
ಕಮಿಷ್ನರ್ ದಯಾನಂದ್ ಸಲಹೆ
ಪ್ರಗತಿವಾಹಿನಿ ಸುದ್ದಿ: ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಸೈಬರ್ ವಂಚಕರಿಗೆ ಅನುಕೂಲವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಜನರು ಎಚ್ಚರದಿಂದ ಇರುವಂತೆ ಬೆಂಗಳೂರು ಪೊಲೀಸ್ ಕಮಿಷ್ನರ್ ಬಿ.ದಯಾನಂದ್ ಸೂಚಿಸಿದ್ದಾರೆ.
ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ಉಂಟಾಗಿರುವ ಈ ಸಂದರ್ಬದಲ್ಲಿ ಸೈಬರ್ ವಂಚನೆ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು. ಉಭಯ ದೇಶಗಳ ನಡುವಿನ ಪರಿಸ್ಥಿತಿ ಕುರಿತು ಜನಸಾಮಾನ್ಯರ ಕುತೂಹಲವನ್ನು ಬಳಸಿಕೊಳ್ಳುವ ಸೈಬರ್ ವಂಚಕರು ಸುಳ್ಳುಸುದ್ದಿ, ಫಿಶಿಂಗ್, ನಕಲಿ ಲಿಂಕ್ ಗಳ ಮೂಲಕ ವಂಚಿಸುವ ಸಾಧ್ಯತೆಗಳಿವೆ ಎಂದಿದ್ದಾರೆ.
ಉಭಯ ದೇಶಗಳ ನಡುವಿನ ಸಂಘರ್ಷಗಳ ಸನ್ನಿವೇಶಗಳ ಎಕ್ಸ್ ಕ್ಲೂಸಿವ್ ದೃಶ್ಯ, ವೈರಲ್ ವಿಡಿಯೋ, ಆಫರ್ ಗಳ ಕುರಿತ ಸಂದೇಶಗಳು ನಕಲಿ ವೆಬ್ ಸೈಟ್ ಗಳ ಮೂಲಕ ಸೃಷ್ಟಿಯಾಗಬಹುದು. ನಕಲಿ ಲಿಂಕ್ ಗಳ ಮೂಲಕ ಸೇನೆಯಲ್ಲಿ ಕೆಲಸದ ಅಪ್ಲಿಕೇಷನ್ ಹೆಸರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸೈಬರ್ ವಂಚಕರು ಕಳುವು ಮಾಡಬಹುದು. ತುರ್ತಾಗಿ ಆರ್ಮಿ ನೇಮಕಾತಿ ಮತ್ತಿತರ ಕುರಿತು ಅಪರಿಚಿತರಿಂದ ಮೇಲ್ ಗಳು ಬಂದರೆ ಅವುಗಳನ್ನು ತೆರೆಯಬೇಡಿ. ಅವುಗಳಿಂದ ನಿಮ್ಮ ವೈಯಕ್ತಿಕ ಮಾಹಿತಿ ಕದಿಯುವ ಸಾಧ್ಯತೆಗಳಿವೆ. ಸೈಬರ್ ವಂಚನೆ ಬಗ್ಗೆ ಎಚ್ಚರವಾಗಿರಿ ಎಂದು ಮನವಿ ಮಾಡಿದ್ದಾರೆ.