Kannada NewsKarnataka News

*ಅತಿಥಿಗೃಹದಲ್ಲಿ ಸಾಮಗ್ರಿ ನಾಪತ್ತೆ: ರೋಹಿಣಿ ಸಿಂಧೂರಿ ವೇತನಕ್ಕೆ ಕತ್ತರಿ*

ಪ್ರಗತಿವಾಹಿನಿ ಸುದ್ದಿ: ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಸಿಂಧೂರಿ ವಾಸವಿದ್ದ ಅತಿಥಿ ಗೃಹದಲ್ಲಿ ಸಾಮಗ್ರಿಗಳು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅವರ ವೇತನದಲ್ಲಿಯೇ ಮೊತ್ತವನ್ನು ಕಡಿತ ಗೊಳಿಸುವಂತೆ ಸರಕಾರದ ಕಾರ್ಯದರ್ಶಿಗೆ ಆಡಳಿತ ತರಬೇತಿ ಸಂಸ್ಥೆ (ಎಟಿಐ) ಮನವಿ ಮಾಡಿದೆ. 

ಅತಿಥಿ ಗೃಹದಲ್ಲಿ ಕಾಣೆಯಾಗಿರುವ ಸಾಮಗ್ರಿಗಳ ಮೊತ್ತ ಸುಮಾರು 77,296 ರೂ. ಗಳನ್ನು ರೋಹಿಣಿ ಸಿಂಧೂರಿ ಅವರ ವೇತನದಲ್ಲಿದ್ದ ಕಡಿತಗೊಳಿಸಿ ಡಿಡಿ ಮೂಲಕ ಮೈಸೂರಿನ ಆಡಳಿತ ತರಬೇತಿ ಮಹಾನಿರ್ದೇಶಕರ ಸಂಸ್ಥೆ ಹೆಸರಿಗೆ ಕಳುಹಿಸುವಂತೆ ಸಂಸ್ಥೆಯ ಜಂಟಿ ನಿರ್ದೇಶಕರು ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಏನಿದು ಪ್ರಕರಣ..?

ರೋಹಿಣಿ ಸಿಂಧೂರಿ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ವರ್ಗವಾಗಿ ಬಂದ ನಂತರ 2020 ಅಕ್ಟೋಬರ್ 2ರಿಂದ ನವೆಂಬರ್ 14ರ ತನಕ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಅತಿಥಿ ಗೃಹದಲ್ಲಿ ವಾಸ್ತವ್ಯ ಇದ್ದರು. ಅತಿಥಿಗೃಹವನ್ನು ತೆರವುಗೊಳಿಸಿದಾಗ ಅಲ್ಲಿದ್ದ ಬೆಲೆಬಾಳುವ ವಸ್ತುಗಳು ಇರಲಿಲ್ಲ. 

ಇದರಿಂದಾಗಿ ರೋಹಿಣಿ ಸಿಂಧೂರಿ ಅವರು ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿಗೆ ಮೂರು ಬಾರಿ ಪತ್ರ ಬರೆಯಲಾಗಿತ್ತು. ಇದಕ್ಕೆ “ಜಿಲ್ಲಾಧಿಕಾರಿಗಳ ವಸತಿ ಗೃಹದಲ್ಲಿ ಯಾವುದೇ ಸಾಮಗ್ರಿಗಳು ಇರುವುದಿಲ್ಲ”ಎಂದು ಉತ್ತರಿಸಲಾಗಿತ್ತು. ಸಿಂಧೂರಿ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯಲ್ಲಿ ಆಯುಕ್ತರಾಗಿದ್ದಾಗಲೂ ಸಂಸ್ಥೆಗೆ ನಷ್ಟ ಪಾವತಿಸಲು ಸೂಚಿಸಲಾಗಿತ್ತು. ಸಾಮಗ್ರಿ ನಾಪತ್ತೆ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಶಾಸಕ ಸಾ.ರಾ. ಮಹೇಶ್ ಅವರು ವಿಧಾನಸಭಾ ಕಲಾಪದಲ್ಲಿಯೂ ವಿಷಯ ಪ್ರಸ್ತಾಪಿಸಿದ್ದರು. ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದರು. ಇದೀಗ ನಾಪತ್ತೆಯಾಗಿರುವ ವಸ್ತುಗಳ ಮೌಲ್ಯ ವಸೂಲಿ ಮಾಡುವ ಪ್ರಕ್ರಿಯೆ ಚುರುಕುಗೊಂಡಿದೆ.

ಯಾವ್ಯಾವ ವಸ್ತು ನಾಪತ್ತೆ..?

ಟೆಲಿಫೋನ್ ಟೇಬಲ್, ಕೋಟ್ ಹ್ಯಾಂಗರ್, ಬ್ಲಾಂಕೆಟ್, ಮೈಕ್ರೋ ಒವನ್, ಬೆತ್ತದ ಕುರ್ಚಿಗಳು, ಹಾಸಿಗೆ, ಕಂಪ್ಯೂಟರ್ ಮೌಸ್, ಟ್ರೇ, ಯೋಗಾ ಮ್ಯಾಟ್, ಪ್ಲೇಟ್, ಟಿಪಾಯಿ, ಟೆಲಿಫೋನ್ ಸ್ಕೂಲ್, ರಿಸೆಷ್ಟನ್ ಟೆಲಿಫೋನ್, ಮಂಚ, ಸ್ಟೋಲ್‌ಗಳು ಸೇರಿದಂತೆ ವಿವಿಧ ಸಾಮಗ್ರಿಗಳು ನಾಪತ್ತೆಯಾಗಿವೆ. ಇದರ ಒಟ್ಟು ಮೌಲ್ಯ 77,296 ರೂ. ಎಂದು ಅಂದಾಜಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button