*ಶೋಷಿತ ಸಮುದಾಯಗಳ ಸಂಘಟನೆ ನಿರಂತರ ಪ್ರಕ್ರಿಯೆ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಪರಿಶಿಷ್ಟ ಪಂಗಡದಲ್ಲಿರುವ ವಾಲ್ಮೀಕಿ ನಾಯಕ ಸಮುದಾಯವೂ ಸೇರಿದಂತೆ ಎಲ್ಲ ತಳಸಮುದಾಯಗಳು ಸಂಘಟಿತರಾದರೆ ಮಾತ್ರ ಸಾಮಾಜಿಕ, ರಾಜಕೀಯ, ಆರ್ಥಿಕ ವಿಕಸನ ಸಾಧ್ಯ. ಸಂಘಟನೆ ಕಾರ್ಯ ಎಂಬುದು ನಿರಂತರ ಪ್ರಕ್ರಿಯೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಗಾಂಧಿನಗರದ ಸ್ಯಾಂಕ್ಟಮ್ ಹೋಟೇಲಿನ ಸಭಾಂಗಣದಲ್ಲಿ (ಮಂಗಳವಾರ, ಅಗಸ್ಟ್ 20) ಆಯೋಜಿಸಿದ್ದ ಪರಿಶಿಷ್ಟ ಪಂಗಡಗಳ ನೌಕರರು ಹಾಗೂ ಜನಪ್ರತಿನಿಧಿಗಳ ಸಮಾಲೋಚನೆ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಶೋಷಿತ ಸಮಾಜದಲ್ಲಿ ಶಿಕ್ಷಣ ಪಡೆದು ನೌಕರಿ ಮಾಡುತ್ತಿರುವ ಜನರ ಮೇಲೆ ಹೆಚ್ಚು ಜವಾಬ್ದಾರಿಗಳಿವೆ. ಪರಿಶಿಷ್ಟ ಪಂಗಡದ ನೌಕರರು ತಮ್ಮ ವೃತ್ತಿ ಸಂಬಂಧಿತ ಮುಂಬಡ್ತಿ,ವರ್ಗಾವಣೆ, ಸ್ಥಳ ನಿಯುಕ್ತಿ ಸೇರಿದಂತೆ ಅನೇಕ ವಿಷಯಗಳಲ್ಲಿ ಎದುರಿಸುತ್ತಿರುವ ಸಮಸ್ಯೆ ,ಸವಾಲುಗಳನ್ನು ಸಂಘಟಿತರಾದಾಗ ಪರಿಹಾರ ಕಂಡುಕೊಳ್ಳಲು ಮಾರ್ಗಗಳು ದೊರೆಯುತ್ತವೆ.ಕಾನೂನು ತಜ್ಞ ಎಲ್.ಜಿ.ಹಾವನೂರ ಹಾಗೂ ಅವರಿಗಿಂತ ಹಿಂದಿನಿಂದಲೂ ಸಮಾಜದ ಸಂಘಟನೆಗೆ ಅನೇಕರು ಶ್ತಮಿಸಿದ್ದಾರೆ.ಇದೊಂದು ನಿರಂತರ ಪ್ರಕ್ರಿಯೆ, ಪ್ರತಿಯೊಬ್ಬ ಪ್ರಜ್ಞಾವಂತರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಡಾ.ಪ್ರಸನ್ನಾನಂದ ಮಹಾಸ್ವಾಮಿಗಳು ಮಾತನಾಡಿ, ಆದಿಕವಿ ಮಹರ್ಷಿ ವಾಲ್ಮೀಕಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ನಾವೆಲ್ಲ ಅಳವಡಿಸಿಕೊಂಡು ಅನುಷ್ಠಾನಗೊಳಿಸಬೇಕು ಎಂದರು.
ಶಾಸಕರಾದ ಅನ್ನಪೂರ್ಣ ತುಕಾರಾಮ,ಕರೆಮ್ಮನಾಯಕ,ಅನೀಲ್ ಚಿಕ್ಕಮಾದು,ಟಿ.ರಘುಮೂರ್ತಿ,ಜೆ.ಎನ್.ಗಣೇಶ್ ,ಡಾ.ಎನ್.ಟಿ.ಶ್ರೀನಿವಾಸ ,ಚನ್ನಗಿರಿಯ ಮುಖಂಡ ಹೊದಿಗೆರೆ ರಮೇಶ ಮತ್ತಿತರರು ಮಾತನಾಡಿದರು.
ಕರ್ನಾಟಕ ರಾಜ್ಯ ಎಸ್ ಟಿ ನೌಕರರ ಸಂಘದ ಅಧ್ಯಕ್ಷ ಜಗದೀಶ್ವರಮೂರ್ತಿ ವೈ.ಪಿ.,ಲೋಕೇಶ ನಾಯಕ ,ಪಂಪಾಪತಿ ಮತ್ತಿತರರು ನೌಕರರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಈ ಕುರಿತು ಸಚಿವರಿಗೆ ಮನವಿ ಅರ್ಪಿಸಿದರು.
ವಾಲ್ಮೀಕಿ ನಾಯಕ ಜನಾಂಗದ ನಿವೃತ್ತ ಹಿರಿಯ ಅಧಿಕಾರಿಗಳು, ನ್ಯಾಯಾಧೀಶರು ಸೇರಿದಂತೆ ಪ್ರಸ್ತುತ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ನೌಕರರು ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದರು.
ಅನ್ನಪೂರ್ಣ ಪ್ರಾರ್ಥಿಸಿದರು, ಮಂಜುನಾಥ ಡೊಳ್ಳಿನ ಸ್ವಾಗತಿಸಿದರು,ಎ.ಸಿ.ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಗವಿಸಿದ್ದಪ್ಪ ಮುತ್ತಾಳ ನಿರೂಪಿಸಿದರು.