*ಪೂಜೆ ಹೆಸರಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ವಿಡಿಯೋ ರೆಕಾರ್ಡ್: ಬ್ಯಾಕ್ ಮೇಲ್ ಮಾಡಿ ಅತ್ಯಾಚಾರಕ್ಕೆ ಯತ್ನ: ದೇವಸ್ಥಾನದ ಅರ್ಚಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಪೂಜೆ ಹೆಸರಿನಲ್ಲಿ ಮಹಿಳೆಯನ್ನು ಕರೆದೊಯ್ದು ಬೆತ್ತಲೆಗೊಳಿಸಿ, ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಯಾಕ್ ಮೇಲ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದ ದೇವಸ್ಥಾನದ ಅರ್ಚಕರನ್ನು ಬೆಂಗಳೂರಿನ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರುನ ಮಹಿಳೆ ಮೇಲೆ ಕೇರಳದ ದೇವಸ್ಥಾದ ಅರ್ಚಕ ಅತ್ಯಾಚರಕ್ಕೆ ಯತ್ನಿಸಿದ್ದು, ಪ್ರಕರಣ ಸಂಬಂಧ ಅರ್ಚಕ ಅರುಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಅರ್ಚಕ ಉನ್ನಿ ದಾಮೋದರ್ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಪೂಜೆ ಮಾಡಿಸಲೆಂದು ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಗೆ ಮಾಟ-ಮಂತ್ರದ ಬೆದರಿಕೆ ಹಾಕಿ ಮುಖ್ಯ ಅರ್ಚಕ ಹಾಗೂ ಅರ್ಚಕ ಇಬ್ಬರೂ ಈ ರೀತಿ ಕೃತ್ಯವೆಸಗಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದ ನೋವಲ್ಲಿದ್ದ ಮಹಿಳೆ ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನದ ಬಗ್ಗೆ ತಿಳಿದುಕೊಂಡಿದ್ದರು. ಹೀಗಾಗಿ ಅಲ್ಲಿಗೆ ಪೂಜೆಗೆಂದು ತೆರಳಿದ್ದರು. ಈ ವೇಳೆ ಪರಿಚಯಯಾದ ಅರ್ಚಕರು ಪೂಜೆ ಹೆಸರಿನಲ್ಲಿ ಮಾಟ-ಮಂತ್ರದ ನೆಪ ಹೇಳಿ ಮಹಿಳೆಯೊಂದಿಗೆ ವಾಟ್ಸಪ್ ಚಾಟ್, ವಿಡಿಯೋ ಕಾಲ್ ಶುರುಮಾಡಿದ್ದಾರೆ. ಅಲ್ಲದೇ ಕೇರಳಕ್ಕೆ ಬರುವಂತೆ ಕರೆಸಿಕೊಂಡು ಮತ್ತೊಂದು ಪೂಜೆ ಮಾಡಿಸಬೇಕೆಂದು ಹೇಳಿ ಬೆಟ್ಟಕ್ಕೆ ಕರೆದೊಯ್ದು ಮಹಿಳೆಯನ್ನು ಬೆತ್ತಲೆಗೊಳಿಸಿ ವಿಡಿಯೋ ರೆಕಾರ್ಡ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.
ಬಳಿಕ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದಾರೆ.ವಿಡಿಯೋಕಾಲ್ ಮಾಡಿ ತಾನು ನಗ್ನವಾಗಿದ್ದಲ್ಲದೇ ಮಹಿಳೆಗೂ ನಗ್ನವಾಗುವಂತೆ ಹ್ರೇಳಿದ್ದಾನೆ. ಅದಕ್ಕೆ ಮಹಿಳೆ ಒಪ್ಪದಿದ್ದಾಗ ಮಕ್ಕಳ ಮೇಲೆ ಮಾಟ-ಮಂತ್ರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಬೆಳ್ಳಂದೂರು ಠಾಣೆಯಲ್ಲಿ ದೂರು ನೀಡಿದ್ದರು.
ಸದ್ಯ ಅರ್ಚಕ ಅರುಣ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ.