*ಸದನದಲ್ಲಿ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿಯನ್ನು ಹಾಡಿ ಹೊಗಳಿದ ಸಿಎಂ ಡಿ.ಕೆ.ಶಿವಕುಮಾರ್*

ಬಂಗಾರಪ್ಪ ಅವರು ನುಡಿದ ಭವಿಷ್ಯ ನಿಜವಾಗಿದೆ ಎಂದ ಸಿಎಂ
ಪ್ರಗತಿವಾಹಿನಿ ಸುದ್ದಿ: “ನನಗೆ ರಾಜ್ಯದ ಜನರ ಸೇವೆ ಮಾಡಲು ಅನೇಕ ಕನಸುಗಳಿವೆ. ಈ ಕನಸುಗಳನ್ನು ಈಡೇರಿಸಲು ನೀವೆಲ್ಲರೂ ಸಹಕಾರ ನೀಡಿ. ರಾಜಕಾರಣ ಹೊರಗೆ ಮಾಡೋಣ. ಇಲ್ಲಿ ಸೇವೆ ಮಾಡೋಣ. ರಾಜ್ಯದ ಯಶಸ್ಸಿಗೆ ಒಟ್ಟಾಗಿ ನಡೆಯೋಣ. ಜನರು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳೋಣ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಪರಿಷತ್ ನಲ್ಲಿ ಶುಕ್ರವಾರ ಮಾತನಾಡಿದರು.
“ಈ ಹಿಂದೆ ಆಡಳಿತ ನಡೆಸಿದ ಅನೇಕರ ಸಾಕ್ಷಿಗುಡ್ಡೆಗಳನ್ನು ಅಳಿಸಲು ಆಗುತ್ತದೆಯೇ? ಎಲ್ಲರೂ ಸೇರಿ ಇತಿಹಾಸ ನಿರ್ಮಾಣ ಮಾಡೋಣ. ಅಧಿಕಾರ ಶಾಶ್ವತವಲ್ಲ. ಇಂದು ಬರುತ್ತದೆ, ನಾಳೆ ಹೋಗುತ್ತದೆ. ನಾವು ಮಾಡಿದ ಸಾಧನೆ ಮಾತ್ರ ಸಾಕ್ಷಿಗುಡ್ಡೆಯಾಗಿ ಉಳಿಯುತ್ತದೆ. ಜನರು ನಮ್ಮನ್ನು ನೆನಪಿಟ್ಟುಕೊಳ್ಳುವುದು ಅಧಿಕಾರದಿಂದಲ್ಲ, ನಾವು ಮಾಡಿದ ಕೆಲಸದಿಂದ” ಎಂದರು.
“ಬಿಜೆಪಿ, ಕಾಂಗ್ರೆಸ್ ನಲ್ಲಿ ಇದ್ದವರು ಈಗ ಅಂದರ್ ಬಾಹರ್ ಆಗಿದ್ದಾರೆ. ಅಧಿಕಾರ ಹೇಗೆಂದು ಅಳೆಯಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರನ್ನು ಪಕ್ಷೇತರರು ಸೇರಿ ಮುಖ್ಯಮಂತ್ರಿ ಮಾಡಿದರು. ಅಧಿಕಾರದ ಆಟ ಸಾಕಷ್ಟು ನಡೆಯಿತು. ಅಂತಿಮವಾಗಿ ಉಳಿದದ್ದು ಅಧಿಕಾರವಲ್ಲ. ಮನುಷ್ಯತ್ವ. ಮಾಡಿದ ಕೆಲಸ” ಎಂದರು.
ಬಂಗಾರಪ್ಪ ಅವರು ನುಡಿದ ಭವಿಷ್ಯ ನಿಜವಾಗಿದೆ
“ಬಂಗಾರಪ್ಪ ಅವರು ಧರಂಸಿಂಗ್ ಅವರ ಬಳಿಯಿದ್ದ ಬಂಧೀಖಾನೆ ಖಾತೆಯನ್ನು ನನಗೆ ನೀಡಿದರು. ಆಗ ಅವರು ನಾನೂ ಈ ಖಾತೆ ನಿರ್ವಹಿಸಿ ಈಗ ಸಿಎಂ ಆಗಿದ್ದೀನಿ. ನೀನೂ ಒಂದಲ್ಲ ಒಂದು ದಿನ ಸಿಎಂ ಆಗುವೆ ಎಂದಿದ್ದರು. ಈಗ ಅವರ ಭವಿಷ್ಯ ನಿಜವಾಗಿದೆ ನಾನು ಮಾನವೀಯತೆ ನಂಬುತ್ತೇನೆ. ನನ್ನ ಗುರುಗಳು ನನಗೆ ಇದನ್ನೇ ಹೇಳಿಕೊಟ್ಟಿದ್ದಾರೆ. ಮಾನ ಧರ್ಮಕ್ಕೆ ಜಯವಾಗಲಿ. ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ನಾನು ಒಕ್ಕಲಿಗನಾದರೂ ನಂಬುವುದು ರಂಭಾಪುರಿ ಶ್ರೀಗಳನ್ನು” ಎಂದು ಹೇಳಿದರು.
“ಈ ರಾಜ್ಯದ ಜನರ ಆಶೀರ್ವಾದ, ಪಕ್ಷದ ವರಿಷ್ಠರ ತೀರ್ಮಾನದಿಂದ, ನಮ್ಮ ಪಕ್ಷದ ಶಾಸಕರಿಂದ, ನಾನು ನಂಬಿದ ಗುರುಪೀಠ, ಮಠ, ಸರ್ವಧರ್ಮದ ಗುರುಗಳು ಹಾಗೂ ನನ್ನ ಪರವಾಗಿ ನಿಂತ, ಹರಕೆ ಕಟ್ಟಿದ ಜನರ ಪ್ರಾರ್ಥನೆಯಿಂದ ಸಿಎಂ ಸ್ಥಾನವನ್ನು ಅಲಂಕರಿಸಿದ್ದೇನೆ. ನಾನು ಈಗ ಜನರ ಪ್ರತಿನಿಧಿ. ನಾವೆಲ್ಲರೂ ಸೇರಿ ರಾಜ್ಯದ ಜನರ ಸೇವೆಯನ್ನು ಮಾಡೋಣ” ಎಂದರು.
“ಇಂದು ದುಃಖ ಮತ್ತು ಸಂತೋಷ ಎರಡೂ ಸಂದರ್ಭದಲ್ಲಿ ನಾವು ನಿಂತಿದ್ದೇವೆ. ಬಸರಾಜ ಹೊರಟ್ಟಿ ಅವರು ಬಹಳ ಘನತೆಯಿಂದ ವಿಧಾನಪರಿಷತ್ತನ್ನು ನಡೆಸಿಕೊಟ್ಟು ಮಾದರಿಯಾಗಿದ್ದಾರೆ. ಅವರು ನಮಗೆಲ್ಲಾ ಕೃತಜ್ಞತೆ ಸಲ್ಲಿಸಬೇಕು ಎಂದು ಆಸೆಪಟ್ಟಿದ್ದರು. ಆದರೆ ಪರಿಸ್ಥಿತಿಯ ನಿರ್ಣಯ ಬೇರೆಯೇ ಇತ್ತು. ಈಗ ಆ ಘಟನೆಯನ್ನು ಮರೆಯೋಣ” ಎಂದರು.
ಇತಿಹಾಸ ನೆನಪಿಸಿಕೊಂಡ ಸಿಎಂ
“ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಾಗ ಬಳಸಿಕೊಳ್ಳಬೇಕು. ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿಸಿದರು. ಆಗ ಇದನ್ನು ಖೈದಿಗಳು ಕಟ್ಟಿದರು. ಒಂದು ದಿನ ಕಟ್ಟಡ ಕಾಮಗಾರಿ ವೀಕ್ಷಣೆಗೆ ಬಂದ ಕೆಂಗಲ್ ಹನುಮಂತಯ್ಯ ಅವರ ಮೇಲೆ ಖೈದಿಗಳು ಸಿಟ್ಟಿನಿಂದ ಚಪ್ಪಲಿ ಎಸೆದಿದ್ದು ಇತಿಹಾಸ. ಇಷ್ಟೆಲ್ಲ ಆಗಿ, ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಅವರಿಗೇ ಇಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗಲಿಲ್ಲ. ಕೆಂಪೇಗೌಡರು ಬೆಂಗಳೂರು ಕಟ್ಟಿದರು, ಹನುಮಂತಯ್ಯನವರು ವಿಧಾನಸೌಧ ಕಟ್ಟಿದರು, ನೀವು ಅವರಂತೆಯ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂದು ಎಸ್ ಎಂ ಕೃಷ್ಣ ಅವರಲ್ಲಿ ಚರ್ಚೆ ನಡೆಸಿದೆ. ಅದರ ಫಲವೇ ಈ ವಿಕಾಸಸೌಧ. ವಿಕಾಸಸೌಧದ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಅವರಿಗೆ ಕುರ್ಚಿ ಮೀಸಲಿಡಲಾಗಿತ್ತು. ಆ ಕುರ್ಚಿ ಮೇಲೆ ಲೋಕೋಪಯೋಗಿ ಸಚಿವರಾಗಿದ್ದ ಧರಂಸಿಂಗ್ ಅವರನ್ನು ಕೂರಿಸಿದರು. ಆಗ ನನಗೆ ಭವಿಷ್ಯ ಕಣ್ಣ ಮುಂದೆ ಬಂದಿತು. ನಂತರ ಧರ್ಮಸಿಂಗ್ ಅವರೇ ಮುಖ್ಯಮಂತ್ರಿಯಾದರು” ಎಂದು ಇತಿಹಾಸ ನೆನಪಿಸಿಕೊಂಡರು.
“8 ಸಲ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಬಂಗಾರಪ್ಪ, ಎಸ್ ಎಂ ಕೃಷ್ಣ, ಸಿದ್ದರಾಮಯ್ಯ ಅವರುಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಜೆ.ಎಚ್ ಪಟೇಲ್ ಅವರಷ್ಟು ಅತ್ಯಂತ ಹೃದಯ ವೈಶಾಲ್ಯತೆಯಿದ್ದ ನಾಯಕರನ್ನು ಇಂದಿಗೂ ನೋಡಿಲ್ಲ. ಬೊಮ್ಮಾಯಿ ಅವರ ಆಡಳಿತ ಹಾಗೂ ಅವರನ್ನು ಅಧಿಕಾರದ ಕುರ್ಚಿಯಿಂದ ಇಳಿಸಿದ್ದನ್ನು ಕಣ್ಣಾರೆ ನೋಡಿದ್ದೇನೆ. ಬಂಗಾರಪ್ಪ ಅವರ ಕಾಲದಲ್ಲಿ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿ ಬಂತು. ಈಗಲೂ ಅಂದು ಮುಂದುವರಿದಿದೆ. ಆಗ 1 ಸಾವಿರ ಕೋಟಿ ಮೀಸಲಿಡಲಾಗಿತ್ತು. ಈಗ ಅದು 20 ಸಾವಿರ ಕೋಟಿಯಾಗಿದೆ. ಬಂಗಾರಪ್ಪ ಅವರು ಇಂದು ಬದುಕಿಲ್ಲ. ಅವರು ಜಾರಿ ಮಾಡಿದ ಯೋಜನೆ ಜೀವಂತವಾಗಿದೆ. ವೀರಪ್ಪ ಮೊಯ್ಲಿ ಅವರು ಸಿಇಟಿ ಪ್ರಾರಂಭ ಮಾಡಿದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದರು. ಇಂದು ಕರ್ನಾಟಕ ಈ ದೇಶಕ್ಕೆ ಎಂಜಿನಿಯರ್, ಡಾಕ್ಟರ್ ಗಳನ್ನು ನೀಡಿದ ರಾಜ್ಯವಾಗಿದೆ’ ಎಂದು ಬಣ್ಣಿಸಿದರು.
ವಿಧಾನಸ ಸೌಧ ಕಟ್ಟಿಸಿದ ಹನುಮಂತಯ್ಯನವರು ವಿಧಾನಸೌಧದಲ್ಲಿ ಕೂರಲಿಲ್ಲ
“ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿಸಿದರು. ಆಗ ಇದನ್ನು ಖೈದಿಗಳು ಕಟ್ಟಿದರು. ಒಂದು ದಿನ ಕಟ್ಟಡ ಕಾಮಗಾರಿ ವೀಕ್ಷಣೆಗೆ ಬಂದ ಕೆಂಗಲ್ ಹನುಮಂತಯ್ಯ ಅವರ ಮೇಲೆ ಖೈದಿಗಳು ಸಿಟ್ಟಿನಿಂದ ಚಪ್ಪಲಿ ಎಸೆದಿದ್ದರು. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಅವರಿಗೇ ಈ ಇಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗಲಿಲ್ಲ” ಎಂದರು.
“ಇತಿಹಾಸಗಳು ಬೇಕಾದಷ್ಟು ಸಂದರ್ಭಗಳನ್ನು ಸೃಷ್ಟಿಸುತ್ತವೆ. ವೀರೇಂದ್ರ ಪಾಟೀಲರ ಆಡಳಿತ, ದೇವರಾಜ ಅರಸು ಅವರು ಹೊಸ ನಾಯಕರನ್ನು ಹುಟ್ಟು ಹಾಕಿದರು. ಯುವಕರಿಗೆ ಪ್ರೋತ್ಸಾಹ ನೀಡಿದರು. ಆ ರೀತಿಯ ಅವಕಾಶ ಸೃಷ್ಟಿ ಮಾಡಿದ ನಾಯಕರನ್ನು ನಾನು ನೋಡಿಲ್ಲ. ಗುಂಡೂರಾವ್ ಅವರ ಆಡಳಿತ ದಿಟ್ಟ ನಿರ್ಧಾರಗಳು ಮಾದರಿ. ರಾಮಕೃಷ್ಣ ಹೆಗಡೆ ಅವರದ್ದು ಪರಿಶುದ್ದ ಆಡಳಿತಗಾರರು. ಬೊಮ್ಮಾಯಿ ಅವರ ಆಡಳಿತ ಹಾಗೂ ಅವರನ್ನು ಅಧಿಕಾರದ ಕುರ್ಚಿಯಿಂದ ಇಳಿಸಿದ್ದನ್ನು ಕಣ್ಣಾರೆ ನೋಡಿದ್ದೇನೆ” ಎಂದು ಹೇಳಿದರು.
ಮಣ್ಣಿನ ಮಗ ಬಿರುದು ಸುಮ್ಮನೆ ಬಂದಿಲ್ಲ; ದೇವಗೌಡರನ್ನು ಹೊಗಳಿದ ಸಿಎಂ
“ಮಾಜಿ ಪ್ರಧಾನಿ ದೇವೇಗೌಡರಿಗೆ ಮಣ್ಣಿನ ಮಗ ಎನ್ನುವ ಬಿರುದು ಸುಮ್ಮನೆ ಬಂದಿಲ್ಲ. ಅವರು ನಾಡಿನ ರೈತರ ಪರವಾಗಿ ಅಪಾರ ಹೋರಾಟ ಮಾಡಿದ್ದಾರೆ. ಅನೇಕ ನೀರಾವರಿ ಯೋಜನೆಗಳನ್ನು ರೂಪಿಸಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಮೇಲ್ಸೇತುವೆ ನಿರ್ಮಾಣ ಮಾಡಿದ್ದು ಕೂಡ ಅವರೇ. ಕುಮಾರಸ್ವಾಮಿ ಹಾಗೂ ನಮ್ಮ ನಡುವೆ ರಾಜಕೀಯ ವೈರುಧ್ಯ ಇರಬಹುದು. ಆದರೆ, ಅವರ ಪೆರಿಫೆರಲ್ ರಿಂಗ್ ರಸ್ತೆ, ಬಿಡದಿ ಸೇರಿದಂತೆ 5 ಟೌನ್ ಶಿಪ್ ನಿರ್ಮಾಣದಂಥ ಯೋಜನೆಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ಬೆಂಗಳೂರಿನ ಬೆಳವಣಿಗೆಗೆ ಅವರ ಅಪಾರ ಕೊಡುಗೆ. ಫೆರಿಫೆರಲ್ ರಿಂಗ್ ರೋಡ್ -2 ಯೋಜನೆ ರೂಪಿಸಿದರು. ಅವರಿಗೆ ಸಮಯದ ಅಭಾವವೋ, ತೊಡಕುಗಳು ಎದುರಾಯಿತೋ ಏನೋ ಯೋಜನೆ ಜಾರಿ ಮಾಡಲಾಗಲಿಲ್ಲ” ಎಂದರು.
ಕುಮಾರಸ್ವಾಮಿ ಅವರ ಬಿಡದಿ ಟೌನ್ ಶಿಪ್ ಉತ್ತಮ ಯೋಜನೆ
ತಮ್ಮ ಭಾಷಣದ ಉದ್ದಕ್ಕೂ ಬಿಡದಿ ಟೌನ್ ಶಿಪ್ ಯೋಜನೆಯ ಬಗ್ಗೆ ಅಲ್ಲಲ್ಲಿ ಪ್ರಸ್ತಾಪಿಸಿದ ಸಿಎಂ “ಇದು ಉತ್ತಮ ಯೋಜನೆ” ಎಂದರು. ಆದರೆ ಈಗ ಕೆಲವು ಒತ್ತಡಗಳಿಂದ ಕುಮಾರಸ್ವಾಮಿ ಅವರು ರಾಜಕೀಯ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲಾ ನಾನು ಬೇಸರಿಸಿಕೊಳ್ಳುವುದಿಲ್ಲ” ಎಂದರು ಜೊತೆಗೆ ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ಆಗಿದ್ದ 1 ಸಾವಿರ ಎಕರೆ ಕೈಗಾರಿಕಾ ಪ್ರದೇಶದ ಬಗ್ಗೆಯೂ ಪ್ರಸ್ತಾಪಿಸಿದರು. ದೇವೇಗೌಡರ ನೈಸ್ ರಸ್ತೆ ಯೋಜನೆ ಅತ್ಯುತ್ತಮ” ಎಂದು ಹೊಗಳಿದರು
“ಬೆಂಗಳೂರು ಬೆಳೆಯುತ್ತಿದೆ. ಈಶಾನ್ಯ ಭಾರತದ ಜನ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಬೆಂಗಳೂರಿಗೆ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿರುವ ಜನಕ್ಕೆ ಮೂಲಸೌಕರ್ಯಗಳನ್ನು ಹೇಗೆ ನೀಡುವುದು. ಹೀಗೆ ಹೊಸ ನಗರಗಳನ್ನು ನಿರ್ಮಾಣ ಮಾಡದೇ ಹೋದರೆ ಅವಕಾಶ ನೀಡುವುದು ಹೇಗೆ?
“ಪಿಜಿಆರ್ ಸಿಂದ್ಯಾ ಕಾಲದಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶ, ದೇವೇಗೌಡರ ಕಾಲದಲ್ಲಿ ಬಿಡದಿ, ವೀರಪ್ಪಮೊಯ್ಲಿ ಅವರ ಕಾಲದಲ್ಲಿ ಎಲೆಕ್ಟ್ರಾನಿಕ್ ಸಿಟಿ, ಪೀಣ್ಯ ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ಆಯಿತು. ವೀರೇಂದ್ರ ಪಾಟೀಲ್ ಅವರಿಗೆ ಬುದ್ದಿ ಇರಲಿಲ್ಲವೇ?
“ಸುಳ್ಳಿಗೂ ಸತ್ಯಕ್ಕೂ ಅಂತರ ಕೇವಲ ನಾಲ್ಕು ಬೆರಳು. ಕಿವಿಯಲ್ಲಿ ಕೇಳಿದ್ದು ಸತ್ಯವಲ್ಲ. ಕಣ್ಣಲ್ಲಿ ನೋಡಿದ್ದು ಸತ್ಯ. ಎಸ್ ಎಂ ಕೃಷ್ಣ ಅವರ ನೀಲಿ ಕಣ್ಣಿನ ಹುಡುಗ ನಾನಾಗಿದ್ದೆ. ಆದರೂ ಅವರಲ್ಲಿಯೇ ನನ್ನ ಮೇಲೆ ಸಹೋದ್ಯೋಗಿಗಳೇ ಚಾಡಿ ಹೇಳುತ್ತಿದ್ದರು” ಎಂದು ಹೇಳಿದರು.
ಸಭಾಧ್ಯಕ್ಷ ಸಲೀಂ ಅವರ ಬಗ್ಗೆ ಹೆಮ್ಮೆಯಿದೆ
“ಶೇಷಾದ್ರಿಪುರಂ ಕಾಲೇಜು ಚುನಾವಣೆಯಲ್ಲಿ ಸಲೀಂ ಸ್ಪರ್ಧಿಸಿದ್ದರು. ಆಗ ಅವರು ಕುದುರೆಮೇಲೆ ಕುಳಿತು ಕೈಯಲ್ಲಿ ಹೂ ಹಿಡಿದು ಎಲ್ಲರಿಗೂ ನೀಡುತ್ತಿದ್ದರು. ನಾನು “ಏನಯ್ಯಾ ಹುಡುಗಿಯರಿಗೆ ಹೂ ನೀಡುವಂತೆ ಎಲ್ಲರಿಗೂ ಹೂ ನೀಡುತ್ತಿದ್ದೀಯಾ?” ಎಂದೆ. ಆ ಕಾಲೇಜು ಚುನಾವಣೆಯಲ್ಲಿ ಗೆದ್ದರು. ಈಗ ಬಹಳ ಹೆಮ್ಮೆಯಾಗುತ್ತಿದೆ. ಇಂದು ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಾರೆ. ಈ ಸ್ಥಾನದಲ್ಲಿ ಕುಳಿತ ಅನೇಕರು ಮುಖ್ಯಮಂತ್ರಿಗಳಾಗಿದ್ದಾರೆ. ಹಣೆಬರಹದ ಬಗ್ಗೆ ಹೇಳಲು ಆಗುವುದಿಲ್ಲ. ಇಲ್ಲಿಗೆ ರಾಜಕಾರಣ ಮುಗಿಯಿತು ಎಂದು ತಿಳಿಯಬೇಡಿ. ಇಂತಹ ಇಳಿವಯಸ್ಸಿನಲ್ಲೂ ದೇವೆಗೌಡರು ಛಲ ಬಿಡದೆ ಹೋರಾಟ ಮಾಡುತ್ತಿದ್ದಾರೆ” ಎಂದರು.
ನಿಮ್ಮದು ಯಾವ ನೀತಿ? ನನ್ನದು ಧರ್ಮರಾಯನ ಧರ್ಮತ್ವ
“ಜೀವನದಲ್ಲಿ ಯಶಸ್ಸು ಸಿಗಬೇಕಾದರೆ. ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನ ಗುರಿ ಇರಬೇಕು, ವಿಧುರನ ನೀತಿ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು” ಎಂದ ಸಿಎಂ ಗೆ ಪ್ರತಿಪಕ್ಷದವರು ಈ ಮಾತನ್ನು ಯತೀಂದ್ರ ಅವರನ್ನು ನೋಡಿ ಹೇಳುತ್ತಿದ್ದೀರಿ ಎಂದು ಕಾಲೆಳೆದಾಗ,
“ನಾನು ಯತೀಂದ್ರ ಅವರನ್ನು ನೋಡೀ ವಿಧುರನ ನೀತಿ ಎಂದು ಹೇಳಿದೆ. ವಿಧುರನ ನೀತಿಯೂ ಬಹಳ ಮುಖ್ಯ” ಎಂದರು. ಆಗ ನಿಮ್ಮದು ಯಾವ ನೀತಿ ಎಂದು ಪ್ರತಿಪಕ್ಷದವರು ಕೇಳಿದಾಗ, “ನನ್ನದು ಧರ್ಮರಾಯನ ಧರ್ಮತ್ವ. ದಾನಶೂರ ಕರ್ಣನ ದಾನತ್ವ, ಅರ್ಜುನನ ಗುರಿ ಹೀಗೆ ಎಲ್ಲಾ ಗುಣ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ” ಎಂದು ಪುನರುಚ್ಚರಿಸಿದರು.
“ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಪರಿಚಯಿಸುವಾಗ ಯತೀಂದ್ರ ಅವರ ಹೆಸರನ್ನು ಹೇಳಿ, “ನಮ್ಮ ಹೊಸ ಹೀರೋ. ನಮ್ಮ ನಾಯಕ” ಎಂದು ಸಿಎಂ ಬೆನ್ನುತಟ್ಟಿದರು.
ಸಿಎಸ್ ಆರ್ ದುರ್ಬಳಕೆಗೆ ಕಡಿವಾಣ
“8 ಸಾವಿರ ಕೋಟಿ ಸಿಎಸ್ ಆರ್ ಅನುದಾನವಿದೆ. ಎಲ್ಲವೂ ದುರ್ಬಳಕೆಯಾಗುತ್ತಿದೆ. ಶೇ.50ರಷ್ಟು ಮೊತ್ತ ವಾಪಸ್ಸು ಪಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ರಾಜ್ಯದ ಪ್ರತಿಯೊಬ್ಬರಿಗೂ ಒಳ್ಳೆಯ ಶಿಕ್ಷಣ, ಉದ್ಯೋಗ ವ್ಯವಸ್ಥೆ ಮಾಡುವ ಗುರಿಯೊಂದಿಗೆ, ಈ ಸಿಎಸ್ ಆರ್ ಅನುದಾನವನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಹೊಸ ಸಿಎಸ್ ಆರ್ ಯೋಜನೆ ಜಾರಿ ಮಾಡಲು ಸರ್ಕಾರ ಮುಂದಾಗಿದೆ” ಎಂದು ಸದನಕ್ಕೆ ವಿವರಿಸಿದರು.
“ಹಳ್ಳಿಯ ಜನರು ತುತ್ತು ಅನ್ನಕ್ಕಾಗಿ ವಲಸೆ ಹೋಗಬಾರದು ಹಾಗೆಯೇ, ಬೆಂಗಳೂರು ಜನತೆ ಹೊರಗೆ ಹೋಗಬಾರದು. ಅದಕ್ಕಾಗಿ ಪಂಚಾಯಿತಿ ಮಟ್ಟದಲ್ಲೇ ಕಂಪನಿಗಳೇ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಿಎಸ್ ನಿಧಿಯನ್ನು ಬಳಸಿ ಅಭಿವೃದ್ಧಿಗೊಳಿಸುವ ಹೊಸ ನೀತಿಯನ್ನು ರೂಪಿಸುತ್ತಿದ್ದೇವೆ” ಎಂದರು.



