
ಪ್ರಗತಿವಾಹಿನಿ ಸುದ್ದಿ: ನವರಾತ್ರಿ ಹಾಗೂ ದಸರಾ ಮಹೋತ್ಸ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರು ಹಾಗೂ ಪ್ರವಾಸಿಗರಿಗಾಗಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.
ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 2300ಕ್ಕೂ ಹೆಚ್ಚು ವಿಶೇಷ ಬಸ್ ಸೌಲಭ್ಯ ವ್ಯವಸ್ಥೆ ಮಾಡಲಾಗಿದ್ದು ಸೆಪ್ಟೆಂಬರ್ 26, 27 ಮತ್ತು 30ರಂದು ಬೆಂಗಳೂರಿನ ಕೆಂಪೇಗೌಡ ರಸ್ತೆ, ಶಾಂತಿನಗರ ಬಸ್ ನಿಲ್ದಾಣ, ಮೈಸೂರು ರಸ್ತೆ ನಿಲ್ದಾಣ ಹಾಗೂ ಅಂತರಾಜ್ಯದ ಹಲವು ಭಾಗಗಳಿಂದಲೂ ಕೆ ಎಸ್ ಆರ್ ಟಿ ಸಿ ವಿಶೇಷ ಬಸ್ ಗಳು ಸಂಚರಿಸಲಿವೆ. ಅಕ್ಟೋಬರ್ 2 ಹಾಗೂ 5ರಂದು ಈ ಬಸ್ ಗಳು ಬೆಂಗಳೂರಿಗೆ ಮರಳಲಿವೆ.
ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಮಡಿಕೇರಿ, ಮಂಗಳೂರು, ಶಿವಮೊಗ್ಗ, ಕಾರವಾರ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಭಾಗಗಳಿಗೆ ವಿಶೇಷ ಬಸ್ ಸಂಚರಿಸಲಿವೆ.
ಇನ್ನು ಹೈದರಾಬಾದ್, ಚೆನ್ನೈ, ಪುಣೆ, ಶಿರಡಿ, ಊಟಿ, ಕೊಡೈಕೆನಾಲ್, ಸೇಲಂ, ತಿರುಚನಾಪಳ್ಳಿ, ಪುದುಕೋಟೆ, ಪಣಜಿ, ಎರ್ನಾಕುಲಂ, ಪಾಲಕ್ಕಾಡ್ ತಾಣಗಳಿಗೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಮೈಸೂರು ದಸರಾಗೆ ತೆರಳುವವರಿಗಾಗಿ ಬೆಂಗಳೂರು-ಮೈಸೂರು ರಸ್ತೆ ಬಸ್ ನಿಲ್ದಾಣದಿಂದ 260 ಹೆಚ್ಚುವರಿ ಬಸ್ ಸೌಲಭ್ಯ ಇರಲಿದೆ. ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಾಳದ ಚಾಮುಂಡಿ ಬೆಟ್ಟ, ಬೃಂದಾವನ ಉದ್ಯಾನವನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಚಾಮರಾಜನಗರ ತಾಣಗಳಿಗೆ 350 ಬಸ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.