
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಾಲ್ಯವಿವಾಹ ತಡೆಗೆ ಗ್ರಾಪಂಗಳು ಅಗತ್ಯ ಕ್ರಮಕೈಗೊಳ್ಳಬೇಕು. ಈ ಕುರಿತು ಗ್ರಾಪಂ ಆಡಳಿತ ಮಂಡಳಿ ಜನರಲ್ಲಿಯೂ ಜಾಗೃತಿ ಮೂಡಿಸಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ತಿಳಿಸಿದರು.
ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಪಂ ಕಾರ್ಯಾಲಯದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಂವಾದ ನಡೆಸಿದ ಅವರು, ಗ್ರಾಮೀಣ ಭಾಗದ ಮಕ್ಕಳು ಕೂಡ ಉನ್ನತ ಹುದ್ದೆಗೆ ಏರಬೇಕು. ಈ ನಿಟ್ಟಿನಲ್ಲಿಯೂ ಗ್ರಾಪಂಗಳು ಗಮನ ಹರಿಸಬೇಕು. ಸರಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಎಂದು ಸೂಚನೆ ನೀಡಿದರು.
ಬಳಿಕ ಗ್ರಂಥಾಲಯ, ಹಳ್ಳಿ ಸಂತೆ ಹಾಗೂ ಸರ್ಕಾರಿ ಶಾಲೆ ಹಾಗೂ ಪ್ರವಾಹ ಪೀಡಿತ ಪ್ರದೇಶ ಪರಿಶೀಲಿಸಿ, ಬಳಿಕ ವಡೇರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ವಸತಿ ನಿಲಯ ಹಾಗೂ ಅಂಗನವಾಡಿಗೆ ಭೇಟಿ ನೀಡಿದ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು.
ಗೋಕಾಕ ತಾಲೂಕಿನ ಬಳೋಬಾಳ ಗ್ರಾಪಂ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಜಿಪಂ ರಾಹುಲ್ ಶಿಂಧೆ ಅವರು ಸರಕಾರಿ ಪ್ರೌಢ ಶಾಲೆಗೆ ಭೇಟಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಬಳಿಕ ಗೋಕಾಕ ನಗರದ ಸಾರ್ವಜನಿಕ ಆಸ್ಪತ್ರೆಯ ನಮ್ಮ ಕ್ಲಿನಿಕ್ ಗೆ ಭೇಟಿ ನೀಡಿ, ವ್ಯವಸ್ಥೆಯನ್ನು ಪರಿಶೀಲಿಸಿದರು. ಗೋಕಾಕ ತಾಪಂ ಕಾರ್ಯಾಲಯದ ನವೀಕರಣ ಕಾಮಗಾರಿ ಪರಿಶೀಲಿಸಿ, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಗೋಕಾಕ ನಗರದ ಜ್ಯೂನಿಯರ್ ಕಾಲೇಜು ಸಭಾಭವನದಲ್ಲಿ ಮಂಗಳವಾರ ಮೂಡಲಗಿ ಮತ್ತು ಗೋಕಾಕ ತಾಲೂಕಿನ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ನಡೆಸಿ, ಗ್ರಾಪಂಗಳಿಂದ ಮುಂಜಾಗ್ರತಾ ಕ್ರಮವಾಗಿ ಪ್ರಕೃತಿ ವಿಕೋಪ ತಡೆಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.
ಶಾಲಾಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ನಿಗದಿತ ಕರ ವಸೂಲಿ ಮಾಡಬೇಕು. ಜೆಜೆಎಂ, 15ನೇ ಹಣಕಾಸು ಕಾಮಗಾರಿಗಳು ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮೂಡಲಗಿ ತಾಪಂ ಇಒ ಎಫ್.ಜಿ.ಚಿನ್ನನವರ, ಗೋಕಾಕ ತಾಪಂ ಇಒ ಪರಶುರಾಮ ಘಸ್ತೆ, ಎಇಇ ಉದಯಕುಮಾರ ಕಾಂಬಳೆ, ಬಿಇಒ ಅಜೀತ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪಾ ಗದಾಡಿ, ತಾಪಂ ಸಹಾಯಕ ನಿರ್ದೇಶಕರಾದ ಸಂಗಮೇಶ ರೊಡ್ಡನ್ನವರ, ಚಂದ್ರಶೇಖರ ಬಾರ್ಕಿ, ವಿನಯಕುಮಾರ ಪಿಡಿಒ ಶಿವಾನಂದ ಗುಡಸೆ, ತಾಂತ್ರಿಕ ಸಂಯೋಜಕ ನಾಗಾರ್ಜುನ ಇಳಿಗೇರ, ಎಂಐಎಸ್ ಸಂಯೋಜಕರು ನಿರಂಜನ ಮಲ್ಲವ್ವಗೋಳ, ತಾಂತ್ರಿಕ ಸಹಾಯಕ ಮಹಮ್ಮದ ನಯಾಗರ ಮತ್ತಿತರರು ಉಪಸ್ಥಿತರಿದ್ದರು.