
ಪ್ರಗತಿವಾಹಿನಿ ಸುದ್ದಿ : ರಾಷ್ಟ್ರೀಯ ಸ್ವಯಂಸೇವಕ ಸಂಘ ನೋಂದಣಿಯಾದ ಸಂಸ್ಥೆಯಲ್ಲಿ ಮತ್ತು ಭವಿಷ್ಯದಲ್ಲೂ ನೋಂದಣಿ ಮಾಡಿಸಿಕೊಳ್ಳುವುದಿಲ್ಲ ಎಂದು ಆರ್ಎಸ್ಎಸ್ ನೋಂದಣಿ, ಕಾನೂನುಬದ್ಧತೆ ಹಾಗೂ ಆದಾಯದ ಮೂಲಗಳ ಕುರಿತು ಗೃಹಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ್ದ ಪ್ರಶ್ನೆಗಳಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಯಾವುದೇ ಕಾಯ್ದೆ ಅಥವಾ ನಿಯಮದಡಿ ನೋಂದಣಿಯಾದ ಸಂಸ್ಥೆಯಲ್ಲ. ದೇಶಸೇವೆ ಮತ್ತು ಸಮಾಜ ಸೇವೆಯ ಮೂಲ ಧೈಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆಯನ್ನು ನೋಂದಾಯಿಸುವ ಅಗತ್ಯವಿಲ್ಲ ಹಾಗೂ ಮುಂದೆಯೂ ನೋಂದಾಯಿಸುವುದಿಲ್ಲ ಎಂದು ನೇರವಾಗಿ ಸಚಿವ ಖರ್ಗೆ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ.
ಅಲ್ಲದೇ, ನೀವು ರಜಾಕಾರರ ದಾಳಿಗೆ ಹೆದರಿ ಕಲಬುರಗಿಯಿಂದ ಓಡಿಬಂದಾಗ ನಿಮ್ಮನ್ನು ಕಾಪಾಡಿದವರು ಇದೇ ಆರೆಸೆಸ್ ಹುಡುಗರು ಎಂದು ಬಿ.ಎಲ್.ಸಂತೋಷ್ ಹೇಳಿದ್ದಾರೆ.
ಸಂಘದ ಶತಮಾನೋತ್ಸವದ ಹೊಸ್ತಿಲಿನಲ್ಲಿ ಆರ್ಎಸ್ಎಸ್ನ ಕಾನೂನಾತ್ಮಕ ಅಸ್ತಿತ್ವದ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಸೃಷ್ಟಿಯಾಗಿರುವ ಈ ವಾಗ್ದಾಳಿ, ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಂಘಟನೆಯೊಂದರ ನೋಂದಣಿ ಹಾಗೂ ಅದರ ಕಾರ್ಯವೈಖರಿಯ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಹರಿಹಾಯ್ದಿದ್ದರು. ಆರ್ಎಸ್ಎಸ್ ಸೂಕ್ತವಾಗಿ ನೋಂದಣಿಯಾಗಿಲ್ಲ ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದ ಸಚಿವರು, ಸಂಘಟನೆಯ ಹಣಕಾಸಿನ ಮೂಲಗಳು ಮತ್ತು ಕಾನೂನುಬದ್ಧ ಅಸ್ತಿತ್ವದ ಬಗ್ಗೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದರು. ಒಂದು ವೇಳೆ ಸಂಘಟನೆ ನೋಂದಣಿ ಮಾಡಿಕೊಳ್ಳದಿದ್ದರೆ ತಾವೇ ನೋಂದಣಿ ಶುಲ್ಕ ಪಾವತಿಸಿ ನೋಂದಾಯಿಸುವುದಾಗಿಯೂ ಹೇಳಿಕೆ ನೀಡಿದ್ದರು.




