*ಪದ್ಮಶ್ರೀ ಡಾ.ಪ್ರಭಾಕರ ಕೋರೆ ಅವರಿಗೆ ಮುಂಬೈನಲ್ಲಿ ಭವ್ಯ ಸತ್ಕಾರ*

ಪ್ರಗತಿವಾಹಿನಿ ಸುದ್ದಿ: ಮುಂಬೈ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವತಿಯಿಂದ ಪದ್ಮಶ್ರೀ ಪುರಸ್ಕೃತ ಹಾಗೂ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಕೆಎಎಚ್ಇಆರ್) ಕುಲಾಧಿಪತಿ ಡಾ. ಪ್ರಭಾಕರ ಬಿ. ಕೋರೆ ಅವರನ್ನು ಮುಂಬೈನ ನಾರಿಮನ್ ಪಾಯಿಂಟ್ನ ಯಶವಂತರಾವ್ ಚವಾಣ್ ಮೆಮೋರಿಯಲ್ ಹಾಲ್ನಲ್ಲಿ ಭವ್ಯವಾಗಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲಕುಮಾರ ಶಿಂಧೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರು ಹಾಗೂ ಸಚಿವರಾದ ಈಶ್ವರ ಖಂಡ್ರೆ, ಮಹಾರಾಷ್ಟ್ರ ವಿಧಾನಸಭೆಯ ಸಭಾಪತಿ ರಾಹುಲ್ ನಾರ್ವೇಕರ್, ಸಂಸದ ಜಗದೀಶ ಶೆಟ್ಟರ್, ಮಾಜಿ ಶಾಸಕ ಅಶೋಕ ಕೇಣಿ, ಪಂಡರಾಪುರ ದೇವಸ್ಥಾನದ ಅಧ್ಯಕ್ಷ ಗಹಿನೀನಾಥ ಮಹಾರಾಜ ಔಸೇಕರ್, ಮಾತೋಶ್ರೀ ದ್ರಾಕ್ಷಾಯಿಣಿ ಅವ್ವಾಜಿ, ಮಹೇಶ ಚಿವಟೆ, ಮಹಾರಾಷ್ಟ್ರ ರಾಜ್ಯ ಮಹಾಸಭೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿಶ್ವನಾಥ ಚಕೋಟೆ, ಮಹಿಳಾ ಸಮಿತಿ ಅಧ್ಯಕ್ಷೆ ಉಮಾ ನಾಯ್ಕ, ಮಹೇಶ ಮುದ್ದ ಸೇರಿದಂತೆ ಮುಂಬೈ ವೀರಶೈವ ಲಿಂಗಾಯತ ಸಮಾಜದ ಪ್ರಮುಖರು ಹಾಗೂ ಬಾಂಧವರು ಉಪಸ್ಥಿತರಿದ್ದರು.
ಡಾ.ಪ್ರಭಾಕರ ಕೋರೆ ಅವರ ಶಿಕ್ಷಣ, ಆರೋಗ್ಯ, ಸಹಕಾರ, ಕೃಷಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ದೀರ್ಘಕಾಲದ ಸೇವೆಯನ್ನು ಗಣ್ಯರು ಸ್ಮರಿಸಿ ಅಭಿನಂದಿಸಿದರು. ಅವರ ಸೇವೆ ಮತ್ತು ಸಾಧನೆಗಳು ಸಮಾಜಕ್ಕೆ ಸದಾ ಪ್ರೇರಣೆಯಾಗಿವೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ವೀರಶೈವ ಲಿಂಗಾಯತ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಡಾ. ಪ್ರಭಾಕರ ಕೋರೆ ಅವರಿಗೆ ಶುಭ ಕೋರಿದರು.




