*ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ಟಿ.ಜೆ.ಎಸ್ ಜಾರ್ಜ್ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ*

ಪ್ರಗತಿವಾಹಿನಿ ಸುದ್ದಿ: ಹಿರಿಯ ಖ್ಯಾತ ಪತ್ರಕರ್ತ ಹಾಗೂ ಅಂಕಣಕಾರ ಟಿ.ಜೆ.ಎಸ್ ಜಾರ್ಜ್ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
“ಟಿ.ಜೆ.ಎಸ್ ಜಾರ್ಜ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬೇಸರವಾಗಿದೆ. ನನಗೆ ಬಹಳ ಆತ್ಮೀಯರಾಗಿದ್ದರು. ಸಾಮಾಜಿಕ ಹಾಗೂ ಸಾಂಸ್ಕೃತಿಕ ದೃಷ್ಟಿಕೋನದ ಜೊತೆಗೆ ನೇರ, ದಿಟ್ಟ ಬರವಣಿಗೆ ಮೂಲಕ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಸುದೀರ್ಘ ಆರು ದಶಕಗಳ ಕಾಲ ತಮ್ಮ ಬರವಣಿಗೆ ಹಾಗೂ ಅಂಕಣಗಳ ಮೂಲಕ ಸತ್ಯಶೋಧನೆ ಮಾಡುತ್ತಿದ್ದ ಪತ್ರಕರ್ತರಾಗಿದ್ದರು ಎಂದು ಶಿವಕುಮಾರ್ ಅವರು ಬಣ್ಣಿಸಿದ್ದಾರೆ.
ಏಷ್ಯನ್ ವೀಕ್ ಮ್ಯಾಗಜೀನ್ ಸಂಸ್ಥಾಪಕ ಸಂಪಾದಕರಾಗಿದ್ದ ಜಾರ್ಜ್ ಅವರು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ತಮ್ಮ ಬರವಣಿಗೆ ಮೂಲಕ ಸಂಪಾದಕೀಯದ ಘನತೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ದವರು ಜಾರ್ಜ್.
ಖ್ಯಾತ ಲೇಖಕರೂ ಆಗಿದ್ದ ಜಾರ್ಜ್ ಅವರು, ಎಂ.ಎಸ್ ಸುಬ್ಬಲಕ್ಷ್ಮಿ, ಎನ್.ಟಿ ರಾಮರಾವ್, ನರ್ಗಿಸ್ ಹಾಗೂ ಇತರ ಗಣ್ಯರ ಜೀವನಚರಿತ್ರೆ ರಚಿಸಿದ್ದರು. ಪತ್ರಿಕೋದ್ಯಮ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಅವರ ಅಗಲಿಕೆ ಪತ್ರಿಕೋದ್ಯಮಕ್ಕೆ ದೊಡ್ಡ ನಷ್ಟ.
ತಮ್ಮ ಬರವಣಿಗೆಗಳ ಮೂಲಕ ಜಾರ್ಜ್ ಅವರು ಜೀವಂತವಾಗಿರಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.