Belagavi NewsBelgaum NewsKannada NewsKarnataka NewsLatest

*ಬೆಳಗಾವಿಗೆ ಮತ್ತೊಂದು ಹೈಟೆಕ್ ಆಸ್ಪತ್ರೆ; ಭಾನುವಾರ ಉದ್ಘಾಟನೆ: ಡಾ.ನೀತಾ ದೇಶಪಾಂಡೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯಲ್ಲಿ ಮತ್ತೊಂದು ಸುಪರ್ ಸ್ಪೆಷಾಲಿಟಿ ಹೈ ಟೆಕ್ ಆಸ್ಪತ್ರೆ ಆರಂಭವಾಗಿದ್ದು, ಭಾನುವಾರ ಅಧಿಕೃತವಾಗಿ ಉದ್ಘಾಟನೆಯಾಗಲಿದೆ.

ನಗರದ ಎರಡನೇ ರೈಲ್ವೆ ಗೇಟ್ ಹತ್ತಿರ ಸೆಂಟ್ರಾಕೇರ್ ಆಸ್ಪತ್ರೆ ಆರಂಭವಾಗಿದೆ. ಖ್ಯಾತ ಮಧುಮೇಹ ತಜ್ಞರಾದ ಡಾ.ನೀತಾ ದೇಶಪಾಂಡೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. 50 ಬೆಡ್ ಆಸ್ಪತ್ರೆ ಇದಾಗಿದ್ದು, 25 ಐಸಿಯು ಬೆಡ್ ಹೊಂದಿದೆ. 3 ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಹೊಂದಿದೆ. ಡಯಾಲಿಸಿಸ್ ಯಂತ್ರ, ಸಿಟಿ ಸ್ಕ್ಯಾನ್, ಸೋನೋಗ್ರಫಿ ಸೇರಿದಂತೆ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ರೋಗ ಬಾರದಂತೆ ಮುಂಜಾಗ್ರತೆ ಮತ್ತು ಹೃದಯ ಶಸ್ತ್ರ ಚಿಕಿತ್ಸೆ ಪಡೆದವರ ಪುನಶ್ಚೇತನ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

10ಕ್ಕೂ ಹೆಚ್ಚು ಆರೋಗ್ಯ ರಕ್ಷಣಾ ಪ್ಯಾಕೇಜ್ ಗಳನ್ನು ಅಳವಡಿಸಲಾಗಿದ್ದು., ಅತ್ಯಂತ ಪ್ರಬಲವಾದ ನ್ಯೂಟ್ರಿಷಿಯನ್ ವಿಭಾಗಗಳನ್ನು ಸಹ ಹೊಂದಿದೆ. ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಇಲ್ಲದಷ್ಟು ಉತ್ತಮವಾದ ಮಧುಮೇದ ಕೇಂದ್ರ ಇದಾಗಿದ್ದು, ಒಬೆಸಿಟಿ ನಿಯಂತ್ರಣಕ್ಕೆ ತಜ್ಞರು ಸಲಹೆ ನೀಡಲಿದ್ದಾರೆ. ಒಂದೇ ಸೂರಿನಡಿ ಸಕಲ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆ ಇದಾಗಿದೆ ಎಂದು ನೀತಾ ದೇಶಪಾಂಡೆ ತಿಳಿಸಿದರು.

ಸೆಂಟ್ರಾಕೇರ್ ಅತ್ಯಾಧುನಿಕ ಆಸ್ಪತ್ರೆಯು ತನ್ನ ವಿವಿಧ ವೈದ್ಯಕೀಯ ವಿಭಾಗಗಳ ಮುಖೇನ ಜಾಗತಿಕ ಮಟ್ಟದ ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಕಾರ್ಯನಿರತವಾಗಿದೆ. ಸರಕಾರದ ಆರೋಗ್ಯ ಪ್ಯಾಕೇಜ್, ಸಿಎಸ್ಆರ್ ಫಂಡ್ ಮತ್ತು ಚಾರಿಟಿ ಸೌಲಭ್ಯಗಳನ್ನು ಹೊಂದಿದೆ. ದೇಶದಲ್ಲೇ ಅತ್ಯುತ್ತಮವಾದ ಐಸಿಯು ಸೌಲಭ್ಯ ಹೊಂದಿದ್ದು, ಅಲ್ಲಿನ ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಬೇರೆಬೇರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಎರಡು, ಮೂರು ಮತ್ತು ನಾಲ್ಕನೆಯ ಅಭಿಪ್ರಾಯಗಳನ್ನು ಸಹ ಪಡೆಯಲಾಗುತ್ತದೆ ಎಂದರು.

Home add -Advt

ಆಸ್ಪತ್ರೆಯ ಎಲ್ಲಾ ವೈದ್ಯಕೀಯ ತಂತ್ರಜ್ಞಾನಗಳೊಂದಿಗೆ ಅತ್ಯಾಧುನಿಕ ಸೇವೆ ಹಾಗೂ ಡಯಾಗೋಸ್ಟಿಕ್ಸ್ ಸೇವೆಗಳು ಒಂದೇ ಸೂರಿನಡಿ ಲಭ್ಯ. ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ಸ್ತ್ರೀರೋಗ, ಅಸ್ತಿ ಚಿಕಿತ್ಸಾ ವಿಭಾಗ, ಮೂತ್ರವಾಹಿನಿ, ಮೂತ್ರ ಕೋಶ ವಿಭಾಗ, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ, ಹೃದಯವ್ಯಾಧಿ, ಹೃದಯ ಶಸ್ತ್ರಚಿಕಿತ್ಸೆ, ನರವೈದ್ಯಕೀಯ ವಿಭಾಗ, ನರವೈದ್ಯ ಶಸ್ತ್ರಚಿಕಿತ್ಸೆ, ಶ್ವಾಸಕೋಶ ವಿಭಾಗ, ಮನೋವೈದ್ಯಕೀಯ ವಿಭಾಗ, ಗ್ಯಾಸ್ರೋ ಎಂಟರೋಲಾಜಿ, ರೇಡಿಯೋಲಜಿ, ಕಿವಿ-ಮೂಗು-ಗಂಟಲು, ಸಂಧಿವಾತ, ಮಧುಮೇಹ-ಅಧಿಕ ತೂಕ ಮತ್ತು ಮೆಟಬಾಲಿಕ್ ಆರೋಗ್ಯ ತೀವ್ರ ಚಿಕಿತ್ಸಾ ವಿಭಾಗ, ಬೆರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಹಾಗೂ ಗ್ಯಾಸ್ಟ್ರಿಕ್ ಬಲೂನಿಂಗ್, ಆಹಾರ ಮತ್ತು ಆಹಾರತಜ್ಞರು, ಫಿಸಿಯೋಥೆರಪಿ ಮತ್ತು ಹೃದಯ ಪುನಶ್ಚತನ ಘಟಕ, ಡಯಾಲಿಸಿಸ್ ಘಟಕಗಳು ಲಭ್ಯವಿವೆ ಎಂದರು.

ಸಿಟಿ ಸ್ಕ್ಯಾನ್ (ರೇಡಿಯೋ ಡಯಾಗೋಸ್ಟಿಕ್ಸ್), ಔಷಧಾಲಯ, ತುರ್ತು ಸೇವೆಗಳು, ತುರ್ತು ಸೇವಾ ಘಟಕ, ಸೇರಿದಂತೆ ಎಲ್ಲಾ ವಿಭಾಗಗಳು 24×7 ಕಾರ್ಯನಿರ್ವಹಿಸುತ್ತಿವೆ. ಆಂಬ್ಯುಲೆನ್ಸ್ ಸೇವೆಯೂ ಸಹ ದಿನ -ರಾತ್ರಿ ಲಭ್ಯವಿದ್ದು, ಅಗತ್ಯವಿರುವ ರೋಗಿಗಳಿಗೆ ತಕ್ಷಣ ಸೇವೆ ನೀಡಲು ಸಿದ್ಧವಾಗಿದೆ. ಇತ್ತೀಚೆಗೆ ಅನೇಕ ಜೀವಗಳನ್ನು ಉಳಿಸಿರುವ ಅತ್ಯಾಧುನಿಕ ಕ್ಯಾಥ್-ಲ್ಯಾಬ್‌ನಲ್ಲಿ ಇಂಟರ್ವೆನ್ನನಲ್ ಹೃದಯ ಚಿಕಿತ್ಸೆಗಳು ಯಶಸ್ವಿಯಾಗಿ ನಡೆದಿವೆ. ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗಳೂ ಸಹ ಯಶಸ್ವಿಯಾಗಿ ಪೂರ್ಣಗೊಂಡಿವೆ.

ಪರಿಸರ ಸ್ವಚ್ಛತೆ, ಪ್ರಶಾಂತ ವಾತಾವರಣ, ವಿಶಾಲ ಹಾಲ್‌ಗಳು, ನೈಸರ್ಗಿಕ ಬೆಳಕು ಒಳಪಡುವಂತಿರುವ ಗಾಳಿಯಾಡುವ ಕೋಣೆಗಳು ರೋಗಿಗಳು ಬೇಗ ಗುಣಮುಖರಾಗಲು ಸಹಕಾರಿಯಾಗಿವೆ. ಅನುಭವಿ ವೈದ್ಯರು, ಕಾಳಜಿಯುಳ್ಳ ನರ್ಸ್‌ಗಳು ಮತ್ತು ಹಸನ್ಮುಖಿ ಸಿಬ್ಬಂದಿ ರೋಗಿಗಳು ಬೇಗ ಗುಣವಾಗಲು ಶ್ರಮಿಸುತ್ತಿದ್ದಾರೆ ಎಂದರು.

ಉದ್ಘಾಟನಾ ಸಮಾರಂಭ:

ಸೆಂಟ್ರಾಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭವು ರವಿವಾರ, 29ನೇ ಜೂನ್ 2025ರಂದು ಬೆಳಗ್ಗೆ 9.30 ರಿಂದ 11.30 ರವರೆಗೆ ಉದ್ಯಮಬಾಗಲ್ಲಿರುವ, ಖಾನಾಪುರ ರಸ್ತೆಯ ಶಗುನ್ ಗಾರ್ಡನ್‌ನಲ್ಲಿ ನೆರವೇರಲಿದೆ.

ಖ್ಯಾತ ನಟ ಹಾಗೂ ಸಾಮಾಜಿಕ ಚಿಂತಕ ನಾನಾ ಪಾಟೇಕರ್, ಸಂಭಾಜಿ ಭಿಡೆ ಗುರುಜಿ, ಡಾ. ಪ್ರಭಾಕರ ಕೋರೆ, ಕಾರ್ಯಧ್ಯಕ್ಷರು, ಕೆಎಲ್‌ಇ ಸಂಸ್ಥೆ, ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಚಿವರು, ಲೋಕೋಪಯೋಗಿ ಇಲಾಖೆ, ಲಕ್ಷ್ಮಿ ಹೆಬ್ಬಾಳ್ಳರ್, ಸಚಿವರು, ಮಹಿಳಾ ಮತ್ತು ಮಕ್ಕಳ ಇಲಾಖೆ, ಜಗದೀಶ ಶೆಟ್ಟರ್, ಬೆಳಗಾವಿ ಸಂಸದರು, ಈರಣ್ಣಾ ಕಡಾಡಿ, ರಾಜ್ಯಸಭಾ ಸದಸ್ಯರು, ಅಭಯ ಪಾಟೀಲ, ಶಾಸಕರು, ಬೆಳಗಾವಿ ದಕ್ಷಿಣ, ಅಸೀಫ್ (ರಾಜು) ಸೇಠ, ಶಾಸಕರು ಬೆಳಗಾವಿ ಉತ್ತರ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಸ್ಪತ್ರೆಯ ನಿರ್ದೇಶಕ ದೀಪಕ್ ಕರಂಜಿಕರ್ ಮಾತನಾಡಿ, ಇದು ಜನಸಾಮಾನ್ಯರ ಆಸ್ಪತ್ರೆಯಾಗಿದೆ. ರೋಗಬಾರದಂತೆ ಮುಂಜಾಗ್ರತೆ ವಹಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.

ರೋಹಿತ್ ದೇಶಪಾಂಡೆ, ಪ್ರಮೋದ ಸೂಳಿಕೇರಿ ಮತ್ತಿತರು ಇದ್ದರು.

​ 

Related Articles

Back to top button