇತಿಯನ್ನು ನೀಡಲಾಗುತ್ತದೆ. ಇಲ್ಲಿ ಕಲಿತ ವಿಷಯವನ್ನು ವಾರ್ಡರ್ಗಳು ತಾವು ಕೆಲಸಕ್ಕೆ ತೆರಳಿದ ನಂತರ ಕಾರಾಗೃಹಗಳಲ್ಲಿ ಕಾರ್ಯರೂಪಕ್ಕೆ ತಂದಾಗ ಈ ತರಬೇತಿ ಆಯೋಜಿಸಿದ್ದು ಸಾರ್ಥಕವಾದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ತರಬೇತಿ ಶಾಲೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ಎಂ.ಕುಮಾರ, ಶತಮಾನದ ಇತಿಹಾಸ ಹೊಂದರುವ ತರಬೇತಿ ಶಾಲೆಯ ಹಳೆಯ ಕಟ್ಟಡದಲ್ಲಿ ತರಬೇತಿ ಶಾಲೆಯ ಕಚೇರಿ ಮತ್ತು ಭೋಜನಗೃಹಗಳು ಇವೆ, ಇವುಗಳ ನವೀಕರಣ, ಹೊಸದಾಗಿ ಪ್ರವೇಶ ದ್ವಾರ ನಿರ್ಮಾಣ, ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಭೋಜನ, ವಾಸ್ತವ್ಯ ಮತ್ತು ತರಬೇತಿಗೆ ಪೂರಕ ವಾತಾವರಣವನ್ನು ತರಬೇತಿ ಶಾಲೆಯಲ್ಲಿ ಕಲ್ಪಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಬಿಸಿನೀರು ಘಟಕಗಳು ನಿರ್ಮಾಣವಾಗುವ ಮೂಲಕ ತರಬೇತಿ ಶಾಲೆಗೆ ಅನುಕೂಲವಾದಂತಾಹಿದೆ. ಈಗಿರುವ ಪ್ರಶಿಕ್ಷಣಾರ್ಥಿಗಳ ತರಬೇತಿ ಜೂನ್ ತಿಂಗಳಲ್ಲಿ ಕೊನೆಗೊಳ್ಳಲಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ತರಬೇತಿ ಶಾಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.