*ಹೊಸ ಯೋಚನೆಗಳೊಂದಿಗೆ ಕಾರ್ಯನಿರ್ವಹಿಸಿ*: *ಲಿಂಗಾಯತ ಬಿಸಿನೆಸ್ ಫೋರಂ ಪದಗೃಹಣ ಸಮಾರಂಭದಲ್ಲಿ ಜಯಂತ ಹುಂಬರವಾಡಿ ಕರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಿಂಗಾಯತ ಬಿಸಿನೆಸ್ ಫೋರಮ್ (LBF -LINGAYAT BUSINESS FORUM) ನ ನೂತನ ಕಾರ್ಯಕಾರಿ ಸಮೀತಿಯ ಪದಗೃಹಣ ಸಮಾರಂಭ ಹಿಂದವಾಡಿಯ ಐ ಎಮ್ ಈ ಆರ್ ಸಭಾ ಮಂದಿರದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಅಶೋಕ್ ಐರನ್ ವರ್ಕ್ಸ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಯಂತ್ ಹುಂಬರ್ವಾಡಿ ಅಗಮಿಸಿದ್ದರು. ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಈ ಸ್ಪರ್ಧಾತ್ಮಕ ವ್ಯಾಪಾರ ಜಗತ್ತಿನಲ್ಲಿ ಹೊಸ ಆಲೋಚನೆಗಳೊಂದಿಗೆ ಕಾರ್ಯನಿರ್ಲಹಿಸಲು ಉದ್ಯಮಿಗಳಿಗೆ ಸಲಹೆ ನೀಡಿದರು. ಒಬ್ಬ ವ್ಯಕ್ತಿಯು ತನ್ನ ಜೀವನೋಪಾಯವನ್ನು ಗಳಿಸುವುದಲ್ಲದೆ, ಸಮುದಾಯದ ಅಸಹಾಯಕ ಮತ್ತು ಹಿಂದುಳಿದವರನ್ನು ದಾನ ಧರ್ಮದ ಮೂಲಕ ಮೇಲೆತ್ತುವ ಸಾಮಾಜಿಕ ಕಾರ್ಯಕ್ಕೆ ಸಹಾಯ ಮಾಡಬೇಕು ಎಂಬ ಬಸವೇಶ್ವರರ ಸಂದೇಶವನ್ನು ವಿವರಿಸಿದರು.
ನಿಕಟಪೂರ್ವ ಅಧ್ಯಕ್ಷ ಕಿರಣ್ ಅಗಡಿ, ಕಳೆದ ನಾಲ್ಕು ವರ್ಷಗಳಲ್ಲಿ ಎಲ್ಬಿಎಫ್ನ ಕಾರ್ಯಚಟುವಟಿಕೆ ವಿವರಿಸಿದರು. ಸಂಸ್ಥಾಪಕ ತಂಡದ ಕೊಡುಗೆಗಳನ್ನು ಸ್ಮರಿಸಿದರು. ಮಲ್ಲಿಕಾರ್ಜುನ್ ಮುದನೂರ, ವಿಜಯ್ ಪಾಟೀಲ್, ರಾಜಶೇಖರ್ ಶೀಲವಂತ, ಮಡಿವಾಳಪ್ಪ ತಿಗಡಿ, ಸಂತೋಷ್ ಪಾವಟೆ, ಈರಣ್ಣ ದೇಯಣ್ಣವರ್, ರಾಜೀವ್ ಶೀಗಿಹಳ್ಳಿ, ಮತ್ತು ರಾಜು ಗುರವ ಅವರನ್ನು ಸತ್ಕರಿಸಲಾಯಿತು.
ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಲಿಂಗರಾಜ್ ಜಗಜಂಪಿ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯನ್ನು ಮುನ್ನಡೆಸಲು ಹೊಸ ಸಮೀತಿಯ ದೃಷ್ಟಿಕೋನ ಮತ್ತು ಬದ್ಧತೆಯನ್ನು ವಿವರಿಸಿದರು. ನಾವು ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಆಯ್ಕೆ ಆಗಿದ್ದೇವೆ. ನಿರ್ಗಮಿತ ತಂಡ ಹಾಕಿದ ಅಡಿಪಾಯದ ಮೇಲೆ ಮುನ್ನಡೆಸುತ್ತೇವೆ ಎಂದು ಹೇಳಿದರು.
ಅಧ್ಯಕ್ಷರಾಗಿ ಲಿಂಗರಾಜ ಜಗಜಂಪಿ, ಉಪಾಧ್ಯಕ್ಷರಾಗಿ ರಾಜಶೇಖರ್ ಶೀಲವಂತ, ಕಾರ್ಯದರ್ಶಿಯಾಗಿ ಸಚಿನ್ ಬೈಲ್ವಾಡ್, ಖಜಾಂಚಿಯಾಗಿ ಜ್ಯೋತಿ ನಿಂಬಾಳ, ಜಂಟಿ ಕಾರ್ಯದರ್ಶಿಯಾಗಿ ಸಂತೋಷ್ ಪಾವಟೆ, ಸದಸ್ಯತ್ವ ಅಧ್ಯಕ್ಷರಾಗಿ ಮಹಾಂತೇಶ್ ಪುರಾಣಿಕ್ ಅಧಿಕಾರ ವಹಿಸಿಕೊಂಡರು.
ಸಂಘಟನೆಯ ಧ್ಯೇಯ ಮತ್ತು ಮೌಲ್ಯಗಳನ್ನು ಪ್ರತಿಪಾದಿಸಿ ಹೊಸ ಪ್ರತಿಜ್ಞೆಯೊಂದಿಗೆ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಸುಜಾತಾ ಹುಂಚೇನಟ್ಟಿ ಅವರು ಸಮಾರಂಭದ ಆರಂಭದಲ್ಲಿ ವಚನ ಗಾಯನ ಪ್ರಸ್ತುತ ಪಡಿಸಿದರು . ಡಾ. ಬಸವರಾಜ ಜಗಜಂಪಿ ಅವರು ಬೆಳಗಾವಿಯ ಶಿವಬಸವ ನಗರದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಅವರನ್ನು ಪರಿಚಯಿಸಿದರು. ಸ್ವಾಮೀಜಿ ಮತ್ತು ಮುಖ್ಯ ಅತಿಥಿಗಳು ಹೊಸ ಸದಸ್ಯರಿಗೆ ಪದಗ್ರಹಣ ನೆರೆವೇರಿಸಿದರು. ಮಡಿವಾಳಪ್ಪ ತಿಗಡಿ ಧನ್ಯವಾದಗಳನ್ನು ಅರ್ಪಿಸಿದರು.
ನಗರದ ಉದ್ಯಮಿಗಳು, ಗಣ್ಯ ವರ್ತಕರು, ಎಲ್ಬಿಎಫ್ನ ಎಲ್ಲಾ ಸದಸ್ಯರು ತಮ್ಮ ಕುಟುಂಬಗಳು ಮತ್ತು ಸ್ನೇಹಿತರೊಂದಿಗೆ ಹಾಜರಿದ್ದರು.