Kannada NewsKarnataka NewsLatestPolitics

*ಜೈನ ಮುನಿ ಕೊಲೆ ಪ್ರಕರಣ; ಸಿಬಿಐ ತನಿಖೆಗೆ ಆಗ್ರಹಿಸಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಧರಣಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ಜೈನ ಮುನಿ ಹತ್ಯೆ ಪ್ರಕರಣದ ಕುರಿತು ಶೂನ್ಯ ವೇಳೆಯಲ್ಲಿ ನಡೆದ ಚರ್ಚೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ನೀಡಿದ ಉತ್ತರ ಖಂಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು.

ಧರಣಿಗೂ ಮೊದಲು ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೈನ ಮುನಿ ಕೊಲೆಗೂ ಬೇರೆ ಕೊಲೆಗೂ ಹೋಲಿಕೆ ಮಾಡುವುದು ಸರಿಯಲ್ಲ. ಯಾರಿಗೂ ಹಿಂಸೆ ಬಯಸದ ಜೈನ ಮುನಿಗಳನ್ನು ಕರೆಂಟ್ ಶಾಕ್ ಕೊಟ್ಟು ಹತ್ತೆ ಮಾಡಿರಬೇಕೆಂದರೆ ಇದರ ಹಿಂದೆ ಷಡ್ಯಂತರ ಇದೆ‌. ಈ ಪ್ರಕರಣದಲ್ಲಿ ಅವರು ಕೊಂದು ಇಷ್ಟೊಂದು ತುಂಡು ಮಾಡಿ ಕೊಳವೆ ಬಾವಿಯಲ್ಲಿ ಹಾಕುವಷ್ಟು ಸಮಯ ಇದ್ದರೆ ಅವರು ಎಷ್ಟು ಪೂರ್ವ ನಿಯೋಜಿತ ಯೋಜನೆ ರೂಪಿಸಿದ್ದರು ಎನ್ನುವುದಕ್ಕೆ ಸಾಕ್ಷಿ ಎಂದು ಹೇಳಿದರು.

ಈ ಪ್ರಕರಣದಲ್ಲಿ ಯಾರನ್ನೋ ರಕ್ಷಣೆ ಮಾಡುವ ಪ್ರಯತ್ನ‌ ನಡೆಸಿದ್ದೀರಿ ಎನ್ನುವ ಅನುಮಾನ ಮೂಡುತ್ತಿದೆ. ಪ್ರಕರಣವನ್ನು ಸಿಬಿಐಗೆ ಕೊಡುವುದರಿಂದ ರಾಜ್ಯ ಪೊಲಿಸರ ಘನತೆ ಏನು ಕಡಿಮೆ ಆಗುವುದಿಲ್ಲ. ಅನೇಕ ಪ್ರಕರಣಗಳನ್ನು ಹಿಂದೆ ಸಿಬಿಐಗೆ ಕೊಟ್ಟಿದ್ದಾರೆ. ಈ ಪ್ರಕರಣ ಸಿಬಿಐಗೆ ಕೊಡುವುದರಿಂದ ಏನು ಕಳೆದುಕೊಳ್ಳುವುದಿದೆ. ಸಿಬಿಐಗೆ ಕೊಡದಿದ್ದರೆ ಅನುಮಾನ ಹುಟ್ಟುತ್ತದೆ. ನೀವು ಸಿಪಿಐ, ಇನ್ಸ್ ಪೆಕ್ಟರ್ ನಿಂದ ತನಿಖೆ ಮಾಡಿಸಲು ಬಯಸುತ್ತಿದ್ದೀರಿ ಇದರ ವಿರುದ್ದ ಪ್ರತಿಭಟನೆ ನಡೆಸುತ್ತೇವೆ ಎಂದು ಸದನದ ಬಾವಿಗಿಳಿದು ಧರಣಿ ನಡೆಸಿದರು.

ಆರೋಪಿಗಳ ಮೇಲೆ ಕ್ರಮಣಕ್ಕೆ ಆಗ್ರಹ:
ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ವೇಣುಗೋಪಾಲ ಎನ್ನುವ ವ್ಯಕ್ತಿಯನ್ನು ಬರ್ಬರ ಹತ್ಯೆ ಮಾಡಲಾಗಿದೆ ಹಂತಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಹನುಮ ಜಯಂತಿ ಕಾರ್ಯಕ್ರಮದಲ್ಲಿ ಅವಕಾಶ ನೀಡಲಿಲ್ಲಿ ದೇವರ ಫೋಟೊ ಜಾಗದಲ್ಲಿ ಪುನಿತ್ ರಾಜಕುಮಾರ್ ಫೋಟೊ ಇಡುವ ಕುರಿತು ಮಣಿಕಂಠ, ವೇಣುಗೋಪಾಲ ನಡುವೆ ಗಲಾಟೆಯಾಯಿತು. ಮಾರನೇ ದಿನ ಮಾತುಕತೆ ಮಾಡಲು ಕರೆಯಿಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೊಗುವಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಇಷ್ಟು ಸಣ್ಣ ವಿಚಾರಕ್ಕೆ ಕೊಲೆಯಾಗಿದ್ದರೆ ಇದು ಆಘಾತಕಾರಿ , ಧಾರ್ಮಿಕ ಆಚರಣೆಗಳು ನಿರಂತರ ನಡೆಯುತ್ತವೆ. ಈ ರೀತಿಯ ಕೊಲೆಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಇದರಲ್ಲಿ ಯಾರೇ ಇದ್ದರೂ ಅವರ ವಿರುದ್ದ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಈ ರೀತಿಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಪೊಲಿಸರು ಇನ್ನೂ ಯಾರನ್ನೂ ಬಂಧಿಸಿಲ್ಲ. ಆದರೆ ಮೆಲಧಿಕಾರಿಗಳು ಆರೋಪಿಗಳ ಹೆಸರುಗಳನ್ನು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಸಕಲೇಶಪುರ, ಕಲಬುರ್ಗಿ, ನಂಜನಗೂಡಿನಲ್ಲಿ ಹಲವು ಪ್ರಕರಣಗಳು ನಡೆದಿವೆ. ಇಂತಹ ಪ್ರಕರಣಗಳನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button