
ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ನೀತಿ ಸಂಹಿತೆ ಗಾಳಿಗೆ ತೂರಿ ಪರವಾನಗಿ ಇಲ್ಲದೆ ನಡೆಸಿದ ಸಭೆಯನ್ನು ಚುನಾವಣಾ ಅಧಿಕಾರಿಗಳು ಮೊಟಕುಗೊಳಿಸಿದ್ದಾರೆ.
ಸ್ಥಳೀಯ ಗುರುರಾಜ ಕಲ್ಯಾಣ ಮಂಟಪದಲ್ಲಿ ರೇಣುಕಾಚಾರ್ಯ ಅವರು ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ಭಾಷಣ ಮುಂದುವರಿಸಿದ್ದರು. ಕಳೆದ ಐದು ವರ್ಷಗಳ ಸಾಧನೆಯನ್ನು ಹೇಳಿಕೊಳ್ಳುತ್ತಿದ್ದರು. ಆದರೆ ನೀತಿ ಸಂಹಿತೆ ಜಾರಿಯಿದ್ದರೂ ಈ ಸಭೆಗೆ ರೇಣುಕಾಚಾರ್ಯರು ಪರವಾನಗಿ ಪಡೆದಿರಲಿಲ್ಲ.
ಈ ವಿಷಯ ತಿಳಿದ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಆಗಿನ್ನೂ ರೇಣುಕಾಚಾರ್ಯರ ಭಾಷಣ ಮುಂದುವರಿದಿತ್ತು. ಭಾಷಣ ನಿಲ್ಲಿಸುವಂತೆ ಅಧಿಕಾರಿಗಳು ಕೇಳಿಕೊಂಡರೂ ರೇಣುಕಾಚಾರ್ಯರು ಕಿವಿಗೊಡಲಿಲ್ಲ. ಕೊನೆಗೆ ರೇಣುಕಾಚಾರ್ಯರು ಹಿಡಿದಿದ್ದ ಮೈಕ್ ಗೇ ಕೈ ಹಾಕಿದಾಗ ಇಬ್ಬರ ಮಧ್ಯೆ ಕಿತ್ತಾಟ ಶುರುವಾಯಿತು.
ಕೊನೆಗೂ ಅನಧಿಕೃತ ಸಭೆಗೆ ಹೊಗೆಹಾಕಿದ ಚುನಾವಣಾ ಆಯೋಗದ ಅಧಿಕಾರಿಗಳು ರೇಣುಕಾಚಾರ್ಯ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಪೂರಕವಾದ ವಿಡಿಯೊ ಸಾಕ್ಷ್ಯಾಧಾರಗಳನ್ನು ಸಹ ದಾಖಲಿಸಿದ್ದಾರೆ.