Latest

ವಿಟಿಯು ಒಡೆಯುವುದಾದರೆ ರಾಜ್ಯವನ್ನೇ ಒಡೆಯಿರಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ವಿಟಿಯು ಒಡೆಯುವುದಾದರೆ ರಾಜ್ಯವನ್ನೇ ಒಡೆಯಿರಿ, ಇನ್ನು ನಮ್ಮ ಸಹನೆ ಪರೀಕ್ಷಿಸಬೇಡಿ

Home add -Advt

-ಇದು ಸೋಮವಾರ ಸಂಜೆ ಸಭೆ ಸೇರಿದ್ದ ಬೆಳಗಾವಿಯ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಒಕ್ಕೂಟದ ಒಕ್ಕೊರಲಿನ ಆಕ್ರೋಶ- ಆಗ್ರಹ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸಿ, ಹಾಸನದಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಸ್ಥಾಪಿಸುವ ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ಹೋರಾಟ ರೂಪಿಸುವುದಕ್ಕಾಗಿ ಬೆಳಗಾವಿ ಅಭಿವೃದ್ಧಿ ಪರವಾಗಿರುವ 50ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಸಭೆ ಸೇರಿದ್ದರು. 

ಈಗಲೂ ಪ್ರತಿಭಟಿಸದಿದ್ದರೆ ಬೆಳಗಾವಿಯನ್ನೇ ಎತ್ತಿಕೊಂಡು ಹೋದಾರು

ವಿಟಿಯು ಒಡೆಯುವ ಸರಕಾರದ ನಿರ್ಧಾರದ ವಿರುದ್ಧ ಎಲ್ಲರಿಂದಲೂ ಆಕ್ರೋಶ ವ್ಯಕ್ತವಾಯಿತು. ವಿಟಿಯು ಒಡೆಯಲು ಯಾವುದೇ ಸಮರ್ಥನೆಗಳಿಲ್ಲ. ಇದೊಂದು ರಾಜಕೀಯ ನಿರ್ಧಾರವೇ ಹೊರತು ಶೈಕ್ಷಣಿಕ ಬೆಳವಣಿಗೆಯ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಲ್ಲ. ಹಾಗಾಗಿ ಇದರ ವಿರುದ್ಧ ಸಂಪೂರ್ಣ ಉತ್ತರಕರ್ನಾಟಕ ಎದ್ದು ನಿಲ್ಲಬೇಕು, ಪ್ರತಿಭಟಿಸಬೇಕು ಎನ್ನುವ ನಿರ್ಣಯವನ್ನು ಸಭೆ ತೆಗೆದುಕೊಡಿತು. 

ಸಭೆಯ ನಿರ್ಣಯ ಮಂಡಿಸಿದ ಫೌಂಡ್ರಿ ಕ್ಲಸ್ಟರ್ ಚೇರಮನ್ ರಾಮ್ ಭಂಡಾರೆ, ಒಡೆಯುವುದಾದರೆ ರಾಜ್ಯವನ್ನೇ ಒಡೆಯಿರಿ. ನಿರಂತರ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಈ ಸಂಬಂಧ ಶೀಘ್ರದಲ್ಲೇ ರಾಜ್ಯಪಾಲರನ್ನು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಮಂಗಳವಾರ ಬೆಳಗ್ಗೆ 11.30ಕ್ಕೆ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಎಲ್ಲ ಕಾಲೇಜುಗಳ ವಿದ್ಯಾರ್ಥಿ ಪ್ರತಿನಿಧಿಗಳ, ಆಡಳಿತ ಮಂಡಳಿಗಳ, ಮಠಾಧೀಶರ, ಕನ್ನಡ ಸಂಘಟನೆಗಳು ಸೇರಿದಂತೆ ನಗರದ ಎಲ್ಲ ಸಂಘಟನೆಗಳ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು.

ಸೇವ್ ವಿಟಿಯು:ನಾಳೆ ಬೃಹತ್ ಪ್ರತಿಭಟನಾ ಸಭೆ; ಪ್ರಗತಿವಾಹಿನಿ ಇಂಪ್ಯಾಕ್ಟ್

ಪ್ರೊಫೇಶನಲ್ ಫೋರಮ್ ಚೇರಮನ್ ಬಿ.ಎಸ್.ಪಾಟೀಲ, ವಿಟಿಯು ವಿಭಜನೆ ನಿರ್ಧಾರ ಉತ್ತರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯದ ಮುಂದಿನ ಭಾಗವಾಗಿದೆ. ವಿಭಜನೆಗೆ ಕೊಟ್ಟರುವ ಕಾರಣ ಸಮರ್ಥನೀಯವಾಗಿಲ್ಲ. ಈ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದರು. 

ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಬಜೆಟ್ ನಲ್ಲಿ ಉತ್ತರ ಕರ್ನಾಟಕ್ಕೆ ದೊಡ್ಡ ದೆೊಡ್ಡ ಯೋಜನೆಗಳ ಘೋಷಣೆಯಾಗಬಹುದೆನ್ನು ನಿರೀಕ್ಷೆಯಲ್ಲಿದ್ದಾಗ ವಿಟಿಯು ವಿಭಜಿಸುವ ಮುಖ್ಯಮಂತ್ರಿಗಳ ಘೋಷಣೆ ಉತ್ತರ ಕರ್ನಾಟಕದ ಪಾಲಿಗೆ ದೊಡ್ಡ ಶಾಕ್ ಆಗಿದೆ. ಈಗ ಸುಮ್ಮನೆ ಕುಳಿತರೆ ನಿರಂತರವಾಗಿ ನಮ್ಮ ಮೇಲೆ ಶೋಷಣೆ ಮುಂದುವರಿಯಲಿದೆ ಎಂದರು.

ವಿಟಿಯು ವಿಭಜನೆ ವಿರೋಧಿಸಿ ಹೋರಾಟಕ್ಕೆ ಸ್ವಾಭಿಮಾನಿ ಬೆಳಗಾವಿಗರು ಸಜ್ಜು

ವಿಟಿಯು ಸೆನೆಟ್ ಸದಸ್ಯ ವಿಜಯ ಕುಚನೂರೆ, ಇಲ್ಲಿಯವರೆಗೂ ನಾವು ಸಹನೆಯಿಂದ  ಇದ್ದೇವೆ. ವಿಶ್ವವಿದ್ಯಾಲಯದ ಅಭಿಪ್ರಾಯವನ್ನೇ ಕೇಳದೆ ಸರಕಾರ ವಿಭಜಿಸುವ ನಿರ್ಧಾರ ತೆಗೆದುಕೊಂಡಿದೆ. ವಿಟಿಯುಗಿಂತ ಹೆಚ್ಚು ಒತ್ತಡವಿರುವ ರಾಜೀವ ಗಾಂಧಿ ವಿವಿಯನ್ನು ಒಡೆಯುವ ಮಾತನ್ನು ಸರಕಾರ ಆಡಿಲ್ಲ ಎಂದರು.

ಆರ್ ಸಿಯು ಸೆನೆಟ್ ಸದಸ್ಯ ರಾಜು ಚಿಕ್ಕನ ಗೌಡರ್, ಸರಕಾರಕ್ಕೆ ಗಡುವು ನೀಡಿ ಉಗ್ರ ಹೋರಾಟ ಮಾಡಬೇಕು. ವಿಧಾನಮಂಡಳದ  ಅಧಿವೇಶನ ನಡೆಯುತ್ತಿರುವುದರಿಂದ ಈಗಲೇ ಬಿಸಿ ಮುಟ್ಟಿಸಬೇಕು ಎಂದರು.

ಸಾಮಾಜಿಕ ಜಾಲತಾಣಗಳ ತುಂಬ ಪ್ರಗತಿವಾಹಿನಿ ಸದ್ದು

ಉದ್ಯಮಿ ಮಲ್ಲಿಕಾರ್ಜುನ ಜಗಜಂಪಿ, ವಿಟಿಯು ಒಡೆಯಲು ಹೊರಟಿರುವ ಸರಕಾರ ನಿರಂತರವಾಗಿ ನಮಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಹಾಗಾಗಿ ಉತ್ತರ ಕರ್ನಾಟಕವನ್ನು ನಮಗೆ ಕೊಟ್ಟು ಬಿಡಿ ಎನ್ನುವ ಹೋರಾಟ ಮಾಡಬೇಕು. ಕರ್ನಾಟಕ ರಾಜ್ಯ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ನಮ್ಮ ಮೇಲೆ ಶೋಷಣೆ ನಡೆಯುತ್ತಲೇ ಇದೆ. ಹಾಗಾಗಿ ನಾವು ಪ್ರತ್ಯೇಕ ರಾಜ್ಯವನ್ನೇ ಕೇಳಬೇಕು ಎಂದರು.

ನ್ಯಾಯವಾದಿ ರವಿರಾಜ ಪಾಟೀಲ, ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರನ್ನು ಭೇಟಿ ಮಾಡಬೇಕು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಈ ಭಾಗದ ಶಾಸಕರು ನೇತೃತ್ವ ವಹಿಸಬೇಕು ಎಂದರು.

ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜುವಳಿ, ಬೆಂಗಳೂರಿಗೆ ಹೋದರೆ ಮುಖ್ಯಮತ್ರಿಗಳಿಗೆ ನಮ್ಮೊಂದಿಗೆ ಮಾತನಾಡಲು ಸಮಯವಿರುವುದಿಲ್ಲ. ನಾವು ಇಲ್ಲೇ ಉಗ್ರ ಪ್ರತಿಭಟನೆ ಮಾಡಬೇಕು. ಮುಖ್ಯಮಂತ್ರಿಗಳನ್ನು ಇಲ್ಲೇ ಕರೆಸಬೇಕು. ಇನ್ನಷ್ಟು ಸಂಘಟಿತರಾಗಿ ನಾವು ಧ್ವನಿ ಎತ್ತಬೇಕು ಎಂದರು.

ಕ್ರೆಡೈ ಚೇರಮನ್ ಕ್ವಾಯೀಸ್ ನೂರಾನಿ, ವಿಟಿಯು ವಿಭಜಿಸಲು ಮುಂದಾದರೆ  ರಾಜ್ಯವನ್ನೇ ವಿಭಜಿಸುವಂತೆ ಕೇಳಬೇಕು. ನಮ್ಮ ಸೌಲಭ್ಯ ಕಿತ್ತುಕೊಳ್ಳುವುದಾದರೆ ನಮ್ಮ ರಾಜ್ಯ ನಮಗೆ ಕೊಡಲಿ ಎಂದರು.

ಉದ್ಯಮಿ ರೋಹಿತ್ ದೇಶಪಾಂಡೆ, ಹೋರಾಟದಲ್ಲಿ ವಿದ್ಯಾರ್ಥಿಗಳನ್ನೂ ಸೇರಿಸಿಕೊಳ್ಳಬೇಕು. ಎಲ್ಲರೂ ಸೇರಿ ದೊಡ್ಡ ಮಟ್ಟದ ಹೋರಾಟ ಮಾಡಬೇಕೆಂದರು.

ವೈದ್ಯೆ, ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್, ಎಲ್ಲ ಕಾಲೇಜುಗಳ ಬಂದ್ ಕರೆ ಕೊಡಬೇಕು, ಮಹಿಳಾ ಸಂಘಟನೆಗಳನ್ನೂ ಹೋರಾಟಕ್ಕೆ ಅಣಿಗೊಳಿಸಲಾಗುವುದು ಎಂದರು. 

ಚೆಂಬರ್ ಆಫ್ ಕಾಮರ್ಸ್ ಚೇರಮನ್ ಮಹೇಶ ಭಾಗಿ, ಪರಾಗ ಭಂಡಾರೆ, ಶಿವಕುಮಾರ ಖಡಬಡಿ, ಉದ್ಯಮಿ ವೈಭವ ವೆರ್ಣೇಕರ್, ರೋಟರಿ ಕ್ಲಬ್ ನ ಸತೀಶ್ ಕುಲಕರ್ಣಿ, ಎಲೆಕ್ಟ್ರಿಕಲ್ ಅಸೋಸಿಯೇಶನ್, ಮರ್ಚಂಟ್ಸ್ ಅಸೋಸಿಯೇಶನ್ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. 

ಕ್ರೆಡೈ ರಾಜ್ಯ ಉಪಾಧ್ಯಕ್ಷ ಚೈತನ್ಯ ಕುಲಕರ್ಣಿ ಸಭೆಯನ್ನು ಸಂಘಟಿಸಿ, ನಿರ್ದೇಶಿಸಿದರು. 

ಮಂಗಳವಾರ ಬೃಹತ್ ಸಭೆ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ವಿರೋಧಿಸಿ ಮಂಗಳವಾರ ಬೆಳಗ್ಗೆ 11.30ಕ್ಕೆ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಬೆಳಗಾವಿಯ ಎಲ್ಲ ಸಂಘಟನೆಗಳ, ವಿದ್ಯಾರ್ಥಿ ಪ್ರತಿನಿಧಿಗಳ ಸಭೆ ನಡೆಸಲು ನಿರ್ಧರಿಸಲಾಯಿತು. 

ಸಭೆಯಲ್ಲಿ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕು. ಯಾವುದೇ ಕಾರಣದಿಂದ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನಿರ್ಧರಿಸಲಾಯಿತು. ಎಲ್ಲ ಕಾಲೇಜುಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು, ವಿದ್ಯಾರ್ಥಿ ಪ್ರಮುಖರು, ಬೆಳಗಾವಿಯ ಎಲ್ಲ ಸಂಘಟನೆಗಳ ಪ್ರಮುಖರು ಭಾಗವಹಿಸಬೇಕು. ಮಠಾಧೀಶರನ್ನೂ ಆಹ್ವಾನಿಸಲಾಗುವುದು ಎಂದು ತಿಳಿಸಲಾಯಿತು. 

 

 

Related Articles

Back to top button