Kannada NewsPragativahini Special

*ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣ ಹಾಗೂ ಐತಿಹಾಸಿಕ ಸ್ಮಾರಕಗಳು*

ರಾಜೇಶ್ವರಿ ಎಸ್ ಹೆಗಡೆ, ಬೆಳಗಾವಿ

ವರ್ಷದ ಮೊದಲ ಮಳೆ ಬಂದು ನಿಂತ ಮೇಲೆ ಮಣ್ಣಿನ ಸುವಾಸನೆಯನ್ನು ಮೆಲ್ಲ ಮೆಲ್ಲನೆ ಮೆದ್ದಹಾಗೆ,
ರುಚಿಕರ ಕಾಫಿ ಕುಡಿದು ಬಹಳಷ್ಟು ಸಮಯದವರೆಗೆ ಅದರ ರುಚಿಯನ್ನು ಅಸ್ವಾದಿಸಿದ ಹಾಗೆ, 
ದೇಶ ಸುತ್ತಿದ ಮೇಲೆ ಕೋಶ ರಚನೆ ಮಾಡಿದರೆ ಇನ್ನೆಷ್ಟೋ ಜನರ ಪ್ರವಾಸಕ್ಕೆ ಈ ಕೋಶವು ಕೈಗನ್ನಡಿ ಆಗಬಹುದು ತಾನೆ?

ನಮ್ಮ ಊರು ನಮ್ಮ ಹೆಮ್ಮೆ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಇತಿಹಾಸಕ್ಕೆ ಹೆಸರಾದ ಐತಿಹಾಸಿಕ ಸ್ಮಾರಕ ಸ್ಥಳಗಳ ಕುರಿತು ನನ್ನ ಅರಿವಿಗೆ ಬಂದಿರುವ ಅಪಾರ ಮಾಹಿತಿಗಳ ನೆನಪಿನ ಬುತ್ತಿಯ ತುತ್ತನ್ನು ತಮ್ಮ ಮುಂದಿಡಲು ಬಯಸುತ್ತೇನೆ.

ಉತ್ತರ ಕನ್ನಡ ಐತಿಹಾಸಿಕ ಸ್ಮಾರಕ ಸಂಸ್ಕ್ರತಿ ಸಾರುವ ಶ್ರೀಮಂತ ಜಿಲ್ಲೆ. ಕಣ್ಣು ಕುಕ್ಕುವಂತೆ ಮೋಡಿ ಮಾಡುವ ಹಸಿರು ವನಸಿರಿ ಹೊದ್ದ ಭವ್ಯ ಸ್ಥಳಗಳ ತಾಣವಾಗಿದೆ. ಸುತ್ತೆಲ್ಲ ಭೂಮಿಯನ್ನು ಆವರಿಸಿಕೊಂಡ ಜಲಪಾತಗಳು ನೋಡುಗರ ಕಣ್ಣಿಗೆ ಸ್ವರ್ಗದಂತೆ ಕಂಗೊಳಿಸುವುದು.

ಮಲೆನಾಡು ಸೀಮೆ,  ಗಂಡು ಮೆಟ್ಟಿದ ನಾಡು ಎಂಬ ಖ್ಯಾತಿ ಗಳಿಸಿದ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳು ವಿಶೇಷ ಪ್ರದೇಶವೆಂದೇ ಹೇಳ ಬಹುದಾಗಿದೆ. ನಾರ್ಥ್ ಕೆನರಾ ಎಂದು ಕರೆಯಲ್ಪಡುವ ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕ ರಾಜ್ಯದ ವಾಯುವ್ಯ ದಿಕ್ಕಿನಲ್ಲಿದೆ. ಈ ಕೊಂಕಣ ಜಿಲ್ಲೆಯ ಉತ್ತರಕ್ಕೆ ಗೋವಾ ರಾಜ್ಯ ಮತ್ತು ಬೆಳಗಾವಿ ಜಿಲ್ಲೆಗಳು ಇರುತ್ತದೆ. ಪೂರ್ವಕ್ಕೆ  ಧಾರವಾಡ ಮತ್ತು ಹಾವೇರಿ ಜಿಲ್ಲೆಗಳು ದಕ್ಷಿಣ ದಿಕ್ಕಿಗೆ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳನ್ನು ಹೊಂದಿದೆ. ಪಶ್ಚಿಮಕ್ಕೆ ಅರಬ್ಬಿ ಸಮುದ್ರ ಆವೃತ್ತವಾಗಿದೆ. ಜಿಲ್ಲಾ ಕೇಂದ್ರ ಕಾರವಾರವಿದ್ದು ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ಪಡೆದಿದೆ. ಈ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಭವ್ಯಯುತ ಪರ್ವತಸಿರಿ ನೆಲಸಿದೆ.

ಹಲವಾರು ಗಮ್ಯ ವೈಭವೋಪೇತ ಆಕರ್ಷಣೀಯ ಪ್ರವಾಸಿ ತಾಣಗಳು ಈ ಜಿಲ್ಲೆಯಲ್ಲಿ ನೋಡುಗರ ಕಣ್ಮನ ಸೆಳೆಯಲು ಹೆಡೆಯೆತ್ತಿ ನಿಂತಿದೆ. ವೀಕ್ಷಣೆಗೆ ಹೋಗಿ ಬರಲು ಪ್ರವಾಸಿಗರನ್ನು ಕೈಬೀಸಿ ಕರೆಯುವಂತ ಸಮರ್ಪಕ ರಸ್ತೆಗಳು ರೈಲು ಮಾರ್ಗಗಳು ಉತ್ತಮವಾಗಿ ನಿರ್ಮಾಣ ಗೊಂಡಿದೆ.

Home add -Advt

ನಾರ್ಥ್ ಕೆನರಾ ಜಿಲ್ಲೆಯು ಹೊಂದಿದ ಪ್ರವಾಸಿ ತಾಣಗಳೆಂದರೆ…..

ಅಂಕೋಲಾ, ಬನವಾಸಿ, ಭಟ್ಕಳ ,ದಾಂಡೇಲಿ, ಗೋಕರ್ಣ, ಹೊನ್ನಾವರ, ಕಾರವಾರ, ಕುಮಟಾ, ಮುರ್ಡೇಶ್ವರ, ಸಿದ್ದಾಪುರ, ಸಿರ್ಸಿ, ಯಲ್ಲಾಪೂರ ಇವೆಲ್ಲಾ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುಗಳಾಗಿದೆ. ಪ್ರವಾಸಿಗರು ತಮ್ಮ ಪ್ರವಾಸವನ್ನು ಕಡಲ ತೀರ ಕಾರವಾರದಿಂದ ಪ್ರಾರಂಭಿಸಿದರೆ ಉತ್ತಮ ಎನ್ನಬಹುದು. ಕಾರವಾರ ಜಿಲ್ಲೆಯಲ್ಲಿ ಧಾರ್ಮಿಕ ಪುಣ್ಯ ಕ್ಷೇತ್ರಗಳು ಪ್ರೇಕ್ಷಣೀಯ ಸ್ಥಳಗಳು ಪ್ರಸಿದ್ಧ ಸಮುದ್ರ ತೀರಗಳು ಕಣ್ಮನ ಸೆಳೆಯುವ

ಐತಿಹಾಸಿಕ ಸ್ಮಾರಕ ಸ್ಥಳಗಳು ಕೈ ಬೀಸಿ ಪ್ರೇಕ್ಷಕರನ್ನು ಕರೆಯುತ್ತಿದೆ

ಶಿರಸಿ ತಾಲೂಕು ಬನವಾಸಿ …

ಬನವಾಸಿ ಪಟ್ಟಣವು ಉತ್ತರ ಕನ್ನಡ ಜಿಲ್ಲೆಯ ವರದಾ ನದಿಯ ಎಡದಂಡೆಯ ಶಿರಸಿ ಮತ್ತು ಸೊರಬ ಹೋಗುವ ದಾರಿಯಲ್ಲಿದೆ. ಸಿರ್ಸಿ ಪೇಟೆಯಿಂದ ಕೇವಲ ಇಪ್ಪತ್ತ ನಾಲ್ಕು ಕಿ.ಮಿ. ದೂರದಲ್ಲಿದೆ. ಕದಂಬರ ಕಾಲದಲ್ಲಿ ವೈಜಯಂತಿಪುರ ಹೆಸರಿನ ವೈಭವೋಪೇತ ರಾಜಧಾನಿ ಎನಿಸಿಕೊಂಡಿತ್ತು. ಪ್ರತಿ ವರ್ಷ ಇಲ್ಲಿ ಕದಂಬೋತ್ಸವ ಜಾತ್ರೆಯಾಗಿ ನಡೆಯುತ್ತದೆ. ಸಂಗೀತ ನೃತ್ಯ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸದಾ ನಡೆಯುತ್ತಿರುತ್ತದೆ. ಪಂಪ ಪ್ರಶಸ್ತಿಯನ್ನು ಮೊದಲು ಹುಟ್ಟು ಹಾಕಿದ ಹೆಗ್ಗಳಿಕೆಗೂ ಈ ಸ್ಥಳ ಪ್ರಸಿದ್ಧಿ ಪಡೆದಿದೆ.ಇಲ್ಲಿ ಮಧುಕೇಶ್ವರ ದೇವಾಲಯವೂ ಇರುತ್ತದೆ.

ಶಿರಸಿ ನಗರ..

ಶಿರಸಿ ನಗರವು ಅಚ್ಚ ಹಸುರಿನ ಕಾಡುಗಳಿoದ ತುಂಬಿದ ರಮಣೀಯ ಮನಮೋಹಕ ತಾಣಗಳಿಂದ ಕಣ್ಮನ ಸೆಳೆಯುವಂತಿದೆ.ಇದೊಂದು ವಾಣಿಜ್ಯ ಕೇಂದ್ರವಾಗಿದೆ. ಅಡಿಕೆ,ತೆಂಗು ,ಬತ್ತ, ವೆನಿಲ್ಲಾ ಕಾಳುಮೆಣಸು,ಇವುಗಳನ್ನು ಇಲ್ಲಿ ಬೆಳೆಯುತ್ತಾರೆ.ಅಡಿಕೆ ತೋಟ, ಕಾಡು ಜಲಪಾತ,
ಅಡಿಕೆ ಮಾರಾಟ ಇವುಗಳಿಗೆ ಈ ನಗರ ಹೆಸರು ಪಡೆದಿದೆ.

ಮಾರಿಕಾಂಬಾ ದೇವಾಲಯ ಈ ನಗರದಲ್ಲಿ ಇರುತ್ತದೆ. ಎರಡು ವರ್ಷಕ್ಕೊಮ್ಮೆ ದೇವಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯು ಎಂಟು ದಿವಸಗಳ ಕಾಲ ನಡೆಯುತ್ತದೆ. ಇದರ ಹತ್ತಿರಕ್ಕೆ ಯಾಣ, ಬನವಾಸಿ ಸೋಂದಾ ಸ್ವರ್ಣವಲ್ಲಿ ಮಠವಿದೆ. ಇದು ಮದ್ವರ ಸ್ವಾದಿ ಮಠವಾಗಿದೆ. ವಾದಿರಾಜರ ಬೃಂದಾವನ ಜೈನ ಮಠವೂ ಇಲ್ಲಿರುವುದು. ಹತ್ತಿರದಲ್ಲಿಯೇ 17 ಕಿ.ಮಿ ದೂರದಲ್ಲಿ ಪ್ರೇಕ್ಷಣೀಯ ಸೊಬಗನ್ನು ಹೊತ್ತ ದೇವಿಮನೆ ಘಟ್ಟವನ್ನು ನೋಡ ಬಹುದಾಗಿದೆ.ಇದು ಪ್ರಕೃತಿ ಸೌಂದರ್ಯ ವೀಕ್ಷಣೆಯ ಸುಂದರ ತಾಣವಾಗಿದೆ. ಶರಾವತಿ ನದಿ ದಾರಿಯಲ್ಲಿ ಕಾಡು ಪ್ರಾಣಿಗಳು ಅಲ್ಲಲ್ಲಿ ಉದ್ದುದ್ದವಾಗಿ ಹಾವಿನಂತೆ ಹರಿಯುವ ಝರಿ ಧಾರೆಗಳಿರುತ್ತದೆ. ಸುಂದರ ಮನಮೋಹಕ ದೃಶ್ಯಗಳನ್ನು ನೋಡಲು ಕಣ್ಣೆರಡು ಸಾಲದು
ಸಿರ್ಸಿ ನಗರದಿಂದ 25 ಕಿ.ಮಿ ದೂರದಲ್ಲಿದೆ. ಪ್ರವಾಸಿಗರ ಅನುಕೂಲಕ್ಕೆ ಬಸ್ಸುಗಳು ಸಾಕಷ್ಟು ಓಡಾಡುತ್ತದೆ.


ಶಿರಸಿ ಮಾರ್ಗವಾಗಿ ಕುಮಟಾ ತಾಲೂಕುಗಳಿಗೆ ಬಸ್ಸುಗಳ ಸಂಚಾರ ಮಾಡುವಾಗ ಮಂಜಗುಣಿ ಎಂಬ ಊರಿನ ಹೆಸರು ಕಂಡು ಬರುತ್ತದೆ. ಮಂಜಗುಣಿಯಲ್ಲಿ ವೆಂಕಟ್ರಮಣ ದೇವಾಲಯವಿರುತ್ತದೆ. ಅದು ಎರಡನೇ ತಿರುಪತಿ ತಿರುಮಲ ದೇವಸ್ಥಾನ ಎಂಬ ಖ್ಯಾತಿಯನ್ನು ಪಡೆದುಕೊಂಡ ಪವಿತ್ರ ಕ್ಷೇತ್ರವಾಗಿದೆ. ಮಕ್ಕಳ ವಿವಾಹ ನಿಧಾನವಾದರೆ, ವಿವಾಹಕ್ಕೆ ವಿಘ್ನಗಳು ಮೇಲಿಂದ ಮೇಲೆ ಬಂದು ಸಂಬಂಧ ಪರಸ್ಪರ ಹೊಂದಾಣಿಕೆ ಆಗದಿರುವ ಸಂದರ್ಭದಲ್ಲಿ ಕಲ್ಯಾಣೋತ್ಸವ ಮಾಡಿಸಿದರೆ ಶೀಘ್ರ ವಿವಾಹ ನಡೆಯುತ್ತದೆ ಎಂಬ ಪ್ರತೀತಿ ಇರುವುದು. ಇದು ಶಿರಸಿ ನಗರದಿಂದ 25 ಕಿ .ಮಿ ದೂರದಲ್ಲಿದೆ, ಉತ್ತಮ ರಸ್ತೆ ಇರುತ್ತದೆ.

ಸ್ವರ್ಣವಲ್ಲಿ ಮಠ..

ಇಲ್ಲಿಯೇ ಇರುವ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀಗಳು ಲೋಕ ಕಲ್ಯಾಣಕ್ಕಾಗಿ ಪ್ರತಿ ವರ್ಷ ಭಗವದ್ಗೀತೆ ಪಠಣದ ಅಭಿಯಾನ ಕಾರ್ಯವನ್ನು ಶಾಲಾ ಕಾಲೇಜುಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ದಶಕಗಳಿಂದ ಕೈಗೆತ್ತಿಕೊಂಡು ಕರ್ನಾಟಕ ರಾಜ್ಯದ ಎಲ್ಲಾ 34 ಜಿಲ್ಲೆಗಳಲ್ಲೂ ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ಭಕ್ತಿ ಮಾರ್ಗದ ದಾರಿಯನ್ನು ಪ್ರಚಾರಪಡಿಸಿದ್ದಾರೆ ಭಗವದ್ಗೀತೆ ಅಭಿಯಾನದಲ್ಲಿ ಅಧ್ಯಾಯ ಪಠಣಗಳ ಪ್ರಾರಂಭ ಮತ್ತು ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಸಮಾಪ್ತಿ ಮಾಡುವ ರಾಜ್ಯ ಮಟ್ಟದ ಆಧ್ಯಾತ್ಮಿಕ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಭಗವದ್ಗೀತೆ ಶ್ಲೋಕ ಪಠಣ ಕುರಿತು ತರಬೇತುದಾರರನ್ನು ಅಣಿಗೊಳಿಸಿದ್ದಾರೆ .ಇಂತಹ ಸ್ವಾಮಿ ಸಂತರು ಸ್ವರ್ಣವಲ್ಲಿ ಶ್ರೀಗಳಾಗಿ ಇರುವುದು ಮಲೆನಾಡು ಸೀಮೆ ಕರಾವಳಿ ಪ್ರದೇಶದವವರ ಪುಣ್ಯವಾಗಿದೆ.

ಉಂಚಳ್ಳಿ ಜಲಪಾತ..

ಶಿರಸಿಯಿಂದ 30 ಕಿ.ಮಿ ದೂರದಲ್ಲಿ ಉಂಚಳ್ಳಿ ಜಲಪಾತವಿರುವುದು. 116 ಮೀಟರ್ ಎತ್ತರದಿಂದ ಧುಮುಕುವ ಜಲಪಾತವು ಇದಾಗಿದೆ. ನೋಡಲು ರಮಣೀಯ ಮನಮೋಹಕ ತಾಣವಾಗಿದೆ .ವರ್ಷದ ಬಹುಕಾಲದವರೆಗೂ ಇಲ್ಲಿ ನೀರು ಇರುತ್ತದೆ ವೀಕ್ಷಣೆಗೆ ಸುಂದರ ತಾಣವಾಗಿದೆ.

ಮುಂಡಗೆಕೆರೆ ಪಕ್ಷಿಧಾಮ..

ಸೋಂದಾ ಗ್ರಾಮದ ಸುಧಾಪುರ ಕ್ಷೇತ್ರದ ಬಾಡಲ ಕೊಪ್ಪ ಮಜರೆಯಲ್ಲಿರುವ ಮುಂಡಗೆಕೆರೆ ಪಕ್ಷಿಧಾಮಕ್ಕೆ ಪ್ರತಿ ವರ್ಷ ಸಾವಿರಾರು ಬೆಳ್ಳಕ್ಕಿಗಳು ವಂಶಾಭಿವೃದ್ದಿಗೆ ಜೂನ್ ತಿಂಗಳಲ್ಲಿ ಬಂದು ನೂರಾರು ಗೂಡುಗಳನ್ನು ಕಟ್ಟಿ ವಾಸ್ತವ್ಯ ಮಾಡುತ್ತವೆ. ಅಕ್ಟೋಬರ್ ತಿಂಗಳ ಕೊನೆಯ ದಿನಗಳವರೆಗೂ ಸಂತಾನೋತ್ಪತ್ತಿ ಮಾಡಿಕೊಂಡು ನಂತರದ ದಿನಗಳಲ್ಲಿ ಗೂಡು ಬಿಟ್ಟು ಹಾರಿ ಹೋಗುತ್ತದೆ. 4 ಎಕರೆ ವಿಸ್ತಾರದ ಮುಂಡಗೆಕೆರೆ ಪೂರ್ಣ ಪ್ರಮಾಣದಲ್ಲಿ ಆವರಿಸಿಕೊಂಡು ಮುಂಡಗೆ ಗಿಡಗಳ ಮೇಲೆ ಗೂಡು ಕಟ್ಟುತ್ತದೆ. ಹತ್ತಿರದ ಕೆರೆಯ ದಂಡೆಯ ಪಕ್ಕದಲ್ಲಿ ಅಂದಾಜು 40 ಅಡಿ ಎತ್ತರದ ವೀಕ್ಷಣಾ ಗೋಪುರ ಇರುವುದು.

ಮುಸುಕಿನಬಾವಿ..

ಮುಸುಕಿನ ಬಾವಿಯು ನಾಡಿಗಲ್ಲಿಯ ಕೊನೆಯಲ್ಲಿರುವುದು. 17 ನೇ ಶತಮಾನದಲ್ಲಿ ಸೋದೆಯ ಅರಸ ಸದಾಶಿವ ರಾಯನು ತನ್ನ ಪ್ರೇಯಸಿಯ ಸ್ನಾನಕ್ಕೆ ಅನುಕೂಲ ಕಲ್ಪಿಸಲು ಈ ಮುಸುಕಿನ ಬಾವಿಯನ್ನು ಕಟ್ಟಿಸಿದ್ದನು ಎಂದು ಹೇಳಲಾಗುತ್ತಿದೆ.

ಅಂಕೋಲಾ ತಾಲೂಕಿನ ಬೇಲೆಕೆರೆ….

ಬೇಲೆಕೆರೆಯಲ್ಲಿ ಪುರಾತನ ಕಾಲದ ಬಂದರನ್ನು ವೀಕ್ಷಣೆ ಮಾಡಬಹುದು. ಅಪಾರ ಅದಿರು ವೀಕ್ಷಿಸ ಬಹುದು.ಸಮುದ್ರ ತೀರವೂ ಅಲ್ಲಿಯೇ ಜನರನ್ನು ಇಣುಕಿ ನೋಡುತ್ತಿದೆ. ಕಡಿದು ಹಾಕಿದ ಮರಗಳು ಬಿದಿರು ಮರಗಳ ದಿಮ್ಮೆಗಳ ಸಂಗ್ರಹ ಇರುವುದು.ಹದಿನೈದನೇ ಶತಮಾನದ ಶೀಲಾಲಿಪಿ ಜೇನುಬೀರ ಶಿವನ ದೇವಾಲಯವು ಇಲ್ಲಿರುವುದು.

ಭಟ್ಕಳ ತಾಲೂಕು ಮುರ್ಡೇಶ್ವರ

ಭಟ್ಕಳ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಕೇಂದ್ರ ಬಿಂದುವಾಗಿದೆ.ಮಂಗಳೂರು ಮತ್ತು ಮುಂಬೈ ಮದ್ಯದಲ್ಲಿ ಚಲಿಸುವ ಕೊಂಕಣ ರೈಲ್ವೆ ಪ್ರಮುಖ ನಿಲ್ದಾಣವಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತದೆ. ಜೈನರ ನೆಲೆಬೀಡು ಇದಾಗಿದೆ. ವಿಶ್ವದಲ್ಲೇ ಎರಡನೇ ಹೆಸರು ಪಡೆದ ಶಿವನ ಮೂರ್ತಿ ಮುರ್ಡೇಶ್ವರದಲ್ಲಿದೆ. ಇದು ಪಂಚ ಕ್ಷೇತ್ರಗಳಲ್ಲಿ ಒಂದಾದ ಶಿವನ ಮೂರ್ತಿಯಾಗಿದೆ. ಪ್ರವಾಸಿಗರನ್ನು ಹಾಗೂ ಪ್ರಕೃತಿ ಪ್ರಿಯರನ್ನು ಆಕರ್ಷಿಸುವ ಪವಿತ್ರ ಸುಂದರ ಸ್ಥಳ ಇದಾಗಿದೆ. ಈ ಪವಿತ್ರ ಕ್ಷೇತ್ರವನ್ನು ಆರ್.ಎನ್.ಶೆಟ್ಟಿಯವರು ನಿರ್ಮಾಣ ಮಾಡಿದ್ದರು. ಇಲ್ಲಿ 24 ತೀರ್ಥಂಕರರ ವಿಗ್ರಹಗಳು ಸುಂದರವಾದ ಪದ್ಮಾವತಿ ದೇವಾಲಯ ಚಂದ್ರಗಿರಿಯ ಬೆಟ್ಟ ಇರುವುದು. ಮುರ್ಡೇಶ್ವರದ ಪ್ರೇಕ್ಷಣೀಯ ಸ್ಥಳಗಳಲ್ಲಿ 30 ಗಿಂತ ಹೆಚ್ಚಿನ ಜೈನ ಬಸೀದಿಗಳು ಇರುತ್ತದೆ. ಇಲ್ಲಿಯ ಅಣೆಕಟ್ಟು ಜನಗಳ ಗಮನ ಸೆಳೆಯುವಂತಿದೆ. ಆಳ್ವೆಕೋಡಿಯಲ್ಲಿ ಶಕ್ತಿ ದೇವತೆಯ ವಾಸವಿರುವುದು. 64 ಅಂತಸ್ತಿನ ಗೋಪುರ ಇಲ್ಲಿದೆ. ದುರ್ಗಾ ಪರಮೇಶ್ವರಿ ದೇವಸ್ಥಾನ ಕೂಡಾ ಇಲ್ಲಿಯೇ ಸಮೀಪವಿದ್ದು ಆ ತಾಯಿ ಮಾತೆ ಎಲ್ಲರನ್ನೂ ಕಾಪಾಡುತ್ತಾಳೆ.

ಚೆನ್ನ ಬೈರದೇವಿ…

ಚೆನ್ನ ಬೈರ ದೇವಿಯು ದಿನಾಂಕ.01.01.1536 ರಲ್ಲಿ ಭಟ್ಕಳದಲ್ಲಿ ಹುಟ್ಟಿದ್ದಳು.ಇವಳು ಸಾಳುವ ರಾಜ ವಂಶಸ್ಥೆ ಆಗಿದ್ದಳು.16 ನೇ ಶತಮಾನದಲ್ಲಿ ಒಬ್ಬ ರಾಣಿಯಾಗಿ ಇಲ್ಲಿ ಆಳ್ವಿಕೆ ನಡೆಸಿದವಳು ಆಗಿದ್ದಳು. ಸುಧೀರ್ಘ 54 ವರ್ಷಗಳ ಕಾಲ ರಾಜ್ಯಭಾರ ನಡೆಸಿದ ಕೀರ್ತಿಗೆ ಪಾತ್ರಳಾದಳು.೧೫೫೨ ರಿಂದ ೧೬೦೬ ರ ವರೆಗೆ ಈ ರಾಣಿಯ ರಾಜ್ಯಭಾರ ಭಟ್ಕಳ ಪ್ರಾಂತ್ಯಗಳಲ್ಲಿ ನಡೆಯಿತು.

೧೫೫೯ ರಿಂದ ೧೫೭೦ ರಲ್ಲಿ ಪೋರ್ಚುಗಿಸರ ವಿರುದ್ಧ ಯುದ್ಧವನ್ನು ಮಾಡಿ ಗೆದ್ದು ಹೆಸರುವಾಸಿಯಾದಳು. ಈ ಕಾರಣದಿಂದಾಗಿ ವಾಣಿಜ್ಯ ವ್ಯಾಪಾರ ಸಂಬಂಧಗಳು ಹೆಚ್ಚು ಹೆಚ್ಚಾಗಿ ಮುಂದುವರಿದವು ಭಟ್ಕಳ ಮತ್ತು ಹೊನ್ನಾವರ ಬಂದರುಗಳ ಮೂಲಕ ಯುರೋಪ್ ಮತ್ತು ಅರಬ್ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮೆಣಸು ಮತ್ತು ಮಸಾಲೆ ಪದಾರ್ಥಗಳು ರಪ್ತು ಆಗುತ್ತಿದ್ದವು. ವ್ಯಾಪಾರ ನಿಯಂತ್ರಣಕ್ಕಾಗಿ ಅಘನಾಶಿನಿ ನದಿ ದಡದಲ್ಲಿ ಮಿರ್ಜಾನ್ ಕೋಟೆಯನ್ನು ನಿರ್ಮಿಸಿದಳು.


ಆ ಕಾರಣ ಇವರಿಗೆ ಮಹಾಮಂಡಲೇಶ್ವರ ಮೆಣಸಿನ ರಾಣಿ ಎಂಬ ಬಿರುದು ನಾಮಾಂಕಿತ ಗೊಳಿಸಿತು. ಈ ರಾಣಿಯ ಕಂಚಿನ ಪ್ರತಿಮೆ ಅಲ್ಲಿ ಅನಾವರಣಗೊಂಡು ರಾರಾಜಿಸುವುದು ನೋಡಲು ತುಂಬಾ ಹೆಮ್ಮೆ ಅನಿಸುವುದು.

ಭಟ್ಕಳ ತಾಲೂಕಿನಲ್ಲಿ ಇರುವ ಹಾಡವಳ್ಳಿ( ಸಂಗಿತಪುರ) ಮತ್ತು ಗೇರುಸೊಪ್ಪ ಊರುಗಳನ್ನು ಈ ರಾಣಿಯು ಆಳುತ್ತಿದ್ದಳು. ಆ ಪ್ರಯುಕ್ತ ಈ ರಾಣಿಯನ್ನು ಗೇರುಸೊಪ್ಪೆ ರಾಣಿ ಎಂದು ಕರೆಯಲು ಜನರುಗಳು ಪ್ರಾರಂಭ ಮಾಡಿದರು. ಭಾರತ ದೇಶದ ಇತಿಹಾಸದಲ್ಲಿ ಸುದೀರ್ಘ ಆಡಳಿತ ನಡೆಸಿದ ರಾಣಿ ಎಂಬ ಹೆಗ್ಗಳಿಕೆ ಪಡೆದ ಏಕೈಕ ರಾಣಿ ಎಂದರೆ ಚೆನ್ನಬೈರಾದೇವಿ ಎನ್ನಬಹುದಾಗಿದೆ. ಈ ರಾಣಿಯು ಎಲ್ಲ ಕಡೆಗಳಲ್ಲೂ ದೇವಾಲಯ ನಿರ್ಮಿತ ಕಾರ್ಯಗಳನ್ನು ಮಾಡುವ ಮೂಲಕ ಪ್ರಸಿದ್ಧಿ ಆದಳು. ೭೦ ವರುಷಗಳ ಕಾಲ ಬದುಕಿ ಉತ್ತಮೋತ್ತಮ ಕಾರ್ಯ ನಿರ್ವಹಿಸಿ ೧ ಜೂನ್ ೧೬೦೬ ರಲ್ಲಿ ಇಹ ಲೋಕ ಯಾತ್ರೆಗೆ ವಿರಾಮ ನೀಡಿದಳು.

ಹಳಿಯಾಳ ತಾಲೂಕು ದಾಂಡೇಲಿ..
ದಾಂಡೇಲಿ ಕಾಳಿ ನದಿಯ ದಡದಲ್ಲಿ ಇರುವ ಪುಟ್ಟ ನಗರ. ಕೈಗಾರಿಕೆ ವಸಾಹತಿಗೆ ಹೇಳಿ ಮಾಡಿಸಿದ ಪ್ರಸಿದ್ಧ ಸ್ಥಳವಾಗಿದೆ.ಉತ್ತರ ಭಾರತದ ಉದ್ಯಮಿಗಳು ಈ ನಗರಕ್ಕೆ ಬಂದು ಕಾಗದ ಕಾರ್ಖಾನೆ ಮರದ ಕಾರ್ಖಾನೆ ಕಬ್ಬಿಣದ ಹಲವಾರು ಅತ್ಯುತ್ತಮ ಉತ್ಪಾದಕ ಘಟಕ ಇವುಗಳನ್ನು ಸ್ಥಾಪಿಸಿರುತ್ತಾರೆ.ಪಶ್ಚಿಮ ಘಟ್ಟದ ಹಸುರಿನ ವನಸಿರಿ ಮಡಿಲಿನ ಸುಂದರ ನಗರವು ಇದಾಗಿದೆ. ಇದೊಂದು ಕಣ್ಮನ ಸೆಳೆಯುವ ಪ್ರವಾಸಿ ತಾಣವಾಗಿದೆ. ಇಲ್ಲಿ ಬ್ರಹದಾಕಾಕರದಲ್ಲಿ ಬೆಳೆದುಕೊಂಡಿರುವ ಕಾಗದ ಕಾರ್ಖಾನೆಯು ದಾಂಡೇಲಿ ನಗರವನ್ನೇ ಆವರಿಸಿಕೊಂಡಿದೆ.

ದಾಂಡೇಲಿ ವನ್ಯಜೀವಿ ಅಭಯಾರಣ್ಯ…

ದಾಂಡೇಲಿ ವನ್ಯಜೀವಿ ಧಾಮವು ಕಾಳಿ ನದಿಯ ದಡದಲ್ಲಿರುವ ಸಮೃದ್ದ ಅರಣ್ಯವನ್ನು ಈ ವನ್ಯಜೀವಿ ಧಾಮ ಆವರಿಸಿ ಕೊಂಡಿದೆ. ದಾಂಡೇಲಿ ಅರಣ್ಯ ಪ್ರದೇಶದಲ್ಲಿ ವಿವಿಧ ಪ್ರಾಣಿ ಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ. ಕಟ್ಟಿಗೆಯ ಕೆತ್ತನೆ ಕೆಲಸಕ್ಕೆ ದಾಂಡೇಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಅಭಯಾರಣ್ಯವು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಪ್ರವಾಸಿಗರು ಮೇಲಿಂದ ಮೇಲೆ ಈ ಸ್ಥಳಕ್ಕೆ ಬೇಟಿ ನೀಡುತ್ತಿರುತ್ತಾರೆ.

ಕಾರವಾರ ನಗರ…ಭಾರತ ದೇಶದ ಭೂಖಂಡದ ಆಗ್ನೇಯ ದಿಕ್ಕಿನಲ್ಲಿ ಇರುವ ಉತ್ತರ ಕನ್ನಡ ಜಿಲ್ಲೆಯು ಪ್ರವಾಸಿಗರ ಆಕರ್ಷಣೆಯ ಸ್ವರ್ಗವಾಗಿದೆ. ಹಲವಾರು ಪೌರಾಣಿಕ ಹಿನ್ನೆಲೆಯನ್ನು ಒಳಗೊಂಡಿದೆ. ಅರಬ್ಬಿ ಸಮುದ್ರ ಒಂದೆಡೆಯಾದರೆ ಇನ್ನೊಂದೆಡೆ ಎತ್ತರದ ಪಶ್ಚಿಮ ಘಟ್ಟಗಳ ಕಾಡುಗಳು ನಡುವೆ ಭೂಭಾಗದಲ್ಲಿ ವಾಸಿಸುವ ಜನರುಗಳು ಇರುತ್ತಾರೆ.

ಇಲ್ಲಿಯ ಬಹುತೇಕ ದೇವಾಲಯಗಳಲ್ಲಿ ಜನರುಗಳು ಧರಿಸುವ ಆಭರಣಗಳು ಹಾಗೂ ಕರಾವಳಿಯ ಗಂಡು ಮೆಟ್ಟಿನ ಕಲೆಯಾದ ಯಕ್ಷಗಾನದ ಉಡುಪುಗಳು ನಿಸರ್ಗ ಸಂಪನ್ಮೂಲದ ಹೂ, ಹಣ್ಣು, ಕಾಯಿ ಹುಲಿಯ ಉಗುರು ಇವುಗಳಿಂದ ತಯಾರಿಸಲಾಗುತ್ತದೆ. ಬುಜಕಟ್ಟು ಸೊಂಟಪಟ್ಟಿ ಕಿರೀಟ ಕೇದಗೆ ಇವುಗಳೆಲ್ಲ ತಯಾರಿಸಲ್ಪಡುವ ಜಿಲ್ಲೆಯು ಇದಾಗಿದೆ.

ವಿಶ್ವಕವಿ ರವೀಂದ್ರನಾಥ ಠಾಗೋರ್ ರವರು ಕಾರವಾರದ ಕಡಲತೀರವು ಶಾಂತಿ ನೆಮ್ಮದಿಯ ರಮಣೀಯ ತಾಣವಾಗಿದ್ದು, ಪ್ರಕೃತಿ ಸೌಂದರ್ಯವು ಎಂದಿಗೂ ಮರೀಚಿಕೆಯಾಗದೆ ಸದಾ ಕಣ್ಮನ ಸೆಳೆಯುವಂತೆ ಅಚ್ಚ ಹಸುರಿನಲ್ಲಿ ಕಾಣುತ್ತದೆ ಎಂದು ಕಾರವಾರವನ್ನು ಹಾಡಿ ಹೊಗಳಿದ್ದಾರೆ .

“ಮಹಡಿಯ ಮನೆ” ಸಿನೆಮಾದಲ್ಲಿ ಪಿ.ಬಿ.ಶ್ರೀನಿವಾಸ ರವರು ಹಾಡಿದ ಹಾಡು
“ನಾ ನೋಡಿ ನಲಿಯುವ ಕಾರವಾರ “
“ಕನ್ನಡ ನಾಡಿಗಿದು ಕಾಶ್ಮೀರ ” ಎಂದು ಅಷ್ಟೊಂದು ಸೊಗಸಾಗಿ ಹಾಡಿದ್ದಾರೆ ಈ ಹಾಡಿಗೆ ಸಾಹಿತ್ಯವನ್ನು ಸಿ.ವಿ ಶಿವಶಂಕರ್ ರವರು ರಚಿಸಿದ್ದಾರೆ ಆ ಅವಧಿಯಲ್ಲಿಯೇ ಕಾರವಾರವನ್ನು ಕಾಶ್ಮೀರಕ್ಕೆ ಹೋಲಿಸಿದ್ದಾರೆ ಎಂದರೆ ಕಾರವಾರ ಜಿಲ್ಲೆ ಹೇಗಿರಲು ಸಾಧ್ಯ ?ಎಂದು ಪ್ರವಾಸಿಗರ ಭಾವನೆಯಲ್ಲಿಯೂ ಮೂಡಬಹುದೆಂದು ಭಾವಿಸುತ್ತೇನೆ.

ಕಾರವಾರ ಬೀಚ್ ನ್ನು ಎದುರಿನಲ್ಲಿ ವೀಕ್ಷಿಸುತ್ತಾ ನಿಂತರೆ ಅಚ್ಚ ಹಸಿರು ಹೊದ್ದ ಪರ್ವತ ಕಾಣುತ್ತದೆ . ಆ ಪರ್ವತ ಶ್ರೇಣಿಗಳ ಹೆಸರುಗಳೆಂದರೆ ದೇವಗಡ ಮದ್ಲಿoಗ್ ಗಡ ಕುಡುಮ್ ಗಡ ಎಂದು ಕರೆಯಲಾಗುತ್ತದೆ . ಈ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ಬೋಟ್ ಮೇಲೆ ಹೋಗಿ ವೀಕ್ಷಣೆ ಮಾಡಿ ಬರಬಹುದಾಗಿದೆ.

ಕುಡಮ್ ಗಡದಲ್ಲಿ ನರಸಿಂಹ ದೇವರ ಜಾತ್ರೆ ನಡೆಯುತ್ತದೆ. ದೇವಗಡದಲ್ಲಿ ಲೈಟಿoಗ್ ಹೌಸ್ ನೋಡ ಬಹುದಾಗಿದೆ. ಈಗ ಅಲ್ಲಿ ಒಂದು ರೆಸಾರ್ಟ್ ಆಗಿರುತ್ತದೆ. ಪ್ರವಾಸಕ್ಕೆ ಊಟ ತಿನಿಸು ನೀರು ಎಲ್ಲವನ್ನು ಕಟ್ಟಿಕೊಂಡು ಹೋಗಿ ಬರಲು ಸುಂದರ ಪ್ರವಾಸಿ ತಾಣವಾಗಿದೆ.ಅಲ್ಲಿ ಜನವಸತಿ ತೀರಾ ವಿರಳವಾಗಿದೆ.

ಕಾಳಿ ನದಿಯ ಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದೆ.ನಿತ್ಯ ಹರಿದ್ವರ್ಣ ಕಾಡುಗಳು ಪೂರ್ವ ದಿಕ್ಕಿಗೆ ಹೊಂದಿಕೊಂಡಿದೆ. ಪಶ್ಚಿಮ ದಿಕ್ಕಿಗೆ ಅರಬ್ಬಿ ಸಮುದ್ರವು ಉತ್ತರ ದಿಕ್ಕಿಗೆ ಕಾಳಿ ನದಿಯು ಪ್ರವಾಸಿಗರ ಸ್ವಾಗತ ಕೋರುತ್ತಿದೆ.1956 ರ ವರೆಗೂ ಬಾಂಬೆ ಪ್ರಸಿಡೆನ್ಸಿ ಭಾಗವು ಇದಾಗಿತ್ತು. ಕರಾವಳಿ ಜಿಲ್ಲೆಯು ಸುಂದರವಾದ ಕಡಲ ತೀರಗಳನ್ನು ಹೊಂದಿದ್ದು ಭೂಮಿ ಮತ್ತು ಸೂರ್ಯನ ಚೆಲ್ಲಾಟಕ್ಕೆ ನೆಚ್ಚಿನ ತಾಣವಾಗಿದೆ.


ಇಲ್ಲಿಯ ಶೇಕಡಾ 70 ಕ್ಕಿಂತ ಹೆಚ್ಚಿನ ಭಾಗವು ಅರಣ್ಯದಿಂದ ಆವೃತ್ತವಾಗಿದೆ.ಕಾರವಾರ ಜಿಲ್ಲೆಯು ಪ್ರಕೃತಿ ಮಾತೆಯ ರಮ್ಯ ಮನೋಹರ ತಾಣವೆನಿಸಿದೆ.ಕಾರವಾರ ಜಿಲ್ಲೆಯಿಂದ ಭಾರತದ ಪ್ರಮುಖ ನಗರಗಳಿಗೆ ರೈಲು ಸಂಪರ್ಕವಿದೆ.ಕೊಂಕಣ ರೈಲು ವ್ಯವಸ್ಥೆಯೂ ಇದೆ.ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬಸ್ಸುಗಳ ವ್ಯವಸ್ಥೆ ಉತ್ತಮ ರೀತಿಯಿಂದ ಕೂಡಿದೆ. ಜಿಲ್ಲೆಯಿಂದ ಸಾಕಷ್ಟು ಬಸ್ಸುಗಳು ಪ್ರಮುಖ ನಗರಗಳಾದ ಪುಣೆ,ಮುಂಬೈ, ಬೆಂಗಳೂರು,ಮಣಿಪಾಲ ಧರ್ಮಸ್ಥಳ ಇತ್ಯಾದಿ ಸ್ಥಳಗಳಿಗೆ ದಿನಂಪ್ರತಿ ಓಡಾಡುತ್ತಿರುತ್ತದೆ.

ಉತ್ತರ ಕನ್ನಡ ಜಿಲ್ಲೆಯು ಮಲೆನಾಡು ಕರಾವಳಿ ಗಂಡು ಮೆಟ್ಟಿದ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ಜಿಲ್ಲೆಯನ್ನು ಕರ್ನಾಟಕ ರಾಜ್ಯದ ವಿಶೇಷ ಪ್ರದೇಶ ಎಂದು ಗುರುತಿಸಬಹುದಾಗಿದೆ. ವೈವಿಧ್ಯಮಯ ಸಂಸ್ಕ್ರತಿ, ಸಂಪ್ರದಾಯ, ಹೊಂದಿದ ಈ ಸುಂದರ ಜಿಲ್ಲೆಯು ಐತಿಹಾಸಿಕ ಪ್ರವಾಸಿಗರ ತಾಣವಾಗಿ ಜನರುಗಳಿಂದ ವಿಶೇಷ ಮನ್ನಣೆ ಗಳಿಸಿದೆ. ಭಾಷೆಯಲ್ಲಿ ಕಂಡು ಬರುವ ಸೊಗಸು ಆಚಾರಗಳು ಎಲ್ಲ ದೃಷ್ಟಿಯಿಂದ ನೋಡಿದರೂ ಒಂದು ತೂಕ ವಿಶೇಷತೆ ಈ ಜಿಲ್ಲೆಯ ಜನರಲ್ಲಿ ಕಂಡು ಬರುತ್ತದೆ.ಐತಿಹಾಸಿಕ ಮಹತ್ವ ಪಡೆದ ಶಿಲ್ಪ ಕಲಾ ರಚನೆ ಆಕರ್ಷಣೆಗೆ ಒಳ ಪಡುವಂತಹ ಹಲವಾರು ದೇವಾಲಯಗಳು ಪ್ರವಾಸಿ ತಾಣಗಳಾಗಿ ಕಂಡು ಬಂದಿದೆ. ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ಶಿರವಾಡ ಎಂಬ ಒಂದು ಊರು ಇದ್ದು ಅಲ್ಲಿ ಪಂಚ ಕ್ಷೇತ್ರಗಳಲ್ಲಿ ಒಂದಾದ ಸಜ್ಜೇಶ್ವರ ಎಂಬ ಖ್ಯಾತಿಯ ಶಿವನ ದೇವಾಲಯವು ಇರುತ್ತದೆ.ಈ ಪುಣ್ಯ ಕ್ಷೇತ್ರಕ್ಕೆ ಶಿವರಾತ್ರಿ ದಿನಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ.

ಅಚ್ಚ ಹಸುರಿನ ಕಾಡು ತಿಳಿ ನೀಲಿ ಸಮುದ್ರ ರಭಸದಿಂದ ಹರಿದು ಬರುತ್ತಿರುವ ಕಾಳಿ ನದಿ ನಿಗೂಡವಾದ ಅರಣ್ಯ ಪ್ರದೇಶವು .ಧ್ಯಾನಾಸಕ್ತರಿಗೆ ಧ್ಯಾನಕ್ಕೆ ಅಗತ್ಯ ಧಾರ್ಮಿಕ ಸ್ಥಳಗಳು ಸಂಸ್ಕ್ರತಿ ಸಂಪ್ರದಾಯ ಆಸಕ್ತರಿಗೆ ಹಾಡು ಹರಟೆ ಕಟ್ಟೆಗಳು ಇವೆಲ್ಲವನ್ನು ಒಟ್ಟಿಗೆ ತನ್ನ ಮಡಿಲಲ್ಲಿ ಸೇರಿಸಿಕೊಂಡು ಖ್ಯಾತಿ ಪಡೆದ ಜಿಲ್ಲೆ ಎಂದರೆ ಉತ್ತರ ಕನ್ನಡ ಜಿಲ್ಲೆ ಎಂದು ಯಾವುದೇ ಹಮ್ಮು ಬಿಮ್ಮು ಇಲ್ಲದೆ ಹೇಳ ಬಹುದಾಗಿದೆ.

ಅಣುಶಕ್ತಿ ಉತ್ಪಾದನಾ ಕೇಂದ್ರ ಕೈಗಾ..

ಅಣುಶಕ್ತಿ ಉತ್ಪಾದನಾ ಕೇಂದ್ರ ಕೈಗಾ ಸ್ಥಾವರವು ದೇಶದಲ್ಲಿ ಪ್ರಥಮ ಏಕೈಕ ಅಣುವಿದ್ಯುತ್ ಸ್ಥಾವರವಾಗಿದೆ. ತಲಾ 220 ಮೆ. ವ್ಯಾ.ಗಳ .4  ವಿದ್ಯುತ್ ಘಟಕಗಳು ತಲಾ 100 ಮೆ. ವ್ಯಾ ಗಳ.5 ಘಟಕ ಹೊಂದಿದ್ದು 6 ನೇ ವಿದ್ಯುತ್ ಘಟಕಗಳ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಹೆಮ್ಮೆಯ ವಿಷಯ ಎನ್ನಬಹುದಾಗಿದೆ. ಕಾಳಿ ನದಿ ತೀರದಲ್ಲಿ ಈ ಅಣುವಿದ್ಯುತ್ ಸ್ಥಾವರ ಇರುವುದು ಇನ್ನೂ ವಿಶೇಷವಾಗಿದೆ. 

ಯುದ್ದ ನೌಕಾ ಮ್ಯೂಸಿಯಂ….

ಭಾರತ ದೇಶದ ವಿಶಾಖ ಪಟ್ಟಣವನ್ನು ಹೊರತು ಪಡಿಸಿದರೆ ಸುಸಜ್ಜಿತ ಯುದ್ದ ನೌಕಾ ವಸ್ತು ಸಂಗ್ರಹಾಲಯ ಇಲ್ಲಿರುವುದು ವಿಶೇಷವಾಗಿದೆ. ಇಲ್ಲಿಯೇ ಏಕೈಕ ಯುದ್ದ ನೌಕೆ ಸಂಗ್ರಹಾಲಯವಿದೆ. ಭಾರತ ಪಾಕ್ ನಡುವೆ ನಡೆದ ಯುದ್ಧದಲ್ಲಿ ಪಾಲ್ಗೊಂಡು ನಿವೃತ್ತಿ ಹೊಂದಿದ ಐ.ಎನ್.ಎಸ್. ಚಾಪೆಲ್ ನೌಕೆಯನ್ನು ಪ್ರದರ್ಶನಕ್ಕೆ ಇಲ್ಲಿಡಲಾಗಿದೆ.

ರವೀಂದ್ರನಾಥ ಕಡಲ ತೀರದ ಸಾಗರ ಮತ್ಸ್ಯಲಯ ಜಲ ಸಾಹಸ ಕ್ರೀಡಾ ಚಟುವಟಿಕೆಗಳು ರಾಕ್ ಗಾರ್ಡನ್ ಕೂಡಾ ಇಲ್ಲಿಯೇ ಹತ್ತಿರದಲ್ಲಿರುವುದು ವಿಶೇಷವಾಗಿದೆ .

ಸಂಗ್ರಹಾಲಯ ಪಕ್ಕದಲ್ಲಿ ಯುದ್ದ ವಿಮಾನ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡುತ್ತಿರುವುದು ಇನ್ನೂ ಹೆಚ್ಚಿನ ವಿಶೇಷ ಸಂಗತಿಯಾಗಿದೆ. ಈ ಸ್ಥಳದ ವೀಕ್ಷಣೆಯನ್ನು ಕಾರವಾರದಿಂದ ಕಾಲ್ನಡಿಗೆಯಲ್ಲಿ ಹೋಗಿ ನೋಡಬಹುದಾಗಿದೆ.

ಸೀಬರ್ಡ್ ನೌಕಾನೆಲೆ…

ಸೀಬರ್ಡ್ ನೌಕಾನೆಲೆ ಏಷ್ಯಾ ಖಂಡದ ತುಂಬಾ ದೊಡ್ಡದಾದ ನೌಕಾನೆಲೆ ಆಗಿದೆ. ಐ.ಎನ್.ಎಸ್. ಕದಂಬ ಎಂದು ಅದಕ್ಕೆ ಹೆಸರನ್ನಿಡಲಾಗಿದೆ. ಭೂಮಿಯ ಮೇಲೆ ಹಡಗನ್ನು ತಂದು ದುರಸ್ತಿ ಕಾರ್ಯವನ್ನು ಮಾಡುವ ತಂತ್ರಜ್ಞಾನ ಶೀಪ್ ಲೀಪ್ಟ್ ಯುದ್ದನೌಕೆ ತಂಗುದಾಣವು ಇಲ್ಲಿರುತ್ತದೆ. ದೇಶದಲ್ಲಿ ಅತಿ ದೊಡ್ಡದಾದ ವಿಮಾನವಾಹಕ ಯುದ್ದ ನೌಕೆ ಐಎನ್ಎಸ್ ವಿಕ್ರಮಾದಿತ್ಯ ಇಲ್ಲಿ ನೆಲೆಗೊಂಡಿದೆ. ನೌಕಾ ನೆಲೆಯ ಎರಡನೇ ಹಂತದ ಕಾಮಗಾರಿ ಕಾರ್ಯವು ಪ್ರಾರಂಭಗೊಂಡಿರುವುದು ಸಂತೋಷ ಸಂಗತಿಯಾಗಿದೆ.

ಕಾಳಿ ನದಿ…

ಕಾಳಿ ನದಿಯು ಬಂಡೆ ಕಲ್ಲುಗಳ ನಡುವೆ ಇಳಿ ಜಾರಿನಲ್ಲಿದೆ ರಾಪ್ಟಿಂಗ್ ಮಾಡುವ ಅವಕಾಶ ಇಲ್ಲಿ ಮಾತ್ರವೇ ಸಿಗಲು ಸಾಧ್ಯವಿದೆ. ಸೂಪಾ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದಾಗ ರಾಪ್ಟಿoಗ್ ನಡೆಸುವ ಮಜವೇ ಬೇರೆ ಆಗಿರುವುದು. ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ರಾಪ್ಟಿoಗ್ ಸ್ಪರ್ಧೆಯೂ ಈ ಸ್ಥಳದಲ್ಲಿ ನಡೆದಿರುತ್ತದೆ ಎಂಬುದು ವಿಶೇಷ ಸಂಗತಿಯಾಗಿದೆ.

ದೇಶ ವಿದೇಶದ ಜನರುಗಳು ಈ ರಾಪ್ಟಿoಗ್ ಸ್ಫರ್ಧೆ ಹಾಗೂ ವೀಕ್ಷಣೆಗೆ ಆಗಮಿಸಿದ್ದು ಇನ್ನೂ ವಿಶೇಷವಾಗಿತ್ತು. ಜೋಯಡಾ ತಾಲೂಕು ಕೇಂದ್ರದಿಂದ 20 ಕಿ.ಮಿ ಮುಂದೆ ರಾಪ್ಟಿoಗ್ ಆರಂಭವಾಗುತ್ತದೆ.

ಗಣೇಶಗುಡಿ..

ಗಣೇಶಗುಡಿಯು ಜಿಲ್ಲಾ ಕೇಂದ್ರ ಕಾರವಾರದಿಂದ ಅಂದಾಜು 100 ಕಿ.ಮಿ ಇರುವುದು. ಹುಬ್ಬಳ್ಳಿಯಿಂದ 15 ಕಿ.ಮಿ ದೂರದಲ್ಲಿದೆ. ಇಲ್ಲಿ ಎಲ್ಲಾ ರೀತಿಯ ಸೌಲಭ್ಯ ಸವಲತ್ತಗಳು ಇರುವುದು. ಈ ಜಿಲ್ಲೆಗೆ ನಾರ್ಥ ಕೆನರಾ ಎಂತಲೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ವಾಯುವ್ಯ ದಿಕ್ಕಿನಲ್ಲಿ ನೆಲಸಿರುವ ಕೊಂಕಣ ಜಿಲ್ಲೆ ಇದಾಗಿದೆ. ಅರಬ್ಬಿ ಸಮುದ್ರ ಇಲ್ಲಿರುವುದು. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಭವ್ಯಯುತ ಪರ್ವತಸಿರಿ ನೆಲಸಿ ಮನ ಚುಂಬಿಸುವಂತಿದೆ.

ಸೌಂದರ್ಯ ಪ್ರೀತಿಯನ್ನು ಧಾರಾಳವಾಗಿ ದಾರೆ ಎರೆಯುವ ಈ ಜಿಲ್ಲೆಯ ಈ ಊರುಗಳಿಗೆ ಹೊರಡುವವರು ಗಮನಿಸ ಬೇಕಾದ ವಿಶೇಷ ಮಾಹಿತಿಯನ್ನು ಈ ಕೆಳಗಿನಂತೆ ಉಲ್ಲೇಖಿಸಿರುತ್ತೇನೆ ಈ ವಿಶೇಷತೆ ಹೊಂದಿದ ಪಟ್ಟಿಯನ್ನು ಈ ಚೆಲುವಿನ ಚಿತ್ತಾರದ ನಾಡಿಗೆ ಅರ್ಪಿಸುತ್ತೇನೆ.

1. ಧ್ಯಾನಾಸಕ್ತರಿಗೆ, ಮುರ್ಡೇಶ್ವರ.
2. ಗೋಕರ್ಣ,ಓಂ ಆಕಾರ ಬೀಚ್.
3. ಮಾಗೋಡು,ರಮಣೀಯ ಪಾಲ್ಸ್.
4. ಆಪ್ಸರ ಕೊಂಡ, ವಿಶೇಷ ಸ್ಥಳ
5. ಮಿಂಚಳ್ಳಿ. ಅಘನಾಶಿನಿ ನದಿ 116 ಎತ್ತರದಿಂದ ಜಿಗಿಯುತ್ತದೆ.
ಸಹಸ್ರ ಲಿಂಗ, ಚಮತ್ಕಾರ ಶಿವ ಲಿಂಗಗಳು, ಬಸವ ಮೂರ್ತಿ, ಸಾಕಷ್ಟು ಸಂಖ್ಯೆಯಲ್ಲಿದೆ. ಒಂದು ಕಿ.ಮಿ ನಷ್ಟು ಶಿವನ ಮೂರ್ತಿ ಹರಡಿ ಕೊಂಡಿದೆ. ನದಿಯ ನಡುವೆ ಬಂಡೆಕಟ್ಟಿ ಲಿಂಗಗಳು ಬಸವನ ಮೂರ್ತಿಯನ್ನು ಕೆತ್ತಲಾಗಿದೆ. ಸೋದೆ ಅರಸರ ಕಾಲದಲ್ಲಿ ಲಿಂಗಗಳು ನಿರ್ಮಿತವಾಗಿದ್ದವು. ಇವುಗಳು ವಿಶೇಷವಾಗಿ ಜನರ ಗಮನ ಸೆಳೆಯುತ್ತದೆ.

ಯಲ್ಲಾಪುರ ತಾಲೂಕು..

ಸಾಥೋಡಿ ಜಲಪಾತ

ಸಾಥೋಡಿ ಜಲಪಾತವು ಪಶ್ಚಿಮ ಘಟ್ಟದ ಪ್ರಾಚೀನ ಕಾಲದ ಜಲಪಾತವಾಗಿದೆ. ಪುಟ್ಟ ಪುಟ್ಟ ತೊರೆಗಳು ಸೇರಿಕೊಂಡು ಸಾಥೋಡಿ ಜಲಪಾತವನ್ನು ನಿರ್ಮಿಸಿಕೊಂಡಿದೆ.ನೈಸರ್ಗಿಕ ಮನೋಹರ ಸೌಂದರ್ಯದಿಂದ ಕಂಗೋಳಿಸುತ್ತಿದೆ.

ಬೀಮ್ ಕೋಲ್ ಕಾರವಾರ..

ಅಚ್ಚ ಹಸುರಿನ ನಡುವೆ ಬೀಮ್ ಕೋಲ್ ಕೆರೆ ಇರುವುದರಿಂದ ನಿಸರ್ಗ ಪ್ರಿಯರನ್ನು ಕೈ ಬೀಸಿ ಸೆಳೆಯುವ ಚಿತ್ರವನ್ನು ಈ ಬೀಮ್ ಕೋಲ್ ಡ್ಯಾಮ್ ಹೊಂದಿದೆ.

ಮಾಗೋಡು ಜಲಪಾತ..

ಯಲ್ಲಾಪುರ ತಾಲೂಕನ್ನು ಹೊಂದಿಕೊಂಡಿರುವ ಮಾಗೋಡು ಜಲಪಾತವು ಉತ್ತರ ಕನ್ನಡ ಜಿಲ್ಲೆಯವರ
ಜನಪ್ರೀಯ ಜಲಪಾತವಾಗಿದೆ. ಈ ತಾಲೂಕಿನಲ್ಲಿ ಬೇಡ್ತಿ ನದಿ ಸುಮಾರು ಎರಡು ನೂರು ಮೀಟರ್ ಎತ್ತರದಿಂದ ದೊಡ್ಡ ಬಂಡೆಯ ಮೇಲೆ ಎರಡು ಭಾಗಗಳಲ್ಲಿ ಧುಮುಕಿ ಮಾಗೋಡು ಜಲಪಾತ ಖ್ಯಾತಿ ಪಡೆದುಕೊಂಡಿತು.

ಜೇನುಕಲ್ಲು ಗುಡ್ಡ..


ಇದು ಮಾಗೋಡು ಗ್ರಾಮದಲ್ಲಿ ನೆಲೆಗೊಂಡಿರುವ ರಮಣೀಯ ಸ್ಥಳವಾಗಿದೆ. ಪಶ್ಚಿಮ ಘಟ್ಟದಲ್ಲಿನ ಕಣ್ಮನ ಸೆಳೆಯುವ ಅದ್ಬುತ ಸ್ಥಳವೆನ್ನ ಬಹುದಾಗಿದೆ. ಜೇನು ಕಲ್ಲು ಗುಡ್ಡದಿಂದ ಕಣಿವೆಯಲ್ಲಿ ನೀರು ಬರುತ್ತಿರುವುದನ್ನು ಇಲ್ಲಿ ವೀಕ್ಷಿಸ ಬಹುದು.

ಅಂಕೋಲಾ ತಾಲೂಕ..
ನಾದಿ ಭಾಗ್ ಬೀಚ್


ನಾದಿ ಬಾಗ್ ಬೀಚ್ ಪೂರ್ವಾಭಿಮುಖವಾಗಿ ಹರಿಯುತ್ತದೆ.ಈ ನದಿ ಅಬ್ಬರಿಸುವ ಅಲೆಗಳು ಬಂಗಾಳ ಕೊಲ್ಲಿಯನ್ನು ತಲುಪುತ್ತದೆ. ಮತ್ತು ಪೂರ್ವ ದಿಕ್ಕಿಗೆ ಮೂಡುವ ಸೂರ್ಯ ಮಧ್ಯದಲ್ಲಿ ಹೊರಗೆ ಚಲಿಸುವ ದೋಣಿ ಜೊತೆಗೆ ತಂಪಾದ ಗಾಳಿಯ ಅಲೆಗಳು ನೋಡುಗರ ಕಣ್ಮನ ಸೆಳೆಯುವಂತಿದೆ.

ಹೊನ್ನಾವರ ತಾಲೂಕ..
ಶರಾವತಿ ಹಿನ್ನೀರು…


ಹೊನ್ನಾವರ ತಾಲೂಕಿನ ಶರಾವತಿ ಹಿನ್ನೀರು ಸಂಪೂರ್ಣ ಗುಪ್ತ ರತ್ನವಾಗಿದೆ. ಪ್ರವಾಸಿಗರಿಗೆ ಹೆಚ್ಚಿನ ಅನುಭವ ಇಲ್ಲಿ ಸಿಗುತ್ತದೆ. ಹಸಿರು ಮ್ಯಾಂಗ್ರೋವ್ ಅರಣ್ಯ ಸುಂದರ ಸೂರ್ಯಾಸ್ತವನ್ನು ವೀಕ್ಷಿಸುವ ಆಕರ್ಷಕ ಸ್ಥಳವಾಗಿದೆ.

ಶರಾವತಿ ಕಾಂಡ್ಲಾ…

ಇದು ಮ್ಯಾಂಗ್ರೋವ್ ಅರಣ್ಯ ಪ್ರದೇಶ ಶರಾವತಿ ನದಿಯ ಮಧ್ಯಭಾಗದಲ್ಲಿದೆ. ಸುಸಜ್ಜಿತ ಮರದ ಕಟ್ಟಿಗೆಯ ಕಾಲುದಾರಿಯಲ್ಲಿ ಹೋಗ ಬೇಕಾಗುತ್ತದೆ. ಕೇವಲ
ಒಂದುವರೆ ಕಿ.ಮಿ ನಡೆಯ ಬೇಕಾಗುತ್ತದೆ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ನೋಡಲು ಆಕರ್ಷಕವಾಗಿದೆ.

ಆಪ್ಸರಕೊಂಡ ಜಲಪಾತ..

ಆಪ್ಸರಾ ಮತ್ತು ಕೊಂಡ ಈ ಜಂಟಿ ಹೆಸರುಗಳಿಂದ ಆಪ್ಸರಕೊಂಡ ಎಂಬ ಹೆಸರು ಬಂದಿದೆ. ದೈವಿಕ ದೇವತೆಗಳು ಇಲ್ಲಿ ಸ್ನಾನವನ್ನು ಮಾಡುತ್ತಿದ್ದವು ಎಂಬ ಪ್ರತೀತಿ ಈ ಸ್ಥಳಕ್ಕೆ ಇರುವುದು.

ಅಂಕೋಲಾ ತಾಲೂಕ..
ವಿಭೂತಿ ಜಲಪಾತ…

ಈ ವಿಭೂತಿ ಜಲಪಾತವು ಅಂಕೋಲಾ ತಾಲೂಕಿನ ಆಚವೆ ಎಂಬ ಪುಟ್ಟ ಊರಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತದೆ. ಈ ಜಲಪಾತದಲ್ಲಿ ಇರುವ ನೀರು ಯಾಣದ ಬಳಿ ಸುಣ್ಣದ ಕಲ್ಲುಗಳಿಂದ ಹರಿದು ಬರುತ್ತದೆ.ಪ್ರಯುಕ್ತ ಈ ಜಲಪಾತವನ್ನು
ವಿಭೂತಿ ಜಲಪಾತ ಎಂದು ಕರೆಯಲಾಗುತ್ತದೆ.

ತಿಳ್ಮಾತಿ ಬೀಚ್..
ಈ ಸ್ಥಳದಲ್ಲಿ ಮರಳು ಕಪ್ಪು ಎಳ್ಳಿನಂತೆ ಕಾಣುತ್ತದೆ. ಆ ಕಾರಣಕ್ಕಾಗಿ ಈ ಕಡಲ ತೀರವನ್ನು ತಿಳ್ಮಾತಿ ಬೀಚ್ ಎಂದು ಕರೆಯಲಾಗುತ್ತದೆ. ಇದು ಕೊಂಕಣಿ ಭಾಷೆಯಲ್ಲಿದೆ ತಿಳ್ ಎಂದರೆ ಎಳ್ಳು ಆ ಪ್ರಯುಕ್ತ ಈ ಹೆಸರನ್ನು ಹೊಂದಿದೆ.

ಕುಮಟಾ ತಾಲೂಕು ..
ಯಾಣ…

ಕುಮಟಾ ತಾಲೂಕು ಕೇಂದ್ರ ಬಿಂದುವಾಗಿದೆ. ಯಾಣ ಕ್ಷೇತ್ರವು ದಟ್ಟ ಕಾಡಿನ ನಡುವೆ ಇರುವ ಸುಂದರ ಪ್ರವಾಸಿ ತಾಣವಾಗಿದೆ. ಪಶ್ಚಿಮ ಘಟ್ಟದಲ್ಲಿ ಸಹ್ಯಾದ್ರಿ ಬೆಟ್ಟ ಶೀಲಾ ಪರ್ವತವನ್ನು ಹೊಂದಿದೆ. ಐತಿಹಾಸಿಕ ನೈಸರ್ಗಿಕ ಮನೋಹರ ಸೌಂದರ್ಯವನ್ನು ಯಾಣ ಕ್ಷೇತ್ರವು ಹೊಂದಿರುತ್ತದೆ.ಇದು ಕಾಡಿನ ಮಧ್ಯದಲ್ಲಿ ಇರುವ ಪ್ರವಾಸಿ ತಾಣವಾಗಿದೆ. ನೈಸರ್ಗಿಕ ಸೌಂದರ್ಯವನ್ನು ತನ್ನ ಒಡಲಿನ ಕಪಿ ಮುಷ್ಟಿಯಲ್ಲಿ ತುಂಬಿಕೊಂಡಿದೆ.

ಕಾಡಿನ ಮಧ್ಯ ಭಾಗದಲ್ಲಿ ಈ ಸುಕ್ಷೇತ್ರ ಇರುವುದರಿಂದ ಪ್ರವಾಸಿಗರ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ.
ಭೈರವೇಶ್ವರ ಶಿಖರವು .120 ಮೀಟರ್ ಆಗಲವಿದೆ 390 ಅಡಿ ಎತ್ತರದಲ್ಲಿದೆ. ಮೋಹಿನಿ ಶಿಖರವು .300 ಅಡಿ ಎತ್ತರದಲ್ಲಿದೆ.90 ಮೀಟರ್ ಅಗಲವಿದೆ. ಆ ಕಾರಣ ಇದಕ್ಕೆ ಶಿಖರ ದೇವಾಲಯ ಎಂದು ಕರೆಯಲಾಗುತ್ತದೆ. 120 ಮೀಟರ್ ಎತ್ತರವಾದ ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕಪ್ಪು ಪರದೆಯಂತೆ ಬೃಹದಾಕಾರದ ಶಿಲಾರೂಪವಾಗಿ ಬಂಡೆಯ ಮಧ್ಯದಲ್ಲಿ ಸೀಳು ಇರುತ್ತದೆ.

ನೆತ್ತಿಯ ಮೇಲೆ ಜಲ ಸಂಚಲವಾಗುತ್ತದೆ. ಸೀಳಿನ ಗುಹೆಯಲ್ಲಿ ತನ್ನಿಂದ ತಾನೇ ಮೂಡಿ ಬಂದ ಭೈರವೇಶ್ವರ ಲಿಂಗವಿದೆ. ಈ ಲಿಂಗದ ತೀರ್ಥವನ್ನು ಶಿವರಾತ್ರಿ ದಿವಸ ಗೋಕರ್ಣ ಮಹಾಬಲನಿಗೆ ಅಭಿಷೇಕ ಪೂಜೆ ಮಾಡಿದರೆ ಪುಣ್ಯ ಪ್ರಾಪ್ತಿ ಎಂಬ ಪ್ರತೀತಿ ಈ ದಿವ್ಯ ಕ್ಷೇತ್ರಕ್ಕಿದೆ ಎಂದು ಹೇಳಲಾಗುತ್ತದೆ.
ಬೈರವೇಶ್ವರ ಮತ್ತು ಮೋಹಿನಿ ಎರಡು ಬ್ರಹತ್ ಶಿಖರಗಳು ಗುಹಾoತರ್ಗತ ದೇವರು ಇಲ್ಲಿರುವುದು. ಭೈರವೇಶ್ವರನ ಜಟೆಯ ಮೇಲೆ ಗಂಗೆ ಜಿನುಗುತ್ತಿರುವುದು ಅಚ್ಚರಿಯನ್ನು ಮೂಡಿಸುತ್ತದೆ.

ನಿತ್ಯ ಹರಿದ್ವರ್ಣ ಕಾಡುಗಳು ಸದಾ ಕಾಲ ಹರಿಯುತ್ತಿರುವ ನೀರು ಸುಂದರವಾಗಿ ಕಾಣಿಸುತ್ತದೆ. ಲೈಮ್ ಸ್ಟೋನ್ ನಿಂದ ನಿರ್ಮಾಣ ಮಾಡಿದ ಶಿಖರದ ಶಿಲಾ ರಚನೆ ತುಂಬಾ ಅದ್ಬುತ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಶಿಲೆಯಲ್ಲಿ ಶೀಲಾ ಬಾಲಕಿಯಂತೆ ಅರಳಿ ನಿಂತ ಈ ಪರ್ವತವನ್ನು ವೀಕ್ಷಿಸಲು ರಾಷ್ಟ್ರೀಯ ಹೆದ್ದಾರಿ ರಸ್ತೆಯಿಂದ ಐದು ಕಿ.ಮಿ ದೂರದ ಕಾಡಿನಲ್ಲಿ ಈ ಕ್ಷೇತ್ರವಿರುವುದು .

ಕಾರು ಬಸ್ಸುಗಳು ಓಡಾಡುವ ದಾರಿಯಲ್ಲಿ ಹೋಗಬಹುದಾಗಿದೆ.ಅಲ್ಲಿ ಮೋಹಿನಿ ಶಿಖರ ಮತ್ತು ಭೈರವೇಶ್ವರ ಶಿಖರ ಇರುವುದರಿಂದ ಬ್ರಹತ್ ಪರ್ವತ ಶೃಂಗಗಳಿಂದ ಯಾಣ ಕ್ಷೇತ್ರ ಪ್ರಸಿದ್ಧಿಯಾಗಿದೆ. ಈ ಕ್ಷೇತ್ರವು ಕಡು ಕಪ್ಪು ಬಣ್ಣದ ಎರಡು ಶಿಲಾ ಬಂಡೆಗಳು ಮತ್ತು ಸುಣ್ಣದ ಹರಳಿನಿಂದ ನಿರ್ಮಾಣ ಗೊಂಡಿದೆ. ಈ ಸ್ಥಳಕ್ಕೆ ಬರಲು ಹತ್ತಿರದ ವಿಮಾನ ನಿಲ್ದಾಣ ಹುಬ್ಬಳ್ಳಿ ,ರೈಲು ನಿಲ್ದಾಣ ಕುಮಟಾ,ರಸ್ತೆ ಮೂಲಕ ಹೋಗುವುದಾದಲ್ಲಿ 31 ಕಿ.ಮಿ ಶಿರಸಿ ಮಾರ್ಗದಿಂದ 40 ಕಿ.ಮಿ.ಕಾರವಾರದಿಂದ 60 ಕಿ.ಮಿ ಕ್ರಮಿಸಬೇಕಾಗುತ್ತದೆ.

ಮಿರ್ಜಾನ್ ಕೋಟೆ

ಇದು ಮನಮೋಹಕ ಸೌಂದರ್ಯ ತುಂಬಿದ ಐತಿಹಾಸಿಕ ನೈಸರ್ಗಿಕ ಕೋಟೆ ಸ್ಥಳವಾಗಿರುತ್ತದೆ. ಈ ಕೋಟೆಯು ಕೌಶಲ್ಯಕ್ಕೆ ಹೆಸರಾದ ಅದ್ಬುತ ಪ್ರವಾಸಿ ತಾಣವಾಗಿದೆ. ಪ್ರವಾಸಿಗರನ್ನು ಕೈಬೀಸಿ ತನ್ನ ಮಡಿಲಿಗೆ ತುಂಬಿ ಕೊಳ್ಳುವ ಮನಮೋಹಕ ಕೋಟೆಯಾಗಿದೆ. ಕೋಟೆಯನ್ನು ನಿರ್ಮಾಣ ಮಾಡಲು ಸ್ಥಳೀಯವಾಗಿ ಸಿಗುವಂತ ಕೆಂಪು ಕಲ್ಲು ಲ್ಯಾಟ್ ರೈಟ್ ಗಳನ್ನು ಬಳಕೆ ಮಾಡಿ ನಿರ್ಮಿಸಲಾಗಿದೆ. ಬಹುತೇಕ ಕೋಟೆಗಳನ್ನು ನಿರ್ಮಾಣ ಮಾಡುವಾಗ ಗುಡ್ಡಗಳ ಮಧ್ಯೆ ಭಾಗದಲ್ಲಿ ನಿರ್ಮಿಸುವ ಸಂಪ್ರದಾಯವಿರುತ್ತದೆ.

ರಕ್ಷಣೆಗೆ ಅನುಕೂಲ ದೃಷ್ಟಿಯಿಂದ ದಿಬ್ಬದ ಮಧ್ಯ ಭಾಗದಲ್ಲಿ ಈ ಕೋಟೆಯನ್ನು ನಿರ್ಮಾಣ ಮಾಡಲಾಗಿದೆ. ಯುದ್ದ ಮಾಡುವ ಪ್ರಸಂಗದಲ್ಲಿ ಸೌಕರ್ಯಗಳು ಎತ್ತರದ ಎರಡು ಸ್ಥಳಗಳಲ್ಲಿ ಇದ್ದರೆ ಶತ್ರು ಸಂಹಾರವನ್ನು ಸಹಜ ಕ್ರಿಯೆಯಿಂದ ಮಾಡಿ ರಕ್ಷಣೆಯನ್ನು ಪಡೆಯ ಬಹುದಾಗಿದೆ. ಯುದ್ದ ನಿಯಂತ್ರಣ ಕೇಂದ್ರವಾಗಿ ಯುದ್ದ ವ್ಯವಸ್ಥೆಗೆ ಬೇಕಾದ ರೀತಿ ನಿರ್ಮಿತಗೊಂಡು ಪ್ರಾಮುಖ್ಯತೆ ಪಡೆದಿದೆ. ಕೋಟೆ ಕೊತ್ತಲಲ್ಲಿ ಶಾಶ್ವತ ನಿರ್ಮಿತವಾದ ಗಡಿನಾಡು ಪುರದುರ್ಗ, ರೈಲುಸಂದಿ ಅಸ್ತ್ರ ಶಾಲೆ ಪರ್ವತ ಕಣಿವೆ ಸಮುದ್ರ ತೀರ ವಾಣಿಜ್ಯ ಕ್ಷೇತ್ರ ಇವುಗಳ ರಕ್ಷಣೆಗೆ ಅಣಿಮಾಡಿದ

ಕೊತ್ತಲಗಳು ನಿರ್ಮಿತ ವಾಗಿದೆ. ಯುದ್ದ ಕಾಲದ ಆತ್ಮರಕ್ಷಣೆಗಾಗಿ ಸೈನಿಕರು ತಮ್ಮ ಕಡೆಗೆ ಇರುವ ಗುದ್ದಲಿ ಕೊಡಲಿ ಸುತ್ತ ಮುತ್ತಲಲ್ಲಿ ಸುಲಭ ರೀತಿಯಲ್ಲಿ ಸಿಗುತ್ತಿರುವ ಆಯುಧ ಸಾಧನಗಳನ್ನು ರಕ್ಷಿಸುವಂತೆ ಇಟ್ಟಿರುತ್ತಾರೆ.ಇವು ಪ್ರಾಚೀನ ಕಾಲದಿಂದ ಬಳಕೆಗೆ ಬಂದಿದೆ. ಕ್ರಿ. ಪೂ.600 ರಲ್ಲಿ ಪೂರ್ವ ಭೂಮದ್ಯ ಸಮುದ್ರ ಜನಾಂಗದವರು ಬಿಸಿಲಿನಲ್ಲಿ ಒಣಗಿಸಿದ ಮಣ್ಣು ಇಟ್ಟಿಗೆ ಗೋಡೆಗಳಿಂದ ತಮ್ಮ ಪಟ್ಟಣವನ್ನು ರಕ್ಷಿಸಿದರು. ಮಂಗೋಲಿಯಾ ದಾಳಿಕಾರರನ್ನು ತಡೆಗಟ್ಟಲು ಚೀನಿಯರು ಕಟ್ಟಿದ ಬ್ರಹದಾಕಾರದ ಗೋಡೆ ಕಿ.ಪು 221 ರಲ್ಲಿ ಆರಂಭಿಸಿ ಹತ್ತು ವರ್ಷಗಳ ನಂತರ ಮುಕ್ತಾಯಗೊಂಡವು.

ಗೋಕರ್ಣ ಕ್ಷೇತ್ರ…


ಗೋಕರ್ಣ ಕ್ಷೇತ್ರವು ಭಾರತ ದೇಶದ ಪ್ರಮುಖ ಪವಿತ್ರ ಕ್ಷೇತ್ರವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ಮಹಾಬಲೇಶ್ವರನ ದೇವಾಲಯವಿದೆ. ಪಂಚ ಕ್ಷೇತ್ರಗಳಲ್ಲಿ ಗೋಕಣೇಶ್ವರ ದೇವಾಲಯವು ಒಂದಾಗಿದೆ. ಜಗದೊಡೆಯ ಪರಶಿವನು ಆತ್ಮಲಿಂಗ ರೂಪದಲ್ಲಿ ಇಲ್ಲಿ ನೆಲಸಿರುವನೆಂಬ ನಂಬಿಕೆ ಇದೆ. ಅರಬ್ಬಿ ಸಮುದ್ರದ ತಟದಲ್ಲಿ ಗೋಕರ್ಣ ಮಹಾಬಲೇಶ್ವರ ದೇವಾಲಯವಿದೆ.

ಈ ದೇವನನ್ನು ಸಾರ್ವಬೌಮ ಎಂದು ಕರೆಯಲಾಗುತ್ತದೆ. ಹಿಂದು ಧರ್ಮದವರ ಪರಮ ಪೂಜನೀಯ ಗುರುವು ಈ ದೇವನಿರುತ್ತಾರೆ. ಆದಿ ಶಂಕರಾಚಾರ್ಯರು ತಮ್ಮ ಆಧ್ಯಾತ್ಮಿಕ ಜ್ಞಾನವನ್ನು ದಕ್ಷಿಣದಿಂದ ಉತ್ತರ ಹಾಗೂ ಭಾರತದ ಎಲ್ಲಾ ಭಾಗಗಳಿಗೂ ಪಸರಿಸಲು ಆರಿಸಿಕೊಂಡ ಸ್ಥಳ ಗೋಕರ್ಣವಾಗಿದೆ. ಇದು ಪಂಚ ಕ್ಷೇತ್ರಗಳಲ್ಲಿ ಒಂದಾದ ಧಾರ್ಮಿಕ ಕ್ಷೇತ್ರವಾಗಿದೆ.ಶ್ರೀ ರಾಘವೇಶ್ವರ ಭಾರತೀ ತೀರ್ಥ ಸ್ವಾಮಿಗಳು ಈಗ ಗೋಕರ್ಣದಲ್ಲಿ ಇರುತ್ತಿದ್ದು ಅಭಿವೃದ್ದಿ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ .
ವಿಷ್ಣುಗುಪ್ತ ವಿದ್ಯಾಪೀಠ ಅಶೋಕೆ ಹೀಗೆ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಭಕ್ತ ಸಮೂಹಕ್ಕೆ ಕೊಡುಗೆ ನೀಡಿದ್ದಾರೆ.

ಓಂ ಬೀಚ್..

ಇಲ್ಲಿ ಓಂ ಆಕಾರವನ್ನು ಹೊಂದಿರುವ ಓಂ ಬೀಚ್ ಇರುತ್ತದೆ. ಕಡಲ ತೀರದ ಅತಿ ಹತ್ತಿರಕೆ ಪಟ್ಟಣವಿದೆ. ತಂಪಾದ ತಂಗಾಳಿಯಿಂದ ಈ ಬೀಚ್ ನೆಲೆನಿಂತಿದೆ.ಇದಲ್ಲದೆ ಪ್ಯಾರಡೈಸ್ ಬೀಚ್, ಹ್ಯಾಫ್ ಮೂನ್ ಬೀಚ್,ಕೂಡ್ಲೆ ಬೀಚ್ ಹೀಗೆ ಹಲವಾರು ಹೆಸರುಗಳ ಬೀಚ್ ಗಳು ವೈಮಾನಿಕ ವೀಕ್ಷಣೆಗೆ ಪ್ರಸ್ತುತ ದಿನಗಳಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಇದರ ವೀಕ್ಷಣೆಗೆ ಹೋಗಲು ವಿಮಾನ ಮೂಲಕ. ಗೋವಾ ಹುಬ್ಬಳ್ಳಿ. ರೈಲು ಮೂಲಕ ಕುಮಟಾ ರಸ್ತೆ ಕಾರವಾರದಿಂದ. 60,ಕುಮಟಾದಿಂದ, 32. ಕಿ.ಮಿ ಅಂತರದಲ್ಲಿದೆ.

ಜಿಲ್ಲಾ ಕೇಂದ್ರ ಕಾರವಾರವು ಪ್ರವಾಸೋದ್ಯಮ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ಪಶ್ಚಿಮ ಘಟ್ಟದ ಭವ್ಯ ಪರ್ವತಸಿರಿ,ಹಲವಾರು ಗಮ್ಯ ಪ್ರವಾಸಿ ತಾಣಗಳು, ಭವ್ಯ ಜಲಪಾತಗಳು ಇಲ್ಲಿದ್ದು ಕೌಶಲ್ಯ ಇತಿಹಾಸ ಸಂಸ್ಕ್ರತಿ ಸಂಪ್ರದಾಯ ಎಲ್ಲವನ್ನೂ ಹೊಂದಿದ ಶ್ರೀಮಂತ ಜಿಲ್ಲೆಯಾಗಿದೆ. ಒಂದೊಂದು ಭವ್ಯ ಸ್ಥಳಗಳು ಸ್ಫೂರ್ತಿದಾಯಕ ಕಥೆಯನ್ನು ಹೊಂದಿದೆ ಎನ್ನಬಹುದಾಗಿದೆ.

ಈ ಗಂಡು ಮೆಟ್ಟಿದ ಜಿಲ್ಲೆ ಇನ್ನೊಂದು ವಿಶೇಷತೆಗೆ ಪುರಾಣ ಕಾಲದ ಕಥೆಯನ್ನು ಹೊಂದಿದೆ ಎಂದು ಹೇಳಬಹುದಾಗಿದೆ.
ಪುರಾಣದ ಪ್ರಕಾರ ರಾವಣನ ತಾಯಿ ಕೈಕಸಿಯು ಮಣ್ಣಿನ ಶಿವಲಿಂಗವನ್ನು ಪ್ರತಿ ದಿನವೂ ಭಕ್ತಿಯಿಂದ ಪೂಜೆ ಮಾಡುತ್ತಿರುವುದನ್ನು ಕಂಡ ರಾವಣನು ಒಂದು ದಿವಸ ತಾಯಿಮಾತೆಗೆ ಕೈಲಾಸದಿಂದ ಶಿವನ ಆತ್ಮಲಿಂಗವನ್ನೇ ತಂದು ಕೊಡುತ್ತೇನೆಂದು ಹೇಳಿ ತಪಸ್ಸಿಗೆ ತೆರಳಿದನು. ತಪಸ್ಸಿನಿಂದ ಸಿದ್ಧಿಪಡೆದುಕೊಂಡು ಕೈಲಾಸಕ್ಕೆ ಹೋಗಿ ಶಿವನ ಹತ್ತಿರ ಆತ್ಮಲಿಂಗ ನೀಡುವಂತೆ ಕೋರುತ್ತಾನೆ. ರಾವಣನ ಭಕ್ತಿಗೆ ಮೆಚ್ಚಿದ ಶಿವನು ತನ್ನ ಆತ್ಮಲಿಂಗವನ್ನು ರಾವಣನಿಗೆ ಕೊಟ್ಟು ಲಂಕೆಯನ್ನು ತಲುಪುವವರೆಗೂ ಆತ್ಮಲಿಂಗವನ್ನು ನೆಲದ ಮೇಲೆ ಇಡದಂತೆ ಇಟ್ಟರೆ ಅಲ್ಲಿಯೇ ಅದರ ಪ್ರತಿಷ್ಠಾಪನೆ ಆಗುತ್ತದೆ ಎಂದು ಹೇಳಿಕಳುಹಿಸುತ್ತಾನೆ.

ದಾರಿ ಮಧ್ಯದಲ್ಲಿ ಸಿಕ್ಕಂತಹ ನಾರದ ಮುನಿಗಳು ರಾವಣನ ದಾರಿತಪ್ಪಿಸಲು ರಾವಣ ನೀನು ಲಂಕೆಗೆ ಶ್ರೀಮಂತನಾದೆ.ನಿನ್ನ ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತೆಲ್ಲ ಹೇಳಿ ರಾವಣನ ಕಾಲು ಎಳೆಯುತ್ತಾರೆ. ದೇವತೆಗಳೆಲ್ಲ ಆತಂಕಗೊಂಡು ವಿಷ್ಣುವಿನ ಹತ್ತಿರ ಬಂದು ಏನಾದರೂ ಉಪಾಯ ಮಾಡುವಂತೆ ಆಗ್ರಹಿಸುತ್ತಾರೆ. ಆಗ ವಿಷ್ಣು ಉಪಾಯ ಹುಡುಕಿ ವಿಘ್ನನಿವಾರಕ ಗಣಪತಿಯನ್ನು ಕರೆತಂದು ವಟುವೇಷದಿ ಹೋಗಿ ರಾವಣನಿಗೆ ವಿಘ್ನ ಉಂಟು ಮಾಡಲು ಪ್ರೇರೇಪಿಸುತ್ತಾನೆ.

ರಾವಣನಿಗೆ ಸಂಧ್ಯಾವಂದನೆ ಸಮಯ ಬಂದೊದಗುತ್ತದೆ ಕೈಯಲ್ಲಿ ಇರುವ ಶಿವನ ಆತ್ಮಲಿಂಗ ನೆಲಕ್ಕೆ ಇಟ್ಟರೆ ಅಲ್ಲಿಯೇ ಗಟ್ಟಿಯಾಗಿ ಸ್ಥಾಪಿತ ಆಗುತ್ತದೆ ಆ ಕಾರಣ ಆಚೆ ಇಚೆ ಕಣ್ಣಾಲಿಸಿ ನೋಡಲು ರಾವಣನ ಕಣ್ಣಿಗೆ ಆಕರ್ಷಣೆ ಆದವನು ವಟುವೇಷದಾರಿ ಗಣಪತಿಯಾಗಿರುತ್ತಾನೆ. ರಾವಣನು ಇವನು ಪುಟ್ಟ ಬಾಲಕನಿರುವನು ಇವನ ಹತ್ತಿರ ಲಿಂಗವನ್ನು ಕೊಟ್ಟು ತನ್ನ ಸಂಧ್ಯಾ ಕಾರ್ಯಕ್ರಮ ಮುಗಿಸುವ ಕುರಿತು ಯೋಚಿಸಿ ಕರೆಯುತ್ತಾನೆ. ಏ ,ಬಾಲಕ ಇದನ್ನು ಹಿಡಿದಿಕೋ ಎಂದು ಹೇಳಲು ಆ ಬಾಲಕನು ಇದು ತುಂಬಾ ಭಾರವಿದೆ. ನನ್ನಿಂದ ಈ ಆತ್ಮಲಿಂಗ ಬಹಳ ಸಮಯದವರೆಗೆ ಹಿಡಿದುಕೊಳ್ಳಲು ಕಷ್ಟವಾಗುತ್ತದೆ. ನೀನು ಬೇಗನೇ ಬರಬೇಕು, ನಾನು ರಾವಣ..ರಾವಣ..ರಾವಣ.. ಎಂದು ಮೂರು ಸಲ ಕರೆಯುತ್ತೇನೆ. ಆ ಕ್ಷಣ ನೀನು ಬಂದು ಆತ್ಮಲಿಂಗ ಸ್ವೀಕರಿಸದಿದ್ದರೆ ನಾನು ಇಲ್ಲಿಯೇ ಇಡುತ್ತೇನೆಂದು ಹೇಳಿದನು.

ಮೂರು ಸಲ ಕರೆದರೂ ರಾವಣ ಬಾರದಿರುವುದನ್ನು ಕಂಡು ಅಲ್ಲಿಯೇ ಶಿವನ ಆತ್ಮಲಿಂಗವನ್ನು ಇಟ್ಟನು. ಲಿಂಗ ಅಲ್ಲಿಯೇ ಸ್ಥಾಪಿತವಾಯಿತು. ಸಂಧ್ಯಾವಂದನೆ ಕಾರ್ಯ ಮುಗಿಸಿ ಬಂದ ರಾವಣನು ಆತ್ಮಲಿಂಗವನ್ನು ಎತ್ತಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ, ಆ ಆತ್ಮಲಿಂಗ ಐದು ತುಂಡುಗಳಾಗಿ ದಿಕ್ಕಾಪಾಲಾಗಿ ಚೆಲ್ಲಿತು. ಆ ಪವಿತ್ರ ಸ್ಥಳಗಳು ಈ ಜಿಲ್ಲೆಯಲ್ಲಿ ಪವಿತ್ರ ಕ್ಷೇತ್ರವಾಗಿ ಪ್ರಸಿದ್ದಿ ಪಡೆದಿದೆ.ಅವುಗಳೆಂದರೆ

ಸಜ್ಜೇಶ್ವರ ..

ಕಾರವಾರ ಶಿರವಾಡ ದಲ್ಲಿರುವುದು. ಕಾರವಾರ ಹತ್ತಿರಕ್ಕೆ. ಗೋಕರ್ಣೇಶ್ವರ ..ಗೋಕರ್ಣದಲ್ಲಿರುವುದು. ಕುಮಟಾ ಹತ್ತಿರಕ್ಕೆ. ಧಾರೇಶ್ವರ. ಕುಮಟಾದಿಂದ ಹತ್ತು ಕಿ.ಮಿ ಅಂತರದಲ್ಲಿರುವುದು ಕುಮಟಾ ಹತ್ತಿರಕ್ಕೆ. ಕುಂಬೇಶ್ವರ ..ಇದು ಕುಮಟಾ ತಾಲೂಕನಲ್ಲಿ ಇರುವುದು ಕುಮಟಾ ಹತ್ತಿರಕ್ಕೆ. ಮುರ್ಡೇಶ್ವರ…ಇದು ಹೊನ್ನಾವರ ತಾಲೂಕಿನ ಹತ್ತಿರಕ್ಕೆ ಇರುವುದು. ಈ ಎಲ್ಲ ಪಂಚ ಕ್ಷೇತ್ರಗಳಿಗೆ ಹೋಗಿ ಬರಲು ಬಸ್ಸುಗಳು ಸಾಕಷ್ಟು ಓಡಾಡುತ್ತದೆ.ಈ ಸುಂದರ ತಾಣಗಳನ್ನು ಕಡಲು ತೀರ ಕಾರವಾರ ಜಿಲ್ಲೆ ತನ್ನ ಮುಷ್ಟಿಯಲ್ಲಿ ಆಲಿಂಗನ ಮಾಡುತ್ತಿದೆ ಎಂಬ ಹೆಗ್ಗಳಿಕೆ ಈ ಜಿಲ್ಲೆಗೆ ಮಾತ್ರ ಇರುವುದೆಂದು ಹೇಳಬಹುದಾಗಿದೆ.

ಏನೆಂದು ಬಣ್ಣಿಸಲಿ ಸೊಬಗಸಿರಿ ನಿನ್ನ ಎನ್ನುವಂತೆ, ಈ ಜಿಲ್ಲೆ ಎಲ್ಲ ಮೃಷ್ಟಾನ್ನವನ್ನೇ ತನ್ನ ತೆಕ್ಕೆಯಲ್ಲಿ ತುಂಬಿಕೊಂಡ ಸಂಪದ್ಭರಿತ ಜಿಲ್ಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪುರಾಣದ ಪಂಚಕ್ಷೇತ್ರಗಳು ಶಿವರಾತ್ರಿ ದಿನಕ್ಕೆ ಭಕ್ತರ ದಂಡನ್ನೇ ತನ್ನೆಡೆ ಕರೆಸಿ ಕೊಳ್ಳುತ್ತಿದೆ.ದ್ಯಾನಾಸಕ್ತರ ದ್ಯಾನಗಳಿಗೆ ಕೇಳಿದ್ದು ನೀಡುವ ಪರಶಿವನು ಕೈಬೀಸಿ ಕರೆಯುತ್ತಾನೆ.

ತಂಪಾಗಿ ಇಂಪಾಗಿ ಹರಿಯುವ ಜಲಪಾತಗಳಿಗೆ ಒಂದೊಂದು ಕಥೆಗಳಿವೆ. ಇವೆಲ್ಲ ಸೊಬಗಿನ ಐಸಿರಿಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುವುದು. ಬನ್ನಿ..ಬನ್ನಿ. ಒಮ್ಮೆ ಬನ್ನಿ ನಮ್ಮ ಕಡಲ ತೀರಕೆ… ಜೀವನದಿ ಒಮ್ಮೆಯಾದರೂ ಭೇಟಿ ನೀಡಿ ಕಾರವಾರ ತಾಣಕೆ…

(ಲೇಖಕರು ಶಿಕ್ಷಣ ಇಲಾಖೆಯ ನಿವೃತ್ತ ಅಧೀಕ್ಷಕರು)


Related Articles

Back to top button