ಶಿರಸಿ: 9 ಖತರ್‍ನಾಕ್ ಅಂತರ್ ಜಿಲ್ಲಾ ದರೋಡೆಕೋರರ ಬಂಧನ

ಪ್ರಗತಿ ವಾಹಿನಿ ಸುದ್ದಿ, ಶಿರಸಿ:
ಶಿರಸಿ ತಾಲೂಕಿನ ಬನವಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಅಂಡಗಿಯಲ್ಲಿ ಕಳೆದ ಅಕ್ಟೋಬರ್ 19ರಂದು ನಡೆದ ದರೋಡೆ ಪ್ರಕರಣದ 9 ಜನ ಅಂತರ ಜಿಲ್ಲಾ ದರೋಡೆಕೋರರನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 2 ಕಾರುಗಳು, ಮೊಬೈಲ್, ಜಿಪಿಎಸ್ ಟ್ರ್ಯಾಕರ್ ಹಾಗೂ 13,82,000 ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ.

ಬಂಧಿತರಿವರು
ಶಿವಮೊಗ್ಗ ಜಿಲ್ಲೆ ಸಾಗರದ ಆಸೀಫ ಅಬ್ದುಲ್ ಸತ್ತಾರ, ಮನ್ಸೂರ ಅಲಿಯಾಸ್ ಮಹಮ್ಮದ ಜಾಫರ ಖಾನ, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಅಬ್ದುಲ್ ಹಮೀದ ಅಬ್ದುಲ್ ಸತ್ತಾರ, ಅಜಿಮುಲ್ಲಾ ಅನ್ವರಸಾಬ, ಅಬ್ದುಲ್ ರೆಹಮಾನ ಶಬ್ಬೀರ ವಟರಾಗ, ಚಿಕ್ಕಮಗಳೂರು ಜಿಲ್ಲೆಯ ರಿಯಾಜ ಫಯಾಜ, ವಿಶ್ವನಾಥ ವಾಸು ಶೆಟ್ಟಿ, ಕೊಪ್ಪ, ಮನೋಹರ ಆನಂದ ಶೆಟ್ಟಿ ಕೊಪ್ಪ, ಇಕ್ಬಾಲ್ ಕೆ. ಎ ತೀರ್ಥಹಳ್ಳಿ.
ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶಿವಮೊಗ್ಗ ಜಿಲ್ಲೆಯ ತೀರ್ಥಳ್ಳಿ, ಸಾಗರ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಸಿದ್ದಾಪುರದಿಂದ ಬಂಧಿಸಲಾಗಿದೆ.

ಪ್ರಕರಣದ ಹಿನ್ನೆಲೆ
ಕಳೆದ ಅ.19ರಂದು ಸಂಜೆ ತನ್ನ ಇಬ್ಬರು ಸಂಬಂಧಿಗಳೊಂದಿಗೆ ಬೆಳಗಾವಿಯಲ್ಲಿ ಸೈಟ್ ಒಂದನ್ನು ನೋಡಿಕೊಂಡು ಕಾರಿನಲ್ಲಿ ವಾಪಸಾಗುತ್ತಿದ್ದ ಹಸನ್ ಜಾವೇದ್ ಖಾನ್ ಎಂಬುವವರು ಅಂಡಗಿ ಬಳಿ ಬರುತ್ತಿದ್ದಾಗ 5-6 ಜನ ಕೆಂಪು ಬಣ್ಣದ ಕಾರಿನಲ್ಲಿ ಬಂದು, ಅಡ್ಡ ಹಾಕಿದರು. ಬಳಿಕ ಆರೋಪಿಗಳು ಕೈಯಲ್ಲಿ ಚಾಕು, ರಾಡ್, ಪಿಸ್ತೂಲ್ ಹಿಡಿದುಕೊಂಡು ದಾಳಿ ಮಡಿದ್ದಾರೆ. ಹಸನ್ ಜಾವೇದ್ ಖಾನ್ ಜತೆಗಿದ್ದ ಮುಕ್ತಿಯಾರ ಎಂಬುವವನಿಗೆ ಎಡ ಕೈಗೆ ಮತ್ತು ಸೊಂಟದ ಎಡಭಾಗಕ್ಕೆ ಇರಿದಿದ್ದಾರೆ. ರಾಡ್‍ನಿಂದ ಮುಕ್ತಿಯಾರನಿಗೆ ಬಲಗೈ ತೋಳಿನ ಬಳಿ ಬಲವಾಗಿ ಹೊಡೆದು, ಒಬ್ಬ ವ್ಯಕ್ತಿ ಪಿಸ್ತೂಲ್ ತೋರಿಸಿ ಸಾಯಿಸಿ ಬಿಡುತ್ತೇನೆ ಎಂದು ಬೆದರಿಸಿ ಕಾರಿನ ಟಯರನ್ನು ಚಾಕುವಿನಿಂದ ಮುಂಬದಿಯ ಗಾಜನ್ನು ಒಡೆದಿದ್ದಾರೆ. ಬಳಿಕ ಹಸನ್ ಅವರ ಕಾರಿನ ಹಿಂಬದಿ ಸೀಟಿನ ಮೇಲಿದ್ದ 50 ಲಕ್ಷ ರೂಪಾಯಿ ಹಣವಿದ್ದ ಪ್ಲಾಸ್ಟಿಕ್ ಚೀಲವನ್ನು ಕಸಿದುಕೊಂಡು ತಮ್ಮ ಕೆಂಪು ಕಾರನ್ನು ಬನವಾಸಿಗೆ ಕಡೆಗೆ ಚಲಾಯಿಸಿಕೊಂಡು ಹೋಗಿದ್ದರು.
ಬಳಿಕ ಬನವಾಸಿ ಠಾಣೆಯಲ್ಲಿ ಹಸನ್ ಜಾವೇದ ಖಾನ್ ದೂರು ನೀಡಿದ್ದರು.
ಈ ಬಗ್ಗೆ ಉತ್ತರ ಕನ್ನಡ ಎಸ್‍ಪಿ ವಿಷ್ಣುವರ್ಧನ್, ಶಿರಸಿ ಡಿವೈಎಸ್‍ಪಿ ರವಿ ಡಿ. ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ ಅವರ ನೇತೃತ್ವದಲ್ಲಿ ಶೀಘ್ರವಾಗಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು.
9 ಆರೋಪಿಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇನ್ನೂ ಕೆಲ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.

ಶರಾವತಿ ನದಿಗೆ ಬಿದ್ದ ಪ್ರಯಾಣಿಕರ ಬಸ್

https://pragati.taskdun.com/bus-fallsharavati-riversigandurusagara/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button