
ಪ್ರಗತಿವಾಹಿನಿ ಸುದ್ದಿ: ರಾಜ್ಯಪಾಲರ ಭಾಷಣದಲ್ಲಿ ಸಾಂಪ್ರದಾಯಿಕವಾಗಿ ಸರ್ಕಾರದ ಸಾಧನೆಗಳನ್ನು ಸದನದ ಮುಂದಿಡುವ ಭಾಷಣವಿರುತ್ತದೆ. ಕೆಲವರು ಟೀಕಿಸಿದ್ದಾರೆ, ಹಲವರು ವಾಸ್ತವಿಕವಾಗಿ ಮಾತನಾಡಿದ್ದಾರೆ, ಕೆಲವರು ಸಮರ್ಥಿಸಿದ್ದಾರೆ, ಕೆಲವರು ವಿರೋಧಿಸಲೆಂದೇ ವಿರೋಧಿಸಿ ಮಾತನಾಡಿದ್ದಾರೆ. ಅವರೆಲ್ಲರ ಸಲಹೆ ಸೂಚನೆಗಳನ್ನು ಸರ್ಕಾರ ಸ್ವಾಗತಿಸಿ, ಸರ್ಕಾರದ ನಿಲುವನ್ನು ಸದನಕ್ಕೆ ತಿಳಿಸಿ ವಂದನಾ ನಿರ್ಣಯವನ್ನು ಅಂಗೀಕಾರ ಮಾಡಬೇಕೆಂದು ವಿನಂತಿಸುತ್ತೇನೆ.
ವಿರೋಧ ಪಕ್ಷದ ನಾಯಕರಾದಿಯಾಗಿ 14 ಜನ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರು ಮಾತನಾಡಿದ್ದಾರೆ. ರಾಜ್ಯಪಾಲರು ಒಂದು ಗಂಟೆಗೂ ಮೀರಿ ಸುದೀರ್ಘವಾಗಿ ಮಾತನಾಡಿ ಸರ್ಕಾರದ ಸಾಧನೆಗಳನ್ನು ಓದಿ ಹೇಳಿದ್ದಾರೆ. ವಾಸ್ತವವನ್ನು ಸದನಕ್ಕೆ ತಿಳಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ವಾಸ್ತವಾಂಶಗಳನ್ನು ಸದನದ ಸದಸ್ಯರಿಗೆ ತಿಳಿಸುತ್ತೇನೆ.
ನಮ್ಮ ಸರ್ಕಾರ ಜನರ ಆಶೀರ್ವಾದದಿಂದ 2023 ಮೇ 22 ರಂದು ಅಧಿಕಾರಕ್ಕೆ ಬಂದಿತು. ನಮ್ಮ ಪಕ್ಷ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದು 2 ವರ್ಷಗಾಳಾಗುತ್ತಿದೆ. ಇದು ಸರ್ಕಾರ ಬಂದ ನಂತರ ರಾಜ್ಯಪಾಲರ ಎರಡನೇ ಭಾಷಣ.
ಅಧಿಕಾರಕ್ಕಾಗಿ ಅಧಿಕಾರ ಮಾಡುವುದಲ್ಲ. ಜನರ ಕಲ್ಯಾಣಕ್ಕೆ ಅಧಿಕಾರ ಬಳಕೆಯಾಗಬೇಕು ಎನ್ನುವ ಕಾಳಜಿಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇವೆಲ್ಲವೂ ವಾಸ್ತವ ಕಾರ್ಯಕ್ರಮಗಳಾಗಿರುವುದರಿಂದ ರಾಜ್ಯಪಾಲರು ಶ್ಲಾಘಿಸಿದ್ದಾರೆ. ಸದನದ ಚರ್ಚೆಗಳು ಬಸವಣ್ಣ ಹೇಳಿದಂತೆ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನುವಂತಿರಬೇಕು. ಸದನದಲ್ಲಿ ಮಾತನಾಡಿದರೆ ಜನರ ಅಭಿರುಚಿಯನ್ನು ಹೆಚ್ಚಿಸಬೇಕು. ವಿದ್ಯಾವಂತರು ಸದನಕ್ಕೆ ಬರುತ್ತಿರುವುದರಿಂದ ಚರ್ಚೆ ಅರ್ಥ ಪೂರ್ಣ, ಆರೋಗ್ಯಕರವಾಗಿರಬೇಕು. ಜನರೂ, ಸದನವೂ ಇದನ್ನೇ ನಿರೀಕ್ಷಿಸುತ್ತದೆ.
ಅಶೋಕ್ ಹಾಗು ಸುನೀಲ್ ಕುಮಾರ್ ಅವರು ಮಾತನಾಡುವಾಗ ಕರಿಮಣಿ ಮಾಲೀಕ ಯಾರು ಎಂದು ಪ್ರಶ್ನಿಸಿದ್ದಾರೆ. ನನ್ನ ಹಾಗು ಬಹುತೇಕ ಸದಸ್ಯರ ಪ್ರಕಾರ ಇದು ಅರ್ಥಹೀನ ಮಾತುಗಳು. ನಾನು ಹಿರಿಯ ಸದಸ್ಯರಿಂದ ಇಂಥ ಮಾತುಗಳನ್ನು ನಿರೀಕ್ಷೆ ಇರಲಿಲ್ಲ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕರಿಮಣಿ ಮಾಲೀಕ ಯಾರು ಎನ್ನುವುದು ಕೀಳು ಅಭಿರುಚಿಯ ಪ್ರಯೋಗ.
ನಿಮ್ಮ ಪಕ್ಷದಲ್ಲಿ ಭಿನಾಭಿಪ್ರಯಗಳಿಲ್ಲವೇ? ನಿಮ್ಮ ಭಿನ್ನಾಭಿಪ್ರಾಯಗಳು ಯಾವ ಮಟ್ಟಕ್ಕೆ ಹೋಗಿವೆ ಎಂಬ ಚರ್ಚೆ ಬೇಡ. ಅಭಿರುಚಿ ಹೀನ ಎಂದಷ್ಟೇ ಹೇಳಿದ್ದೇನೆ. ನಿಮಗೆ ಸರಿಯಿದ್ದರೆ ಓಕೆ. ಜನ ಅಂತಿಮವಾಗಿ ತೀರ್ಮಾನ ಮಾಡುತ್ತಾರೆ.
ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸದನಕ್ಕೆ ದೊಡ್ಡ ಸುಳ್ಳು ಹೇಳಿದ್ದಾರೆ. ಆರ್.ಎಸ್.ಎಸ್ ಬೈಠಕ್ ನಲ್ಲಿದ್ದಾರೋ, ಸದನದಲ್ಲಿದ್ದಾರೋ ಗೊತ್ತಿಲ್ಲ. ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಕೇಂದ್ರ ಸರ್ಕಾರ 2 ಸಾವಿರ ಕೋಟಿ ಕೊಟ್ಟಿದೆ. ಕರ್ನಾಟಕ ನೀರಾವರಿ ನಿಗಮಕ್ಕೆ 3300 ಕೋಟಿ, ವಿಶ್ವೇಶ್ವರ ಜಲನಿಗಮ ಸೇರಿ ಕರ್ನಾಟಕ ನೀರಾವರಿಗೆ ಒಟ್ಟು 10 ಸಾವಿರ ಕೋಟಿ ರೂಪಾಯಿ ರಾಜ್ಯದ ನೀರಾವರಿ ನಿಗಮಕ್ಕೆ ಕೊಟ್ಟಿದೆ ಎಂದು ಹೇಳಿದ್ದಾರೆ. ಮಾಹಿತಿ ಕೊರತೆಯೋ ಉದ್ದೇಶಪೂರ್ವಕ ಟೀಕೆಗಾಗಿ ಹೇಳಿದ್ದಾರೋ ಗೊತ್ತಿಲ್ಲ. ವಾಸ್ತವ ಏನೆಂದರೆ 24-1-2025 ರಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸ್ಕೀಂ ಆಫ್ ಸ್ಪೆಶಲ್ ಅಸಿಸ್ಟೆನ್ಸ್ ಕೊಟ್ಟಿದ್ದು, 50 ವರ್ಷಗಳ ಕಾಲ ಬಡ್ಡಿ ರಹಿತವಾಗಿ ವಿಶೇಷ ನೆರವು ನೀಡಿದೆ. ಮುಳವಾಡ ಏತ ನೀರಾವರಿಗೆ ₹200 ಕೋಟಿ, ಮಹಾಲಕ್ಷ್ಮಿ ಮಲಪ್ರಭಾ ಯೋಜನೆಗೆ ₹200 ಕೋಟಿ, ಭ್ರದಾ ಮೇಲ್ದಂಡೆಗೆ 300 ಕೋಟಿ ಒಟ್ಟು ₹1,030 ಕೋಟಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಕೊಟ್ಟಿರುವುದು ನಮ್ಮ ಪಾಲಿನ ಅನುದಾನವಲ್ಲ. ಬದಲಿಗೆ ಅವರು ಕೊಟ್ಟಿರುವುದು ಬಡ್ಡಿ ರಹಿತ ಸಾಲ ಮಾತ್ರ. ವಿರೋಧಪಕ್ಷದವರಿಗೆ ಮಾತನಾಡಲು ಏನೂ ಸಿಗದೆ ಸುಳ್ಳು ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ.
ನಮ್ಮ ಕಾರ್ಯಕ್ರಮಗಳನ್ನು ವಿಶೇಷವಾಗಿ ಗ್ಯಾರಂಟಿ ಯೋಜನೆಗಳನ್ನು ಮಾಧ್ಯಮಗಳು, ಜನರು, ವಿಶ್ವವಿದ್ಯಾನಿಲಯಗಳು, ವಿದ್ವಾಂಸರು ಶ್ಲಾಘಿಸಿದ್ದಾರೆ. ಕ್ಯಾಮರೂನ್ ದೇಶದ ಸುಲೇಮಾನ್ ಹ್ಯಾಂಕ್, ವಿಶ್ವಸಂಸ್ಥೆ ಜನರಲ್ ಬಾಡಿ ಅಧ್ಯಕ್ಷರು ಗ್ಯಾರಂಟಿಗಳನ್ನು ಒಪ್ಪಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ.
ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳು ಗ್ಯಾರಂಟಿಗಳನ್ನು ಶ್ಲಾಘಿಸಿ ಬರೆದಿರುವುದು ಸದನದ ಗಮನದಲ್ಲಿದ್ದರೂ ಬಿಜೆಪಿಯವರು ಸುಳ್ಳು ಹೇಳಿದ್ದಾರೆ.
2020 ರಲ್ಲಿ ನಾವು ಗ್ಯಾರಂಟಿಗಳನ್ನು ಘೋಷಿಸಿದಾಗಲೂ ಪತ್ರಿಕೆಗಳು ಶ್ಲಾಘಿಸಿ ಬರೆದಿವೆ. ನೀವೆಲ್ಲಾ ಇದನ್ನು ವಿರೋದಿಸಿದ್ದೀರಿ.
ರಾಜ್ಯ ಸರ್ಕಾರ ಗ್ಯಾರಂಟಿ ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಅಭಿವೃದ್ಧಿಗೆ ಹಣವಿರುವುದಿಲ್ಲ ಎಂದು ನೀವು ಮಾತ್ರವಲ್ಲ ದೇಶದ ಪ್ರಧಾನಿಗಳು ಕೂಡ ಟೀಕಿಸಿದ್ದರು. ಆದರೆ ನೀವೇ ಲೋಕಸಭಾ ಚುನಾವಣೆಯಲ್ಲಿ ಮೋದಿ ಕಿ ಗ್ಯಾರಂಟಿ ಎಂದು ಘೋಷಣೆ ಮಾಡಿದ್ದೀರಿ. ಗ್ಯಾರಂಟಿಗಳನ್ನು ನಿರಂತರವಾಗಿ ವಿರೋಧಿಸಿದವರೆ ಈ ಕೆಲಸ ಮಾಡಿದ್ದೀರಿ. ಅನೇಕ ರಾಜ್ಯಗಳಲ್ಲಿ ಇದನ್ನು ನಕಲು ಮಾಡಿದ್ದೀರಿ.
ಬಿಜೆಪಿಯವರು ವ್ಯಕ್ತಿ ಪೂಜೆಯನ್ನು ಕಲಿತಿದ್ದಾರೆ. ನಾವು ವ್ಯಕ್ತಿ ಪೂಜೆ ಮಾಡುವುದಿಲ್ಲ. ಆದ್ದರಿಂದ ಸಿದ್ದರಾಮಯ್ಯ ಗ್ಯಾರಂಟಿ ಎಂದು ಘೋಷಣೆ ಮಾಡಿಲ್ಲ. ನಾವು ರಾಜ್ಯದ ಜನರ ಗ್ಯಾರಂಟಿ ಎಂದು ಘೋಷಿಸಿದ್ದೇವೆ.
ಎನ್.ಡಿ.ಎ – ಬಿಜೆಪಿ ಸರ್ಕಾರದ ಸಚಿವರುಗಳು, ಅಧಿಕಾರಿಗಳು ನನ್ನೊಂದಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚಿಸಿದ್ದು ಏಕೆ?
ಕೇಂದ್ರ ಸರ್ಕಾರದ Indian institute of Public Administration ಸಂಸ್ಥೆಯ ಅಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಸಚಿವ ಜಿತೇಂದ್ರ ಸಿಂಗ್ ಪ್ರಶಂಸೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದಾರೆ. ಇಲ್ಲಿ ನೀವು ವಿರೋಧಿಸುತ್ತಿದ್ದೀರಿ, ಏನಿದು?
ಗ್ಯಾರಂಟಿ ಯೋಜನೆಗಳನ್ನು ನೀವು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಕಲು ಮಾಡಿದ್ದೀರಿ.
ವಿರೋಧ ಮಾಡುವುದಾದರೆ ನಕಲು ಏಕೆ ಮಾಡಬೇಕಿತ್ತು? ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ನಾವು ವಾಸ್ತವವನ್ನು ಹೇಳುತ್ತಿದ್ದೇವೆ.
ದಿನಾಂಕ 3-1-2025 ರಂದು ಚಂದ್ರ ಬಾಬು ನಾಯ್ದು ಅವರ ಸರ್ಕಾರದ ಮಂತ್ರಿಗಳು ಹಾಗೂ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಕುರಿತು ಅಧ್ಯಯನ ಮಾಡಿ ಹೋಗಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಹಾಗೂ ನನ್ನನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
2-2-2025 ರಂದು ಮಹಾರಾಷ್ಟ್ರದ ಸಾರಿಗೆ ಸಚಿವರಾದ ಪ್ರತಾಪ್ ಸರ್ನಾಯಕ್ ಶಕ್ತಿ ಯೋಜನೆ ಬಗ್ಗೆ ಚರ್ಚಿಸಿ ತೆರಳಿದ್ದಾರೆ. ಅಲ್ಲಿರುವುದು ಬಿಜೆಪಿ ಸರ್ಕಾರ.
5-3-2025 ರಂದು ಕೇರಳದಿಂದ ಸಚಿವರು ಬಂದು ಅಧ್ಯಯನ ಮಾಡಿ ಹೋದರು. ಇವರೆಲ್ಲಾ ಸುಮ್ಮನೆ ಬಂದು ಹೋಗುತ್ತಾರೆಯೇ?
ಕೇಂದ್ರ ಸರ್ಕಾರದ Indian institute of Public Administration ಸಂಸ್ಥೆಯ ಅಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಸಚಿವ ಜಿತೇಂದ್ರ ಸಿಂಗ್ ಪ್ರಶಂಸೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದಾರೆ. ಈ ಎರಡೂ ವರದಿಗಳು ಸರ್ಕಾರಕ್ಕೆ ಉಪಯುಕ್ತವಾಗಿದ್ದರೂ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದೀರಿ. ನಿಮಗೆ ಎಷ್ಟು ಹುಡುಕಿದರೂ ಮೊಸರಲ್ಲಿ ಕಲ್ಲು ಸಿಗುವುದಿಲ್ಲ.
ನೀವು ಮಾಡುತ್ತಿರುವುದು ಇದೊಂದು ರಾಜಕೀಯ ಪ್ರೇರಿತ ಕೆಲಸ. ಈಗಲಾದರೂ ಸಕಾರಾತ್ಮಕವಾಗಿ ಟೀಕೆ ಮಾಡಬೇಕೆಂದು ಮನವಿ ಮಾಡುತ್ತೇನೆ.
ಸರ್ಕಾರದ ತಪ್ಪುಗಳಿದ್ದರೆ, ಸರ್ಕಾರದ ಖಜಾನೆಗೆ ತೊಂದರೆಯಿದ್ದರೆ ಆಡಳಿತ ಪಕ್ಷದವರ ಗಮನಕ್ಕೆ ತರುವುದು ವಿರೋಧ ಪಕ್ಷದ ಕೆಲಸ. ಆ ಕೆಲಸ ಮಾಡಬೇಕು.
ಗ್ಯಾರಂಟಿ ಯೋಜನೆಗಳಿಗೆ ಫೆಬ್ರವರಿ ವರೆಗೆ ನಮ್ಮ ಸರ್ಕಾರ ಬರೋಬ್ಬರಿ ₹76,509 ಕೋಟಿ ನೀಡಲಾಗಿದೆ. ಇದು ಸತ್ಯ ಎನ್ನುವುದು ಸದನದಲ್ಲಿರುವ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ಗೊತ್ತಿದೆ. ನಮ್ಮ ಸರ್ಕಾರ ದಿವಾಳಿಯಾಗಿದ್ದರೆ 76,509 ಕೋಟಿ ಕೊಡಲು ಸಾಧ್ಯವಿತ್ತೆ?
ಲೋಕಸಭಾ ಚುನಾವಣೆ ನಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನಿಲ್ಲಿಸಿಬಿಡತ್ತೆ ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತಾ?
ರಾಜ್ಯದ ಜನರನ್ನು ಯಾವಾಗಲೂ ಮೂರ್ಖರನ್ನಾಗಿಸಲು ಪ್ರಯತ್ನಿಸಿದರೆ ಸಾಧ್ಯವಿಲ್ಲ.
ಲೋಕಸಭಾ ಚುನಾವಣೆ ನಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿದರು. ಜನರಿಗೆ ಈ ಕಾರ್ಯಕ್ರಮಗಳ ಸತ್ಯಾಸತ್ಯತೆ ಗೊತ್ತಿದೆ. ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಿದೆ. ಜೂನ್ 11, 2023 ರಿಂದ 410 ಕೋಟಿ ಬಾರಿ ಮಹಿಳೆಯರು ಶಕ್ತಿ ಯೋಜನೆಯಡಿ ಓಡಾಡಿದ್ದಾರೆ. ನೀವು ಎಷ್ಟೇ ಸುಳ್ಳು ಹೇಳಿದರೂ ಉಪಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಸೋತಿದ್ದೀರಿ.
ನಿಮ್ಮ ಟೀಕೆ, ಆಪಾದನೆಗಳು ಮಾಡಿದ ನಂತರ ಉಪಚುನಾವಣೆಗಳು ನಡೆದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಗೆದ್ದಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಅಂತರದಿಂದ ನಾವು ಗೆದ್ದಿದ್ದೇವೆ. ಶಿಗ್ಗಾಂವಿ ಕ್ಷೇತ್ರದಲ್ಲಿ13 ಸಾವಿರ ಅಂತರದಿಂದ ಹಾಗೂ ಸಂಡೂರು ಕ್ಷೇತ್ರದಲ್ಲಿ 9 ಸಾವಿರ ಅಂತರದಲ್ಲಿ ಗೆದ್ದಿದ್ದೇವೆ. ಜನರನ್ನು ಪ್ರತಿ ಬಾರಿ ಮೂರ್ಖರನ್ನಾಗಿಸಲು ಪ್ರಯತ್ನಿಸಿದರೆ ಸಾಧ್ಯವಿಲ್ಲ.
ಬಸವರಾಜ ಬೊಮ್ಮಾಯಿ ಅವರ ಮಗನ ವಿರುದ್ಧ ಎಲ್ಲಾ ಜಾತಿ ಜನರು ಮತ ನೀಡಿದ್ದರಿಂದ ನಾವು ಗೆದ್ದಿದ್ದೇವೆ. ನಾವು ಅಪರೇಷನ್ ಕಾಂಗ್ರೆಸ್ ಮಾಡಿಲ್ಲ. ನಾವು ಗ್ಯಾರಂಟಿ ಕೊಡದೇ ಹೋಗಿದ್ದರೆ ಬಡವರು ಮತ ಹಾಕುತ್ತಿರಲಿಲ್ಲ. ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುವ ಈ ಯೋಜನೆಗಳು ಬಡವರ ಬದುಕಿಗೆ ಭರವಸೆ ನೀಡಿವೆ.
ನಾವು ಬಿಜೆಪಿಯವರಂತೆ ಕೇವಲ 10% ಜನರ ಕೈಹಿಡಿದು ಶೇ 90% ರಷ್ಟು ಜನರನ್ನು ಕೈ ಬಿಟ್ಟಿಲ್ಲ.
2024-25 ಕ್ಕೆ ₹52,009 ಕೋಟಿ ಇಟ್ಟು, ₹41,509 ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ. ಖಜಾನೆ ಖಾಲಿಯಾಗಿದೆ ಎಂಬ ಮಾತು ಸತ್ಯಕ್ಕೆ ದೂರ ತಾನೇ?
1.26 ಕೋಟಿ ಕುಟುಂಬಗಳಿಗೆ
ಯೋಜನೆಗಳು ತಲುಪುತ್ತಿದ್ದು, ಕೊಟ್ಟ ಮಾತಿನಂತೆ ನಡೆದಿದ್ದೇವೆ. ಯಾವ ಕಾರಣಕ್ಕೂ ಯಾವ ಕಾರ್ಯಕ್ರಮವನ್ನೂ ನಿಲ್ಲಿಸುವುದಿಲ್ಲ. ಸಾಲಮನ್ನಾ ಮಾಡಿ ಅಂದರೆ ಹಣ ಎಲ್ಲಿಂದ ತರುವುದು ಎಂದು ಹೇಳಿದ ಬಿಜೆಪಿ, ಅದಾನಿಯವರಿಗೆ 17 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೀರಿ. ಇದು ನ್ಯಾಯವೇ?
ರಾಜಕೀಯ ದುರುದ್ದೇಶ ಬಿಟ್ಟು ಮಾತನಾಡಬೇಕೆಂದು ವಿರೋಧ ಪಕ್ಷದವರಿಗೆ ಮನವಿ ಮಾಡುತ್ತೇನೆ.
ದೇಶದ 100 ಕೋಟಿ ಜನರಿಗೆ ಕೊಳ್ಳುವ ಆಯ್ಕೆಗಳೇ ಇಲ್ಲ ಎಂದು ವರದಿ ಬಂದಿತ್ತು. 20.5 ಕೋಟಿ ಕುಟುಂಬಗಳು ಅಂದರೆ ನೂರು ಕೋಟಿ ಜನರ ವಾರ್ಷಿಕ ಆದಾಯ 87,000 ರೂಪಾಯಿಗಿಂತ ಕಡಿಮೆ ಇದೆ ಎನ್ನುವ ವರದಿ ಬಂದಿದೆ. ದೇಶದಲ್ಲಿ ಅಸಮಾನತೆ ಅಷ್ಟರ ಮಟ್ಟಿಗೆ ಇದೆ. ದೇಶದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇರುವವರೆಗೆ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುವುದಿಲ್ಲ. ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡುವ ಸಾರ್ವತ್ರಿಕ ಮೂಲಆದಾಯ ತತ್ವವನ್ನು ನಾವು ಜಾರಿ ಮಾಡಿದ್ದೇವೆ. ಆರ್ಥಿಕ, ಸಾಮಾಜಿಕ ಶಕ್ತಿಯನ್ನು ಜನರಲ್ಲಿ ತುಂಬಿದರೆ ಜನರ ಹಾಗೂ ರಾಜ್ಯದ ಅಭಿವೃದ್ಧಿ ಸಾಧ್ಯ. ನಾವು ಸಮಾಜದ 90% ಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಿದ್ದೇವೆ. ನೀವು ಸಮಾಜದ 10% ಜನರಿಗೆ ಶಕ್ತಿ ತುಂಬುತ್ತಿದ್ದೀರಿ.
1994 ರಲ್ಲಿ 34% ಇದ್ದ ಶ್ರೀಮಂತರ ಸಂಖ್ಯೆ ಈಗ 57% ಗೆ ಹೆಚ್ಚಾಗಿದೆ. 50% ಜನರಿಗೆ ಇರುವ ಆರ್ಥಿಕ ಶಕ್ತಿ 15% ಗೆ ಕುಸಿದಿದೆ. ಇದು ಆತಂಕಕಾರಿ ಸಂಗತಿ ಅಲ್ಲವೇ? ಶ್ರೀಮಂತರು ಶ್ರೀಮಂತರಾದರೆ, ಬಡವರು ಬಡವರಾಗುತ್ತಿದ್ದಾರೆ. ಈ ಅಸಮಾನತೆಯನ್ನು ತೊಡೆದು ಹಾಕಲು ನಾವು ಪ್ರಯತ್ನ ಮಾಡುತ್ತಿದ್ದೇವೆ.
ಗ್ಯಾರಂಟಿ ಯೋಜನೆಗಳಿಂದ ಬಡವರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು ಮಾತ್ರವಲ್ಲ, ಸ್ವಾಭಿಮಾನ ಹೆಚ್ಚುತ್ತಿದೆ. ಜನರು ಸಾಮಾಜಿಕವಾಗಿ, ಆರ್ಥಿಕವಾಗಿ ನಿರ್ಭಯವಾಗಿ, ಅವರ ಬದುಕು ಸುಧಾರಣೆಯಾಗಿದೆ. ಸಮಾಜದಲ್ಲಿ ಸಮಾನತೆಯ ಭಾವ ಮೂಡುತ್ತಿದೆ.
ವೈರುಧ್ಯತೆ ಇರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದು, ರಾಜಕೀಯ ಸ್ವಾತಂತ್ರ್ಯ ದೊರೆತರೆ ಸಾಲದು, ನಮಗೆ ಆರ್ಥಿಕ ಸಾಮಾಜಿಕ ಸ್ವಾತಂತ್ಯ ಸಿಕ್ಕಿಲ್ಲ. ಅದು ಸಿಗಬೇಕಾದರೆ ಕಟ್ಟ ಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ಕೊಂಡೊಯ್ಯುವ ಕೆಲಸವಾಗಬೇಕು ಎಂದು ಅಂಬೇಡ್ಕರ್ ಹೇಳಿದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಬಿಜೆಪಿಯವರಂತೆ ನಾವು ಕೇವಲ 10% ಜನರ ಕೈಹಿಡಿದು ಶೇ90% ರಷ್ಟು ಜನರ ಕೈ ಬಿಟ್ಟಿಲ್ಲ.
ಕರ್ನಾಟಕ 2025-26 ನೇ ಸಾಲಿಗೆ 5 ಲಕ್ಷ ಕೋಟಿ ರೂಪಾಯಿ ತೆರಿಗೆ ಕೊಡುತ್ತಿದೆ.
ನಮಗೆ ತೆರಿಗೆ ಪಾಲು ಅಂದಾಜು 51 ಸಾವಿರ ಕೋಟಿ ವಾಪಸ್ಸು ಬರಬೇಕಾಗುತ್ತದೆ. ಹಾಗೆಂದು ಕೇಳಿದರೆ ಕೇಂದ್ರ ಸರ್ಕಾರದ್ದು ಮಾತನಾಡಬಾರದೆಂದು ವಿಪಕ್ಷ ನಾಯಕ ಅಶೋಕ್ ಪ್ರಶ್ನಿಸುತ್ತಾರೆ.
ರಾಜ್ಯಕ್ಕೆ 15 ನೇ ಹಣಕಾಸು ಯೋಜನೆಯಡಿ ಅನುದಾನದಲ್ಲಿ ಆಗಿರುವ ಅನ್ಯಾಯವನ್ನು ನಾವು ಪ್ರಶ್ನಿಸಬಾರದಂತೆ. ಅನ್ಯಾಯ ಸರಿ ಮಾಡಿ ಎಂದು ಕೇಳಬಾರದಾ?
ರಾಜ್ಯದಲ್ಲಿ ಆರ್ಥಿಕವಾಗಿ ಹೆಚ್ಚು ಅನುದಾನ ನೀಡಲು ಸಾಧ್ಯವಾಗದೆ ಇರುವುದು ಬಿಜೆಪಿ ಸರ್ಕಾರದಿಂದ. ಬಿಜೆಪಿ ಅಧಿಕಾರದಲ್ಲಿದ್ದಾಗ ಕ್ಯಾಪಿಟಲ್ ಹೂಡಿಕೆಗಳಿಗೆ 2,70,695 ಕೋಟಿ ಕಾಮಗಾರಿಗಳನ್ನು ಅನುದಾನ ಒದಗಿಸದೇ ತೆಗೆದುಕೊಂಡಿತ್ತು. ಮುಖ್ಯಮಂತ್ರಿಗಳ ವಿಶೇಷ ಅನುದಾನದ ಮೂಲಕ 1,66,426 ಕೋಟಿ ನೀಡಲಾಗಿದೆ. 36 ಸಾವಿರ ಕೋಟಿ ಬಾಕಿ ಬಿಲ್ಲುಗಳು ನಮಗೆ ಬಳುವಳಿಯಾಗಿ ಕೊಟ್ಟಿದೆ. ನಿಮ್ಮಿಂದ ನಾವು ಕಷ್ಟ ಪಡುವ ಸಂದರ್ಭ ಒದಗಿದೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಂದ್ರದಿಂದಲೂ ಅನುದಾನ ತಂದಿಲ್ಲ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು 15 ನೇ ಹಣಕಾಸು ಆಯೋಗದ ಅಧ್ಯಕ್ಷರು 11,495 ಕೋಟಿ ಶಿಫಾರಸ್ಸು ಮಾಡಿದರು. ನೀವು ಅಧಿಕಾರದಲ್ಲಿದ್ದಾಗ ಈ ಬಗ್ಗೆಯೂ ಕೇಳಲಿಲ್ಲ.
ನಿರ್ಮಲಾ ಸೀತಾರಾಮನ್ ಅವರನ್ನು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎಂದು, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಒದಗಿಸಿ ಎಂದು ಮೂರು ಸಾರಿ ಭೇಟಿಯಾಗಿ ಮನವಿ ಮಾಡಿದ್ದರೂ, ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ₹5,300 ಕೋಟಿಯಲ್ಲಿ ಒಂದು ರುಪಾಯಿ ಬರಲಿಲ್ಲ. ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲಿಲ್ಲ. ನೀವು ಬಿಜೆಪಿಯವರು ಅದರ ಬಗ್ಗೆ ಒಂದೂ ಮಾತೂ ಆಡಲಿಲ್ಲ.
ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವಾಗ ಧ್ವನಿ ಎತ್ತಲಿಲ್ಲ. ಕೇಂದ್ರ ಸರ್ಕಾರದಲ್ಲಿ ನ್ಯಾಯಯುತವಾಗಿ ಬರಬೇಕಾದ್ದನ್ನು ಕೇಳಲೂ ನಿಮ್ಮಿಂದ ಆಗಲಿಲ್ಲ. ರಾಜ್ಯಕ್ಕೆ ಇದರಿಂದ ಸಾಕಷ್ಟು ನಷ್ಟವಾಗಿದೆ. ವಿರೋಧ ಪಕ್ಷ ಇರುವುದು ಭಾಷಣ ಮಾಡಲು ಮಾತ್ರವೇ?
ವಿರೋಧ ಪಕ್ಷದ ನಾಯಕ ಅಶೋಕ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಲಾವಿದರಿಗೆ ಅನುದಾನ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ನಾವು ಈ ಬಾರಿ ಕಲಾವಿದರ ಮಾಶಾಸನ ಹೆಚ್ಚಳ ಮಾಡಿರುವುದು ಮಾತ್ರವಲ್ಲದೆ ಕಳೆದ ಬಾರಿಗಿಂತ ಅಧಿಕ ಅನುದಾನ ಕೊಟ್ಟಿದ್ದೇವೆ.
ಭಾರತೀಯ ರೈಲ್ವೆ ಇಲಾಖೆ ಕೇಂದ್ರ ಸರ್ಕಾರದ ಸುಪರ್ದಿಗೆ ಬರುತ್ತದೆ. ಆದ್ರೂ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಉಚಿತ ಸ್ಥಳವನ್ನು ಒದಗಿಸುತ್ತದೆ. 50% ವೆಚ್ಚವನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳುತ್ತದೆ. ಲಾಭ ಪೂರ್ತಿ ಕೇಂದ್ರ ಸರ್ಕಾರವೇ ಪಡೆಯುತ್ತದೆ.
ಉತ್ತರ ಪ್ರದೇಶದಲ್ಲಿ ಸ್ಥಳವನ್ನು ರೈಲ್ವೆಗೆ ಕೊಡುತ್ತಾರೆಯೇ? ಬಿಜೆಪಿಯವರು ಅಲ್ಲಿ ರೈಲು ಬಿಡಬಾರದು.
ಮನಮೋಹನ್ ಸಿಂಗ್ ಅವರು ಇದ್ದಾಗ 50% ವೆಚ್ಚ ಭರಿಸುತ್ತಿರಲಿಲ್ಲ. ಈಗ ಆ ವೆಚ್ಚ ವಹಿಸಿಕೊಳ್ಳದಿದ್ದರೆ ಯೋಜನೆಯನ್ನೇ ಮಂಜೂರು ಮಾಡುವುದಿಲ್ಲ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಲ್ಲಿ ನಾವು ಕೊಟ್ಟಿದ್ದಕ್ಕೆ ಹೋಲಿಸಿದರೆ ಅರ್ಧ ಅನುದಾನವನ್ನು ಬಿಜೆಪಿ ಸರ್ಕಾರ ಕೊಟ್ಟಿತ್ತು. ₹275 ಕೋಟಿ ಅನುದಾನವನ್ನು ನಾವು ಕೊಟ್ಟಿದ್ದೇವೆ.
46ನೇ ಪರಿಚ್ಚೇಧವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ವಿಶೇಷವಾಗಿ ಶೈಕ್ಷಣಿಕ, ಆರ್ಥಿಕ ಕಾರ್ಯಕ್ರಮಗಳನ್ನು ನೀಡಬೇಕು ಎಂದು ತಿಳಿಸಿದೆ. ಆಂಧ್ರಪ್ರದೇಶ ಮೊಟ್ಟ ಮೊದಲ ಬಾರಿಗೆ ಎಸ್ ಸಿ ಎಸ್ ಪಿ/ ಟಿ ಎಸ್.ಪಿ ಕಾಯ್ದೆ ಜಾರಿಗೆ ತಂದಿದ್ದು, ನಂತರ ಅದನ್ನು ಕರ್ನಾಟಕ 2013 ರಲ್ಲಿ ಜಾರಿಗೆ ತಂದಿತು. ಈಗ ತೆಲಂಗಾಣದಲ್ಲಿ ಕೂಡ ಜಾರಿಗೆ ಬಂದಿದ್ದು, ಇಡೀ ದೇಶದಲ್ಲಿ ಬೇರೆಲ್ಲೂ ಈ ಕಾಯ್ದೆ ಇಲ್ಲ.
ಎಸ್ ಸಿ ಎಸ್ ಪಿ/ ಟಿ ಎಸ್.ಪಿ ಕಾಯ್ದೆ ಬಂದ ನಂತರ ರಾಜ್ಯದಲ್ಲಿ ₹26,127 ಕೋಟಿ ವೆಚ್ಚ ಮಾಡಲಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಒಟ್ಟು 5 ವರ್ಷಗಳಲ್ಲಿ ನೀಡಿದ್ದ ₹35,464 ಕೋಟಿ ಅನುದಾನದಲ್ಲಿ ₹29,452 ಕೋಟಿ ವೆಚ್ಚ ಮಾಡಿದ್ದಾರೆ.
ನಾವು ಅಧಿಕಾರದಲ್ಲಿದ್ದ ನಾಲ್ಕು ವರ್ಷಗಳಲ್ಲಿ ₹1,80,000 ಕೋಟಿ ವೆಚ್ಚ ಮಾಡಿದ್ದೇವೆ. ದಲಿತರ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಲ್ಲ.
ದಲಿತ ಸಮುದಾಯಕ್ಕೆ ಗುಜರಾತ್ ಬಿಜೆಪಿ ಸರ್ಕಾರ 2.38% ರಷ್ಟು, ಮಹಾರಾಷ್ಟ್ರ 3.6% ಹಾಗೂ ಕೇಂದ್ರ ಸರ್ಕಾರ ಕೇವಲ 2.87% ಮಾತ್ರ ಹಣ ಬಜೆಟ್ ನಲ್ಲಿ ತೆಗೆದಿಟ್ಟಿದೆ.
ಆದರೆ ಕಾಂಗ್ರೆಸ್ ಸರ್ಕಾರ ಶೇ7.46 ರಷ್ಟು ಹಣ ಮೀಸಲಿಟ್ಟು ಖರ್ಚು ಮಾಡಿದೆ.
ಬಿಜೆಪಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆಯಡಿ 5 ವರ್ಷಗಳಲ್ಲಿ ₹35,464 ಕೋಟಿ ಅನುದಾನ ಹಂಚಿಕೆ ಮಾಡಿ ₹22,480 ಕೋಟಿ ವೆಚ್ಚ ಮಾಡಿದ್ದಾರೆ.
ಈ ಕಾಯ್ದೆ ಬಂದದ್ದಕ್ಕೆ ಜನಸಂಖ್ಯೆಗೆ ಅನುಸಾರವಾಗಿ ಹಣ ವೆಚ್ಚ ಮಾಡಬೇಕು. 17.15% ಪ.ಜಾತಿ, ಪ.ವರ್ಗ 6.95% ಎರಡೂ ಸೇರಿ 24.1% ಇದ್ದಾರೆ. ಯೋಜನೆಯ ಹಣದಲ್ಲಿ 24.1% ಕೂಡಲೇಬೇಕು. ಮೊದಲು ಅಷ್ಟು ಖರ್ಚು ಮಾಡುತ್ತಿರಲಿಲ್ಲ. ಒಂದು ವೇಳೆ ಹಣವನ್ನು ಖರ್ಚು ಮಾಡದೆ ಹೋದರೆ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಈ ವರ್ಷ ಖರ್ಚು ಮಾಡಲು ಸಾಧ್ಯವಾಗದಿದ್ದರೆ ಮುಂದಿನ ವರ್ಷಕ್ಕೆ ಅದು ಸೇರಿಕೊಳ್ಳುತ್ತದೆ.
₹39,121 ಕೋಟಿ ಕಳೆದ ವರ್ಷ ಮೀಸಲಿಟ್ಟಿದ್ದು, ಈ ಸಾಲಿಗೆ ₹42,018 ಕೋಟಿ ಮೀಸಲಿಡಲಾಗಿದೆ. ಈ ಕಾಯ್ದೆಯನ್ನು ಸಂವಿಧಾನದ ಆಶಯಗಳನ್ನು ಈಡೇರಿಸಲೆಂದು ರೂಪಿಸಲಾಗಿದೆ.
ಕೇಂದ್ರ ಸರ್ಕಾರ ಇಂದಿನವರೆಗೆ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆಯನ್ನು ಜಾರಿ ಮಾಡಿಲ್ಲ.
ಕಳೆದ ಸಾಲಿನಲ್ಲಿ ಕರ್ನಾಟಕದಲ್ಲಿ 3,71,273 ಕೋಟಿ ರೂ.ಗಳ ಬಜೆಟ್ ನಲ್ಲಿ ₹27,674 ಕೋಟಿ ಎಸ್.ಸಿ.ಎಸ್.ಪಿ ಗಾಗಿಯೇ ಅಂದರೆ ಶೇ. 7.46% ಮೀಸಲಿಟ್ಟಿದೆ. ಗುಜರಾತ್ನ ಬಜೆಟ್ ಗಾತ್ರ ₹3,70,000 ಕೋಟಿ, ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಗಾಗಿ ಶೇ 2.38% ಮೀಸಲಿಟ್ಟಿದ್ದಾರೆ. ಮಹಾರಾಷ್ಟ್ರದ ಬಜೆಟ್ ₹6,12,293 ಕೋಟಿ ಇದ್ದರೆ, 18,765 ಕೋಟಿ ಇಟ್ಟಿದ್ದಾರೆ. ಇದು ಬಜೆಟ್ನ 3.6% ಇದೆ.
ಕೇಂದ್ರ ಸರ್ಕಾರದ ₹48,20,512 ಕೋಟಿ ಬಜೆಟ್ ನಲ್ಲಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಗಾಗಿ ₹1,38,368 ಕೋಟಿ ಇದ್ದು, ಬಜೆಟ್ನ ಗಾತ್ರಕ್ಕೆ ಹೋಲಿಸಿದಲ್ಲಿ 2.87% ಮೀಸಲಿಟ್ಟಿದೆ.
ಕರ್ನಾಟಕ ಮಾದರಿಯಲ್ಲೇ ಕೇಂದ್ರ ಸರ್ಕಾರ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆ ಜಾರಿ ಮಾಡಲಿ ಎಂದು ಸರ್ವಾನುಮತದ ನಿರ್ಣಯ ಮಾಡೋಣ.
2019-23 ಸಾಲಿನಲ್ಲಿ ಈವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಡೀಮ್ಡ್ ವೆಚ್ಚದಲ್ಲಿ ಏಕೆ ವೆಚ್ಚ ಮಾಡಲಿಲ್ಲ? ದಲಿತ ಸಂಘಟನೆಗಳು ಮೊದಲಿನಿಂದಲೂ ಬೇಡಿಕೆ ಇಟ್ಟಿರುವಂತೆ ನಮ್ಮ ಅಧಿಕಾರಾವಧಿಯಲ್ಲಿ ಕಾಯ್ದೆಯಲ್ಲಿ 7ಡಿ ತೆಗೆದು ಹಾಕಲಾಯಿತು.
ಬಿಜೆಪಿಯವರು ಏಕೆ ತೆಗೆಯಲಿಲ್ಲ?
ಇಡೀ ದೇಶದಲ್ಲಿ 2011ರ ಜನಗಣತಿ ಪ್ರಕಾರ ಶೇ16.6% ಎಸ್.ಸಿ ಹಾಗೂ ಶೇ. 8.6% ಎಸ್.ಟಿ ಇದ್ದು, ಎರಡೂ ಸೇರಿ ಒಟ್ಟು 25.2% ಇದ್ದಾರೆ. ಇವರ ಜನಸಂಖ್ಯೆಗನುಗುಣವಾಗಿ ಬಿಜೆಪಿಯವರು ಖರ್ಚು ಮಾಡಲಿಲ್ಲ. ಕೇವಲ 2.87% ಖರ್ಚು ಮಾಡಿದ್ದಾರೆ.
ಶಾಸಕ ಭರತ್ ಶೆಟ್ಟಿ ರಾಹುಲ್ ಗಾಂಧಿಯವರಿಗೆ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿಕೆ ನೀಡಿದ್ದಾರೆ. ಇದೇ ದ್ವೇಷದ ರಾಜಕಾರಣ. ಇದನ್ನು ಮಾಡಬಾರದು. ಇದನ್ನು ಹುಟ್ಟುಹಾಕಿದ್ದು ಆರ್.ಎಸ್.ಎಸ್ ನವರು ಎಂದದ್ದಕ್ಕೆ ಗಲಾಟೆ ನೀವು ಮಾಡಿದಿರಿ.
ನಮ್ಮ ಕಾಲದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ರಾಜ್ಯ ಮಾದಕ ವಸ್ತು ಮುಕ್ತವಾಗಬೇಕು. ನಿನ್ನೆಯಷ್ಟೇ 75 ಕೋಟಿ ಮೌಲ್ಯದ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ .ಕಾನೂನು ಸುವ್ಯವಸ್ಥೆ ಉತ್ತಮವಾಗಿರುವುದರಿಂದ ಹೂಡಿಕೆಗಳು ಹೆಚ್ಚಾಗಿದೆ. ಇತ್ತೀಚೆಗೆ ನಡೆದ ಘಟನೆಗಳಲ್ಲಿ ಆರೋಪಿಗಳನ್ನು ಕೂಡಲೇ ಬಂಧಿಸಲಾಗಿದೆ. ಇವರಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಲಾಗುವುದು.
ಅಪರಾಧಗಳು ನಡೆಯುತ್ತಲೇ ಇಲ್ಲ ಎಂದು ಹೇಳಲ್ಲ. ಆದರೆ ಕಡಿಮೆಯಾಗಿವೆ.
ವಿರೋಧ ಪಕ್ಷದ ಸುನಿಲ್ ಕುಮಾರ್ ರವರು ಹಾಲಿನ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ. ವಾಸ್ತವವೇನೆಂದರೆ ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡುತ್ತಿದ್ದುದಕ್ಕಿಂತ ಈ ವರ್ಷ 300 ಕೋಟಿ ರೂಪಾಯಿಗಳನ್ನು ನಮ್ಮ ಸರ್ಕಾರ ಹೆಚ್ಚಿಗೆ ಬಿಡುಗಡೆ ಮಾಡಿದೆ.
2022-23 ರಲ್ಲಿ 1147 ಕೋಟಿ ರೂಪಾಯಿಗಳಷ್ಟು ಸಹಾಯಧನವನ್ನು ರೈತರಿಗೆ ಹಾಲಿನ ಪ್ರೋತ್ಸಾಹಧನವಾಗಿ ನೀಡಲಾಗಿತ್ತು. 2024-25 ರಲ್ಲಿ 1500 ಕೋಟಿ ರೂಪಾಯಿಗಳನ್ನು ಫೆಬ್ರವರಿ ಅಂತ್ಯದವರೆಗೆ ನೀಡಿದ್ದೇವೆ. ಇದರಲ್ಲಿ 2019 ರಿಂದ ಬಾಕಿ ಉಳಿಸಿದ್ದ ಮೊತ್ತವೂ ಸೇರಿದೆ.
ಈ ವರ್ಷ ಮತ್ತೆ 1500 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ.
ಹಾಲಿನ ಪ್ರೋತ್ಸಾಹ ಧನವನ್ನು 2 ರೂಪಾಯಿಗಳಿಂದ 2013 ರಲ್ಲಿ 5 ರೂಪಾಯಿಗಳಿಗೆ ಹೆಚ್ಚಿಸಿದ್ದು ನಮ್ಮ ಸರ್ಕಾರವೆ. ನಮ್ಮ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಇಂದು 8.4 ಲಕ್ಷ ಹಾಲಿನ ಉತ್ಪಾದಕರಿಗೆ ಅನುಕೂಲವಾಗುತ್ತಿದೆ. 2012-13 ರಲ್ಲಿ ವರ್ಷಕ್ಕೆ 341 ಕೋಟಿ ರೂಗಳನ್ನು ಪ್ರೋತ್ಸಾಹಧನವಾಗಿ ಬಿಡುಗಡೆ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ 2013 ರಲ್ಲಿ ಅಧಿಕಾರಕ್ಕೆ ಬಂದ ಕೂಡಲೆ 4 ರೂ. ಮಾಡಿದೆವು. ಇದರಿಂದ 341 ರೂಗಳಿಂದ 818 ಕೋಟಿ ರೂ. ಕೊಡುವಂತಾಯಿತು. 2016 ರಲ್ಲಿ 5 ರೂಗೆ ಹೆಚ್ಚಿಸಿದೆವು. ಇದರಿಂದಾಗಿ 1131 ಕೋಟಿ ರೂ.ಗಳನ್ನು ಆ ವರ್ಷ ಬಿಡುಗಡೆ ಮಾಡಲಾಯಿತು.
₹600 ಕೋಟಿ ಚಿಲ್ಲರೆ ಬಾಕಿ ಇದ್ದದ್ದು ನಿಜ. ಅದನ್ನು ಬಾಕಿ ಉಳಿಸಿದ್ದು ನಿಮ್ಮದೇ ಬಿಜೆಪಿ ಸರ್ಕಾರ. ಯಾಕೆ ಬಾಕಿ ಉಳಿಸಿ ಹೋದ್ರಿ ನೀವು?
ವಿರೋಧ ಪಕ್ಷದ ನಾಯಕರು ಬಸ್ಸಿನ ದರ ಏರಿಕೆ ಬಗ್ಗೆ ಮಾತನಾಡಿದ್ದಾರೆ. 2008-2013 ವರೆಗೆ ಸಾರಿಗೆ ಸಚಿವರಾಗಿದ್ದ ಅಶೋಕ್ ಅವರು 47% ರಷ್ಟು ದರ ಏರಿಸಿದ್ದರು.
ನಾವು ಬಸ್ಸಿನ ದರ 15% ಮಾತ್ರ ಪರಿಷ್ಕರಣೆ ಮಾಡಿದ್ದೇವೆ. ಸಿಬ್ಬಂದಿ ವೇತನ, ಡೀಸಲ್ ಬೆಲೆ ಏರಿಕೆಯಾದ ಕಾರಣಕ್ಕೆ ನಾವು ಬಸ್ಸಿನ ದರ ಹೆಚ್ಚಳ ಮಾಡಬೇಕಾಗಿದೆ.
ರಾಜ್ಯದಲ್ಲಿ ನಾವು ಸಾರಿಗೆ ದರ 15% ಏರಿಕೆ ಮಾಡಿದರೂ ಕೊಡ ಪಕ್ಕದ ರಾಜ್ಯಗಳಿಗಿಂತ ಕಡಿಮೆ ಇದೆ.
ಸಾಮಾನ್ಯ ಸಾರಿಗೆ, ವೇಗದೂತ, ರಾಜಹಂಸ ಡೀಲಕ್ಸ್ ಬಸ್ಸುಗಳು ಒಂದು ಕಿಮೀ ಗೆ ತಗಲುವ ದರಗಳು ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಗಿಂತ ಕಡಿಮೆ ಇದೆ.
ವಿದ್ಯಾರ್ಥಿಗಳ ಪಾಸ್ ಗಳ ದರವನ್ನು 12 ವರ್ಷಗಳಿಂದ ಹೆಚ್ಚಿಸಿಲ್ಲ. ಬಿಜೆಪಿ ಅವಧಿಯಲ್ಲಿಯೂ ಪ್ರತಿ ವರ್ಷ ಬಸ್ಸಿನ ದರ ಹೆಚ್ಚಿಸಲಾಗಿದೆ. ಡೀಸಲ್ ಬೆಲೆ ಹೆಚ್ಚಿಗೆ ಆದಾಗ ದರಯೇರಿಸಲೇ ಬೇಕಾಗುತ್ತದೆ. ವೇತನ ಹೆಚ್ಚು ಮಾಡಿದಾಗ ನಷ್ಟಕ್ಕೆ ಸಾರಿಗೆ ನಿಗಮಗಳು ಒಳಗಾಗಿವೆ.
ಹೆಚ್ಚುವರಿ ಅಬಕಾರಿ ಶುಲ್ಕವನ್ನು 31.84 ರೂ.ಗಳಿಗೆ ಹೆಚ್ಚು ಮಾಡಿದರು. ವೇತನ, ಡೀಸೆಲ್ ಬೆಲೆ ಹೆಚ್ಚಳ ಮಾಡಿದಾಗ ಅನಿವಾರ್ಯವಾಗಿ ದರ ಏರಿಸಬೇಕಾಗಿದೆ. ಇಷ್ಟೆಲ್ಲಾ ಇದ್ದರೂ ನಾವು 4,900 ಹೊಸ ಬಸ್ಸುಗಳನ್ನು ಖರೀದಿ ಮಾಡಿದ್ದೇವೆ. ಪ್ರಧಾನಿ ಮೋದಿ ಸರ್ಕಾರ ಡೀಸೆಲ್ ಬೆಲೆಯನ್ನು ಯದ್ವಾ ತದ್ವಾ ಏರಿಸಿದ್ದರಿಂದ ಪ್ರಯಾಣ ದರ ಏರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದನ್ನು ಹೇಳಿದರೆ ಬಿಜೆಪಿ ಸದಸ್ಯರಿಗೆ ಸಿಟ್ಟು ಬರುತ್ತದೆ.
ಮೆಟ್ರೋ ರೈಲು ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಯ್ದೆ 2005 ರಲ್ಲಿ ಮಾಡಲಾಗಿದೆ. ಕೇಂದ್ರ ಸರ್ಕಾರ ಕಾಲಕಾಲಕ್ಕೆ ನಿವೃತ್ತ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ನಿಗದಿ ಮಾಡುವ ಸಮಿತಿ ರಚಿಸಬಹುದು ಎಂದು ಇದರಲ್ಲಿ ಹೇಳಲಾಗಿದೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ದರ ನಿಗದಿ ಮಾಡುವ ಬಗ್ಗೆ ಪತ್ರ ಬರೆದು, ಸಮಿತಿ ರಚನೆ ಮಾಡಲಾಗಿದೆ.
16-12-2024 ರಲ್ಲಿ ವರದಿ ಕೊಟ್ಟ ಮೇಲೆ ದರ ಪರಿಷ್ಕರಣೆ ಮಾಡಲಾಗಿದೆ. ನಂತರದಲ್ಲಿ ಇತಿಮಿತಿಯೊಳಗೆ ಸ್ವಲ್ಪ ಬೆಲೆ ಕಡಿಮೆ ಮಾಡಲಾಗಿದೆ. ಒಮ್ಮೆ ಸಮಿತಿ ಶಿಫಾರಸ್ಸು ಮಾಡಿದ ಮೇಲೆ ಹಿಂಪಡೆಯಲು ಸಾಧ್ಯವಿಲ್ಲ. ಮೆಟ್ರೋ ದರ ಹೆಚ್ಚಳ ನಮ್ಮ ಕೈಯಲ್ಲಿ ಇಲ್ಲ.
ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆ ಕಡಿಮೆಯಾಗಿದೆ. ಫೆಬ್ರವರಿ ಅಂತ್ಯದವರೆಗೆ 624 ರೈತರ ಆತ್ಮಹತ್ಯೆಗಳು ನಡೆದಿವೆ. ಅರ್ಹ ಪ್ರಕರಣ 527. ರೈತರ ಆತ್ಮಹತ್ಯೆಗಳು ನಡೆಯಬಾರದು. ರೈತರ ಆತ್ಮಹತ್ಯೆಗಳು ಪೂರ್ಣವಾಗಿ ನಿಲ್ಲಬೇಕೆನ್ನುವುದು ಸರ್ಕಾರದ ಆಶಯ.
ಅಭಿವೃದ್ಧಿ ಯೋಜನೆಗಳಿಗೂ ಹಣ ಮೀಸಲಿಟ್ಟು, ಗ್ಯಾರಂಟಿಗಳ ಜೊತೆಗೆ ಕರ್ನಾಟಕದ ಪ್ರಗತಿಯನ್ನೂ ಮಾಡಿದ್ದೇವೆ.
ಬೆಂಗಳೂರು ಅಭಿವೃದ್ಧಿಗೆ ಉಚ್ಚ ನ್ಯಾಯಾಲಯದವರು ಬಿಜೆಪಿ ಅಧಿಕಾರದಲ್ಲಿದ್ದಾಗ ಏನೇನು ಹೇಳಿದ್ದರು ಎಂದು ತಿಳಿಸಬೇಕಾ? 1,700 ಕೋಟಿ ವೈಟ್ ಟಾಪಿಂಗ್ ಗೆ, 15 ಲಕ್ಷ ರೂಪಾಯಿಗಳನ್ನು ಪ್ರತಿ ವಾರ್ಡ್ಗೆ ಗುಂಡಿ ಮುಚ್ಚಲು, ಡಾಂಬರೀಕರಣಕ್ಕೆ 700 ಕೋಟಿ ನೀಡಲಾಗಿದೆ. ಈ ವರ್ಷಕ್ಕೆ 3000 ದ ಜೊತೆಗೆ ನಾಲ್ಕು ಸಾವಿರ ಸೇರಿಸಿ 7000 ಕೋಟಿಗಳನ್ನು ಮುಂದಿನ ವರ್ಷಕ್ಕೆ ವೆಚ್ಚ ಮಾಡಲಾಗುತ್ತಿದೆ.
ನಾವು ನುಡಿದಂತೆ ನಡೆಯುವವರು. ಬಸವರಾಜ ಬೊಮ್ಮಾಯಿಯವರಂತೆ ಹಣ ಮೀಸಲಿಟ್ಟು ಒಂದು ರೂಪಾಯಿ ಕೂಡ ಬಿಡುಗಡೆ ಮಾಡದೇ ಮೋಸ ಮಾಡಲ್ಲ.
ರಾಜ್ಯಪಾಲರು ಸತ್ಯವನ್ನೇ ಹೇಳಿದ್ದಾರೆ. ನಾವು ಸುಳ್ಳು ಹೇಳಿಸಿಲ್ಲ. ರಾಜ್ಯಪಾಲರು ಬರೆದಿದ್ದನ್ನೆಲ್ಲ ಓದುವುದಿಲ್ಲ. ಅವರಿಗೆ ವಿವೇಚನೆ ಬಳಸಲು ಅವಕಾಶ ಇದೆ.