*ಗ್ರಂಥಾಲಯ ಮಕ್ಕಳ ಭವಿಷ್ಯ ರೂಪಿಸಲಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬಿ.ಕೆ. ಕಂಗ್ರಾಳಿ ಗ್ರಾಮದಲ್ಲಿ ನೂತನ ಗ್ರಂಥಾಲಯ ಉದ್ಘಾಟಿಸಿದ ಸಚಿವರು ಬೆಳಗಾವಿ: ಗ್ರಂಥಾಲಯ ಎಂದರೆ ಜ್ಞಾನ ಮಂದಿರವಿದ್ದಂತೆ, ಗ್ರಾಮದ ಜನರು, ಯುವಕರು ಇದರ ಪ್ರಯೋಜನ ಪಡೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿ.ಕೆ. ಕಂಗ್ರಾಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ನೂತನ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಗ್ರಾಮದಲ್ಲಿ ಸುಂದರ ಗ್ರಂಥಾಲಯ ನಿರ್ಮಾಣವಾಗಿದೆ. ಇದರ ಪ್ರಯೋಜನ ಮನೆ ಮನೆಗೂ ತಲುಪಬೇಕು ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಡಾಕ್ಟರ್, ಎಂಜಿನಿಯರ್ ಗಳಾಗಬೇಕು. ಎಲ್ಲರೂ ಶಿಕ್ಷಣದ ಮಹತ್ವವನ್ನು ಅರಿತು ಉತ್ತಮವಾಗಿ ಓದಬೇಕು. ಗ್ರಂಥಾಲಯದಲ್ಲಿ ಫೋಟೋ ಹಾಕಲಾಗಿರುವ ಮಹಾನ್ ಪುರುಷರ ಇತಿಹಾಸವನ್ನು ತಿಳಿದುಕೊಳ್ಳಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಉತ್ತಮ ಸ್ಥಾನಕ್ಕೇರಬೇಕು ಎಂದು ಸಚಿವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಸಂಸದರಾದ ಜಗದೀಶ್ ಶೆಟ್ಟರ್, ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.