Kannada NewsKarnataka NewsLatest

*6 ತಿಂಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್*

ವಿಚ್ಛೇದನ ನೀಡಲು ಒಪ್ಪದ ಪತ್ನಿ ಹತ್ಯೆಗೆ ಪತಿಯಿಂದ ಸ್ಕೆಚ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಚ್ಛೇದನ ನೀಡಲು ಒಪ್ಪದ ಪತ್ನಿಯನ್ನು ಕೊಲೆಗೈದು ಅಪಘಾತ ಎಂದು ಬಿಂಬಿಸಲು ಹೊರಟಿದ್ದ ಆರೋಪಿ ಪತಿ ಹಾಗೂ ಆತನ ಸ್ನೇಹಿತನನ್ನು ಬೆಂಗಳೂರಿನ ಬಾಗಲೂರಿನ ಪೊಲೀಸರು ಬಂಧಿಸಿದ್ದಾರೆ.

6 ತಿಂಗಳ ಹಿಂದೆ ನಡೆದಿದ್ದ ಗರ್ಭಿಣಿ ಅಪಘಾತ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಒಂದುವರೆ ವರ್ಷಗಳ ಹಿಂದೆ ಅರವಿಂದ್ ಹಾಗೂ ಚೈತನ್ಯ ವಿವಾಹವಾಗಿದ್ದರು. ಆದರೆ ಬರಬರುತ್ತಾ ಪತಿ-ಪತ್ನಿ ನಡುವೆ ಮನಸ್ತಾಪ ಆರಂಭವಾಗಿದೆ. ಪತ್ನಿ ಗರ್ಭಿಣಿ ಎಂಬುದನ್ನೂ ನೋಡದೇ ವಿಚ್ಛೇದನ ನೀಡುವಂತೆ ಅರವಿಂದ್ ಪೀಡಿಸುತ್ತಿದ್ದ. ಆದರೆ ಚೈತನ್ಯ ವಿಚ್ಛೇದನ ನೀಡಲು ನಿರಾಕರಿಸಿದ್ದಳು.

ಇದೇ ಕಾರಣಕ್ಕೆ ಪತ್ನಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ತನ್ನ ಸ್ನೇಹಿತ ಉದಯ್ ಜೊತೆ ಸೆರಿ ಅಪಘಾತದಲ್ಲಿ ಪತ್ನಿ ಸಾಯಿಸಲು ತೀರ್ಮಾನಿಸಿ ಹಳೇ ಟಾಟಾ ಸುಮೋ ಕಾರನ್ನು ಖರೀದಿ ಮಾಡಿದ್ದ.

ಸಿಸಿ ಕ್ಯಾಮರಾ ಇಲ್ಲದ ಸ್ಥಳದಲ್ಲಿ ಅಪಘಾತ ಮಾಡುವ ಬಗ್ಗೆ ಪ್ಲಾನ್ ರೂಪಿಸಿದ್ದ. ಬಾಗಲೂರಿನ ಕೆಐಡಿಬಿ ಲೇಔಟ್ ನಲ್ಲಿ ಭರತನಾಟ್ಯ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಪತ್ನಿ ಚೈತನ್ಯ ಬೈಕ್ ಗೆ ಕಾರನ್ನು ಗುದ್ದಿ ಅಪಘಾತ ಮಾಡಿದ್ದ. ಈ ವೇಳೆ ಕಾರಿನಲ್ಲಿ ಪತಿ ಅರವಿಂದ್ ಕೂಡ ಇದ್ದ. ಅಪಘಾತದ ಬಳಿಕ ಕಾರು ಚಾಲಕ, ಅರವಿಂದ್ ಸ್ಥಳದಿಂದ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಟ್ರಾಫಿಕ್ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.

ಅಪಘಾತ ಪ್ರಕರಣದಲ್ಲಿ ಅನುಮಾನಗೊಂಡ ಪೊಲೀಸರು ಬಾಗಲೂರು ಪೊಲೀಸರಿಗೆ ಪ್ರಕರಣ ವರ್ಗಾವಣೆ ಮಾಡಿದ್ದರು. ಅಪಗಾತಕ್ಕೀಡಾದ ಕಾರು ಗ್ಯಾರೇಜ್ ನಲ್ಲಿ ಪತ್ತೆಯಾದಾಗ ಕಾರಿನ ಮಾಲೀಕನನ್ನು ಪೊಲೀಸರು ವಿಚಾರಿಸಿದ್ದಾರೆ. ಬಳಿಕ ಚಾಲಕ ಉದಯ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ವಿಚ್ಛೇದನ ನೀಡಲು ಪತ್ನಿ ಒಪ್ಪದ ಕಾರಣಕ್ಕೆ ಆಕೆ ಹತ್ಯೆ ಮಾಡಲು ಪ್ಲಾನ್ ಮಾಡಿರುವುದು ಬಯಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button