*ತಾಳಗುಪ್ಪಾ- ಹುಬ್ಬಳ್ಳಿ ರೈಲು ಮಾರ್ಗಕ್ಕೆ ಮುಖ್ಯಮಂತ್ರಿಗೆ ವಿನಂತಿಸಿದ ಕಾಗೇರಿ*

ಪ್ರಗತಿ ವಾಹಿನಿ ಸುದ್ದಿ, ಶಿರಸಿ: ತಾಳಗುಪ್ಪಾ -ಹುಬ್ಬಳ್ಳಿ ರೈಲ್ವೇ ಮಾರ್ಗ ಆಗಲು ಮುಖ್ಯಮಂತ್ರಿಗಳ ಸಹಕಾರ ಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ವಿನಂತಿಸಿದ್ದಾರೆ.
ಶಿರಸಿಯಲ್ಲಿ ಭಾನುವಾರ ಸಾರ್ವಜನಿಕರಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಮತ್ತಿತರ ಗಣ್ಯರಿಣದ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಕಾಗೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ವೈವಿದ್ಯಮಯವಾದ ಕೃಷಿ ಬೆಳೆಗಳಿಗೆ ಆದರೆ ಸೂಕ್ತ ಸಾಗಾಣಿಕೆ ವ್ಯವಸ್ಥೆ ಇಲ್ಲ. ಅಲ್ಲದೇ ಜನ ಸಂಚಾರಕ್ಕೂ ಸೂಕ್ತ ವ್ಯವಸ್ಥೆ ಬೇಕಿದೆ.
ಜಿಲ್ಲೆಯಲ್ಲಿ ಭಟ್ಕಳದ ಮಲ್ಲಿಗೆಯಿಂದ ಹಿಡಿದು ಅಡಕೆಯವರೆಗೆ ವಿವಿಧ ಕೃಷಿ ಬೆಳೆಗಳಿವೆ. ಹಾಗಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ತಾಳಗುಪ್ಪಾ-ಹುಬ್ಬಳ್ಳಿ ರೈಲ್ವೇ ಮಾರ್ಗ ಅತ್ಯಗತ್ಯವಾಗಿದೆ. ಈ ರೈಲ್ವೇ ಮಾರ್ಗ ಒದಗಿಸಬೇಕು ಎಂದು ವಿನಂತಿಸಿದರು.
ಜನರ ಋಣ ದೊಡ್ಡದು
ಮೊದಲು ಅಂಕೋಲಾ ವಿಧಾನಸಭಾ ಕ್ಷೇತ್ರ ಈಗ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಜನ ನನ್ನನ್ನು ಆರಿಸಿ ತರುತ್ತಿದ್ದಾರೆ. ಕ್ಷೇತ್ರದ ಜನರ ಋಣ ದೊಡ್ಡದು. ನಿಮಗೆ ಕೃತಜ್ಞನಾಗಿದ್ದೇನೆ. ಕುಟುಂಬದ ಸಹಕಾರ, ಸಮಾಜದ ಸಹಕಾರ ಅನನ್ಯ ಎಂದರು.
ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತನಾಗಿ ಬೆಳೆದು ಬಂದವನು. 1994ರಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಹಿರಿಯರ ಮಾರ್ಗದರ್ಶನ , ಆಶೀರ್ವಾದದಿಂದ ಬೆಳೆದು ಬಂದಿದ್ದೇನೆ. ಯಾವ ವಿಚಾರಕ್ಕೆ ಬದ್ಧತೆ ಇದೆಯೋ ಅದು ಪ್ರತಿ ಕ್ಷಣದಲ್ಲಿ ಪ್ರಕಟವಾಗಬೇಕು ಎಂದರು.
ವಿಧಾನಸಭಾ ಅಧ್ಯಕ್ಷ ಜವಾಬ್ದಾರಿ ನಿಭಾಯಿಸುವುದನ್ನು ನೀವು ನೋಡಿದ್ದೀರಿ. ಇದೇ ರೀತಿ ಹೆಸರು ಹೇಳಿದವರಷ್ಟೇ ಮಾತಾಡುವ ವ್ಯವಸ್ಥೆ ಸದನದಲ್ಲೂ ಇದ್ದಿದ್ದರೆ ಒಳ್ಳೆಯದಿತ್ತು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇಂದು ಮುಖ್ಯಮಂತ್ರಿಗಳು ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ 250 ಕೋಟಿ ರೂ. ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದಾರೆ. ಮುಕ್ತಾಯಗೊಂಡ ಕಾಮಗಾರಿ ಉದ್ಘಾಟನೆ ಮಾಡಿದ್ದಾರೆ. ಅವರಿಗೆ ಕ್ಷೇತ್ರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪರಿಸರ ವಿವಿ ಘೋಷಣೆಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಮಕೃಷ್ಣ ಹೆಗಡೆ ಅಧ್ಯಯನ ಪೀಠ ಕರ್ನಾಟಕ ವಿವಿಯಲ್ಲಿ ಮಾಡಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಅವರ ನಿರ್ಧಾರಕ್ಕೆ ಅಭಿನಂದನೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರು ಆಶೀರ್ವಾದ ಪೂರ್ವಕ ಸಂದೇಶ ಕಳಿಸಿದ್ದಾರೆ. ಅನೇಕ ಮಠಾಧೀಶರು ಆಶೀರ್ವಚನ ನೀಡಿದ್ದಾರೆ ಎಂದು ಕಾಗೇರಿ ಸ್ಮರಿಸಿದರು.
ಕಾಗೇರಿ ಗಾಡ್ ಫಾದರ್ ಇಲ್ಲದೇ ಮೇಲೆ ಬಂದವರು: ಮುಖ್ಯಮಂತ್ರಿ ಬೊಮ್ಮಾಯಿ




