*3 ಕೋಟಿ ವೆಚ್ಚದಲ್ಲಿ ಮಾವಿನಕಟ್ಟಿ ಗ್ರಾಮದಲ್ಲಿ ಅಭಿವೃದ್ಧಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್* *ರಥ ನಿರ್ಮಾಣದ ಕಾಮಗಾರಿಗೆ ಪೂಜೆ ಸಲ್ಲಿಸಿದ ಸಚಿವರು*


* *ವಿಜೃಂಭಣೆಯಿಂದ ಮಾವಿನಕಟ್ಟಿ ಗ್ರಾಮದ ಜಾತ್ರಾ ಮಹೋತ್ಸವ ಆಚರಣೆ*
* ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ* : ಮುಂದಿನ ವರ್ಷ ನಡೆಯಲಿರುವ ಮಾವಿನಕಟ್ಟಿ ಗ್ರಾಮದ ಜಾತ್ರೆಯ ಜವಾಬ್ದಾರಿಯನ್ನು ಸಂಪೂರ್ಣ ವಹಿಸಿಕೊಳ್ಳಲಾಗುವುದು. 3 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮದ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾವಿನಕಟ್ಟಿ ಗ್ರಾಮದಲ್ಲಿ ಮುಂದಿನ ವರ್ಷ ಜರುಗಲಿರುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥ ನಿರ್ಮಾಣದ (ಚಕ್ರ ಅಳವಡಿಸುವ) ಕಾಮಗಾರಿಗೆ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಸಚಿವರು, ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಅಚರಿಸಲಾಗುವುದು ಎಂದರು.

ಗ್ರಾಮವನ್ನು ಚೆನ್ನಾಗಿ ಇಡಲಿ, ಗ್ರಾಮ ಅಭಿವೃದ್ಧಿಯಾಗಲಿ ಎಂದು ಬೇಡಿಕೊಳ್ಳುವ ಸಲುವಾಗಿಯೇ ಹಿಂದಿನಿಂದಲೂ ಜಾತ್ರೆಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದು ನಮ್ಮ ಹಿಂದೂ ಸಂಪ್ರದಾಯ ಕೂಡ. 2026ರಲ್ಲಿ ನಡೆಯಲಿರುವ ಜಾತ್ರೆಗೆ ಈಗಿನಿಂದಲೇ ಸಿದ್ಧತೆ ನಡೆಯುತ್ತಿದೆ. ರಥ ಓಡಾಡುವ ಊರ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಗ್ರಾಮದ ಮಗಳಾಗಿ ಜಾತ್ರಾ ಮಹೋತ್ಸವದ ಜವಾಬ್ದಾರಿ ವಹಿಸಿಕೊಳ್ಳುವೆ ಎಂದರು.
ಬೆಳಗಾವಿ ಜಿಲ್ಲಾಡಳಿತ, ತಾಲೂಕು ಆಡಳಿತ ಜಾತ್ರಾ ಮಹೋತ್ಸವದ ಬಗ್ಗೆ ನಿಗಾವಹಿಸಲಿದ್ದು, ಈ ವೇಳೆ ಪೊಲೀಸ್ ಇಲಾಖೆ, ಇಂಧನ ಇಲಾಖೆ, ಹೆಸ್ಕಾಂ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಸಾರಿಗೆ ಇಲಾಖೆಗಳು ಕೂಡ ತಮ್ಮ ವ್ಯಾಪ್ತಿಯ ಜವಾಬ್ದಾರಿಯನ್ನು ನಿಭಾಯಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಜಾತ್ರಾ ಮಹೋತ್ಸವದ ವೇಳೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ 10 ಟ್ಯಾಂಕರ್ ನೀಡಲಾಗುವುದು. ಈ ಜಾತ್ರೆ ಕೇವಲ ಗ್ರಾಮಕ್ಕಷ್ಟೇ ಮೀಸಲಲ್ಲ. ಇಡೀ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಸೇರಿದ್ದು, ಎಲ್ಲರೂ ಸೇರಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವವನ್ನು ಆಚರಿಸೋಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ರುದ್ರಮನಿ ದೇವರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಮ್ರತಾ ಜಾಧವ್, ಶಂಕರಗೌಡ ಪಾಟೀಲ, ನಾಗೇಶ್ ದೇಸಾಯಿ, ಬಸವಣ್ಣಿ ಮಲ್ಲಣ್ಣವರ, ಬಸನಗೌಡ ಪಾಟೀಲ, ಇಂದ್ರಸಿಂಗ್ ಜಾಧವ್, ಸಚಿನ್ ಜಾಧವ್, ಕಸ್ತೂರಿ ಮಲ್ಲಣ್ಣವರ, ಕಲ್ಲವ್ವ ಹಿರೇಹೊಳಿ, ಸದಾಶಿವ ತಾನಸಿ, ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.