*ಚಾಮುಂಡಿ ಚಲೋಗೆ ಮುಂದಾದ ಬಿಜೆಪಿ ಶಾಸಕರು, ಕಾರ್ಯಕರ್ತರು ಪೊಲೀಸ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಮೈಸೂರಿನಲ್ಲಿ ಚಾಮುಂಡಿ ಚಲೋ ಹೋರಾಟ ಆರಂಭಿಸಿದೆ.
ಮೈಸೂರಿನ ಕುರುಬರಹಳ್ಳಿ ಸರ್ಕಲ್ ನಿಂದ ಚಾಮುಂಡಿ ಚಲೋ ಪ್ರತಿಭಟನೆ ಆರಂಭವಾಗುತ್ತಿದ್ದಂತೆಯೇ ಪೊಲೀಸರು ಅಲರ್ಟ್ ಆಗಿದ್ದಾರೆ. ಚಾಮುಂಡಿ ಚಲೋ ಹೋರಾಟಕ್ಕೆ ಆಗಮಿಸಿದ್ದ ಬಿಜೆಪಿ ಶಾಸಕ ಶ್ರೀವತ್ಸ ಹಾಗೂ ಕಾರ್ಯಕರ್ತರನ್ನು ತಡೆದ ಪೊಲೀಸರು ತಕ್ಷಣ ವಶಕ್ಕೆ ಪಡೆದಿದ್ದಾರೆ. ವಾಹನ ಇಳಿದು ಬರುತ್ತಿದ್ದಂತೆಯೇ ಶಾಸಕರನ್ನು ತಡೆದ ಪೊಲೀಸರ ವಿರುದ್ಧ ಶ್ರೀವತ್ಸ ಹರಿಹಾಯ್ದಿದ್ದಾರೆ. ಇನ್ನೂ ನಾವು ಪ್ರತಿಭಟನೆಯನ್ನೇ ಆರಂಭಿಸಿಲ್ಲ. ಆಗಲೇ ತಡೆಯುತ್ತಿದ್ದೀರಿ. ನಮಗೆ ನಿಂತುಕೊಳ್ಳಲಾದರೂ ಬಿಡಿ ಎಂದು ಕಿಡಿಕಾರಿದ್ದಾರೆ. ಶಾಸಕರ ಮಾತು ಕೇಳದ ಪೊಲೀಸರು ತಕ್ಷಣ ಅವರನ್ನು ಹಾಗೂ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಮ್ಮತ್ತೊಂದೆಡೆ ಚಾಮುಂಡಿ ಚಲೋ ಹೋರಾಟದಲ್ಲಿ ಭಾಗಿಯಾಗಲು ಕುರುಬರಹಳ್ಳಿ ಸರ್ಕಲ್ ಗೆ ಆಗಮಿಸಿದ್ದ ಹಿಂದೂ ಜಾಗರಣಾ ವೇದಿಕೆ ಸದಸ್ಯರನ್ನು ಪೊಲೀಸರು ತಡೆದಿದ್ದಾರೆ. ಮಾಜಿ ಶಾಸಕ ಎಲ್.ನಾಗೇಂದ್ರ, ಮಾಜಿ ಮೇಯರ್ ಸಂದೇಶ ಸ್ವಾಮಿ ಹಾಗೂ ಹಿಂದೂ ಜಾಗರಣಾ ವೇದಿಕೆ ಸದಸ್ಯರು ಚಾಮುಂಡಿ ಬೆಟ್ಟದತ್ತ ತೆರಳಿದ್ದರು. ಈ ವೇಳೆ ಅವರನ್ನು ತಡೆದು, ಎಲ್ಲವರನ್ನೂ ವಶಕ್ಕೆ ಪಡೆದಿದ್ದಾರೆ.