
ಪ್ರಗತಿವಾಹಿನಿ ಸುದ್ದಿ: ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣದಲ್ಲಿ ಶಿವಾನಂದ ನೀಲಣ್ಣನವರ್ನನ್ನು ಜಾರಿ ನಿರ್ದೇಶನಾಲಯ-ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಮಂಗಳೂರು ವಲಯ ಇಡಿ ಅಧಿಕಾರಿಗಳು ನೀಲಣ್ಣನರ್ನನ್ನು ಬಂಧಿಸಿದ್ದಾರೆ. ಮಂಗಳೂರು ಇಡಿ ವಿಶೇಷ ನ್ಯಾಯಾಲಯ ಆರೋಪಿಯನ್ನು ಆ.24ರವರೆಗೆ 12 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಇಡಿ ತನಿಖೆಯ ವೇಳೆ ಹಲವು ವಿಚಾರ ಬಯಲಾಗಿದ್ದು, ಶಿವಾನಂದ ನೀಲಣ್ಣವರ್ ಕಂಪನಿಯ ಹಣದ ವ್ಯವಹಾರದ ಮುಖ್ಯ ವ್ಯಕ್ತಿಯಾಗಿದ್ದು, ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ, ಛತ್ತೀಸ್ಗಢದಾದ್ಯಂತ ಹೂಡಿಕೆ ಸಂಗ್ರಹ ಮಾಡಿದ್ದಾನೆ. ಪೋಂಜಿ ಶೈಲಿ ಸ್ಕೀಮ್ ಮೂಲಕ 2,110.97 ಕೋಟಿ ರೂ. ಅಕ್ರಮವಾಗಿ ಸಂಗ್ರಹಿಸಲಾಗಿದೆ. ಆದರೆ ಒಂದು ಭಾಗದಷ್ಟು ಮಾತ್ರ ಹಣ ಮರುಪಾವತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶಿವಂ ಅಸೋಸಿಯೇಟ್ಸ್ ಸಂಸ್ಥೆಯು 2019 ರಿಂದ ಷೇರು ಮಾರುಕಟ್ಟೆಯಲ್ಲಿ ತೀವ್ರ ನಷ್ಟವನ್ನು ಅನುಭವಿಸಿದೆ. ಈ ನ್ಯೂನತೆ ಮರೆಮಾಚಲು ಮತ್ತು ಮಾರುಕಟ್ಟೆಯ ಆಕರ್ಷಣೆ ಉಳಿಸಿಕೊಳ್ಳಲು, ಹೂಡಿಕೆದಾರರಿಂದ ಸಂಗ್ರಹಿಸಲಾದ ಹೊಸ ಮೂಲ ಠೇವಣಿ ಹಣವನ್ನು ಹಿಂದಿನ ಹೂಡಿಕೆದಾರರಿಗೆ ನೀಡಬೇಕಾದ ಬಡ್ಡಿ ನೀಡಲು ಬಳಸಲಾಗಿದೆ.
ಅಕ್ರಮ ಬಂಡವಾಳವನ್ನು ವೈಯಕ್ತಿಕ ಐಷಾರಾಮಿ ವಾಹನಗಳ ಖರೀದಿಗೆ, ದೊಡ್ಡ ಬಂಗಲೆಗಳನ್ನು ನಿರ್ಮಿಸಲು ಪಾಲುದಾರರ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸಲು, ಚಲನಚಿತ್ರ ನಿರ್ಮಾಣಗಳಿಗೆ ವರ್ಗಾಯಿಸಲು ಹಣ ಬಳಸಲಾಗಿದೆ. ಇಂತಹ ದುರುಪಯೋಗದ ಹಣವನ್ನು “ಅಪರಾಧದ ಆದಾಯ” ಎಂದು ಗುರುತಿಸಲಾಗಿದೆ.




