
ಪ್ರಗತಿವಾಹಿನಿ ಸುದ್ದಿ: ಖ್ಯಾತ ಸಾಹಿತಿ, ಹಿರಿಯ ಕಥೆಗಾರ ಪ್ರೊ.ಮೊಗಳ್ಳಿ ಗಣೇಶ್ (64) ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸುಮಾರು 28 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ವಿಶಿಷ್ಠ ಶೈಲಿಯ ಕಥೆಗಳ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಸೂರ್ಯನನ್ನು ಬಚ್ಚಿಡಬಹುದೇ? ಹಾಗೂ ಅನಾದಿ ಕಾವ್ಯ ಸಂಕಲನಗಳ ಮೂಲಕವು ಪ್ರೊ.ಮೊಗಳ್ಳಿ ಗಣೇಶ್ ಜನಪ್ರಿಯರಾಗಿದ್ದರು.
ಬುಗುರಿ, ಮಣ್ಣು, ಅತ್ರೆ, ಭೂಮಿ, ಕನ್ನೆಮಳೆ, ದೇವರ ದಾರಿ, ಮೊಗಳ್ಳಿ ಕಥೆಗಳು ಮುಂತಾದ ಕಥಾಸಂಕಲನಗಳನ್ನು ಹಾಗೂ ತೊಟ್ಟಿಲು, ಕಿರೀಟ ಎಂಬ ಕಾದಂಬರಿಗಳನ್ನು ರಚಿಸಿದ್ದರು. ಬೇರು ಎಂಬ ಬೃಹತ್ ಕಾದಂಬರಿ, ಕಥನ ಎಂಬ ಪ್ರಬಂಧ ಸಂಕಲನಗಳನ್ನೂ ಬರೆದಿದ್ದರು.