ಹುರಕಡ್ಲಿ ಅಜ್ಜನವರ ಪುಣ್ಯಾಶ್ರಮ ಅಭಿವೃದ್ಧಿಗೆ 5 ಕೋಟಿ ರೂ. ಯೋಜನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ
![](https://pragativahini.com/wp-content/uploads/2024/01/Navalgunda2.jpg)
![](https://pragativahini.com/wp-content/uploads/2024/01/Navalgunda1-1.jpg)
ಪ್ರಗತಿವಾಹಿನಿ ಸುದ್ದಿ, ನವಲಗುಂದ : ಇಲ್ಲಿಯ ಹುರಕಡ್ಲಿ ಅಜ್ಜನವರ ಪುಣ್ಯಾಶ್ರಮ ಅಭಿವೃದ್ಧಿಗೆ 5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿಕೊಟ್ಟರೆ ಮುಖ್ಯಮಂತ್ರಿಗಳಿಂದ ಅನುಮೋದನೆ ಕೊಡಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.
![](https://pragativahini.com/wp-content/uploads/2024/01/Navalgunda3.jpg)
ಮಂಗಳವಾರ ಹುರಕಡ್ಲಿ ಅಜ್ಜನವರ 34ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಾಸಕ ಕೋನರಡ್ಡಿಯವರು ಪುಣ್ಯಾಶ್ರಮ ಅಭಿವೃದ್ದಿ ಯೋಜನೆ ಸಿದ್ಧಪಡಿಸಿದರೆ ಖಂಡಿತ ನಾವೆಲ್ಲ ಸೇರಿ ಆ ಕಾರ್ಯವನ್ನು ನೆರವೇರಿಸುತ್ತೇವೆ. ಅಜ್ಜನವರು ನನ್ನಿಂದ ಈ ಕಾರ್ಯ ಆಗಬೇಕೆಂದು ಬಯಸಿದರೆ ಅದು ಖಂಡಿತ ನೆರವೇರುತ್ತದೆ. 5 ಕೋಟಿ ರೂ. ಮಿತಿಯಲ್ಲಿ ಖಂಡಿತ ಪುಣ್ಯಾಶ್ರಮ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಹುರಕಡ್ಲಿ ಅಜ್ಜನವರು ಸದಾ ದೇವಿಯ ಪಾರಾಯಣ ಮಾಡುತ್ತಿದ್ದರು. ದೇವಿ ಅವರಿಗೆ ಒಲಿದಿದ್ದಳು. ಯಾವ ಭೇದವಿಲ್ಲದೆ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ಅವರು ನೋಡುತ್ತಿದ್ದರು. ನಮ್ಮ ಕುಟುಂಬದವರು ಈ ಪುಣ್ಯಾಶ್ರಮಕ್ಕೆ ಸದಾ ನಡೆದುಕೊಳ್ಳುತ್ತೇವೆ. ಈ ಪುಣ್ಯ ಭೂಮಿಯಲ್ಲಿರುವ ಇಲ್ಲಿಯ ಜನರು ಭಾಗ್ಯವಂತರು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಡಾ.ನೀಲಮ್ಮ ತಾಯಿ ಅಸುಂಡಿ ಸಾನ್ನಿಧ್ಯವಹಿಸಿದ್ದರು. ಶಾಸಕ ಎನ್.ಎಚ್.ಕೋನರಡ್ಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸದಾನಂದ ಡಂಗನವರ್, ಬಿ.ಎಂ.ಹುರಕಡ್ಲಿ, ಎಂ.ಎಸ್.ಶಿರಿಯಣ್ಣವರ್, ಎ.ಎಸ್.ಬಾಗಿ ಮೊದಲಾದವರು ಇದ್ದರು.