Latest

9 ಮದುವೆಯಾಗಿ 10ನೇ ಮದುವೆಗೆ ಸಿದ್ಧಳಾಗಿದ್ದ ಮಹಿಳೆ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಬರೋಬ್ಬರಿ 9 ಮದುವೆಯಾಗಿದ್ದ ಮಹಿಳೆಯೊಬ್ಬಳು 10ನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಾಗ 9ನೇ ಪತಿಯೇ ಆಕೆಯನ್ನು ಹತ್ಯೆಗೈದು ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಪಹಾಡಿ ಶರೀಫ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ವರಲಕ್ಷ್ಮಿ (30) ಕೊಲೆಯಾದ ಮಹಿಳೆ. ಆರೋಪಿ ನಾಗರಾಜು ಎಂದು ಗುರುತಿಸಲಾಗಿದೆ. ಇದೀಗ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನಾಗರಾಜು ಕರ್ನೂಲ್ ಜಿಲ್ಲೆಯ ಜಲ್‍ಪಲ್ಲಿ ಮೂಲದವನಾಗಿದ್ದು, ಶ್ರೀರಾಮ ಕಾಲೋನಿಯಲ್ಲಿ ವಾಸಿಸುತ್ತಿದ್ದನು. ಈತ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಇತ್ತ ಮೃತ ವರಲಕ್ಷ್ಮಿ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಗೆ ಈಗಾಗಲೇ ಎಂಟು ಮದುವೆಯಾಗಿದ್ದು, 8ನೇ ಪತಿ ಮತ್ತು ಮಗನ ಜೊತೆ ವಾಸ ಮಾಡುತ್ತಿದ್ದಳು ಎಂದು ಎಸ್‍ಐ ಕುಮಾರಸ್ವಾಮಿ ತಿಳಿಸಿದ್ದಾರೆ.

ನಾಗರಾಜು ಮತ್ತು ವರಲಕ್ಷ್ಮಿ ಇಬ್ಬರಿಗೂ ಪರಿಚಯವಾಗಿ ಸ್ನೇಹವಾಗಿದೆ. ಸ್ನೇಹ ಪ್ರೀತಿಯಾಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಬಳಿಕ ವರಲಕ್ಷ್ಮಿ ನಾಗರಾಜುನನ್ನು ಮದುವೆಯಾಗಲು ಪತಿ ಮತ್ತು ಮಗನನ್ನು ಬಿಟ್ಟು ಬಂದಿದ್ದಳು. ಮದುವೆಯಾದ ಕೆಲವು ತಿಂಗಳುಗಳ ನಂತರ ಮತ್ತೆ ವರಲಕ್ಷ್ಮಿ ಇತರ ಪುರುಷರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ಬಗ್ಗೆ ತಿಳಿದ ಪತಿ ನಾಗರಾಜು ಪತ್ನಿಗೆ ಎಚ್ಚರಿಕೆ ನೀಡಿದ್ದ. ಇದೇ ವಿಚಾರಕ್ಕೆ ದಂಪತಿ ಮಧ್ಯೆ ಜಗಳವಾಗಿದೆ. ಜಗಳ ವಿಪರೀತಕ್ಕೆ ಹೋಗಿ ಕೋಪದಲ್ಲಿ ನಾಗರಾಜು ಚಾಕುವಿನಿಂದ ಪತ್ನಿಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಪಹಾಡಿ ಶರೀಫ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

Home add -Advt

Related Articles

Back to top button