*ಕಾಂಗ್ರೆಸ್ ತೊರೆದು ಡಿಸಿಎಂ ಆಗ್ತೀಯಾ? ಇಲ್ಲಾ, ಜೈಲಿಗೆ ಹೋಗ್ತೀಯಾ? ಎಂದು ಕಾಲ್ ಬಂದಿತ್ತು: ಡಿಕೆಶಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಅಂದು ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರ ಬಿದ್ದುಹೋಗುವ ಸಂದರ್ಭದಲ್ಲಿ ನನಗೆ ಕರೆ ಬಂದಿತ್ತು. ಕಾಂಗ್ರೆಸ್ ಪಕ್ಷವನ್ನು ತೊರೆದು ಡಿಸಿಎಂ ಆಗುತ್ತೀಯ? ಇಲ್ಲವೇ ಜೈಲಿಗೆ ಹೋಗುತ್ತೀಯಾ? ಅಂತಾ ಕೇಳಿದಾಗ, ಪಕ್ಷ ನಿಷ್ಠೆಯಿಂದ ನಾನು ಜೈಲನ್ನೇ ಆಯ್ಕೆ ಮಾಡಿಕೊಂಡಿದ್ದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಲೇಖಕ ಕೆಎಂ ರಘು ರಚಿಸಿರುವ “ಎ ಸಿಂಬಲ್ ಆಫ್ ಲಾಯಲ್ಟಿ – ಡಿಕೆ ಶಿವಕುಮಾರ್” ಪುಸ್ತಕ ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ಬುಧವಾರ ಲೋಕಾರ್ಪಣೆಯಾಗಿದೆ. ಈ ಪುಸ್ತಕದ ಮೂಲಕ ಡಿಕೆ ಶಿವಕುಮಾರ್ ಹಲವು ಸ್ಫೋಟಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
ದೆಹಲಿಯಿಂದ ನನಗೆ ಫೋನ್ ಬಂದಿತ್ತು. ಇನ್ಕಮ್ ಟ್ಯಾಕ್ಸ್ ಆಡಿಟರ್ರಿಂದ ಫೋನ್ ಮಾಡಿಸಿ ಮಾತನಾಡಿಸಲಾಗಿತ್ತು. ಡಿಸಿಎಂ ಆಗುತ್ತೀರಾ? ಅಥವಾ ಜೈಲಿಗೆ ಹೋಗುತ್ತೀರಾ? ಎರಡರಲ್ಲಿ ಒಂದು ಆಯ್ಕೆ ಮಾಡಬೇಕು ಎಂದು ಕೇಳಿದ್ದರು. ನಾನು ಪಕ್ಷ ನಿಷ್ಠೆಯನ್ನು ಆಯ್ಕೆ ಮಾಡಿ ಜೈಲಿಗೆ ಹೋದೆ. ಅವತ್ತೇ ಬಿಜೆಪಿ ನೀಡಿದ್ದ ಆಫರ್ ನಿರಾಕರಿಸಿದೆ ಎಂದು ಡಿಕೆಶಿ ಟಾಂಗ್ ನೀಡಿದರು.
ಆವತ್ತು ನನ್ನ ಜತೆಗಿದ್ದ ಶಾಸಕರನ್ನು ವಾಪಸ್ ಕಳುಹಿಸಲು ಹೇಳಿದರು. ಆದರೆ ನಾನು ಪಕ್ಷನಿಷ್ಠೆಗಾಗಿ ಡಿಸಿಎಂ ಬೇಡ ಎಂದು ಜೈಲುವಾಸವನ್ನೇ ಆಯ್ಕೆಮಾಡ್ಕೊಂಡೆ ಹಾಗೆಯೇ ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಹೋಗದಂತೆ ತಡೆದೆ ಎಂದು ಡಿಕೆಶಿ ಹೇಳಿದರು. ಅಲ್ಲದೆ ನಾನು ಮನಸ್ಸು ಮಾಡಿದ್ದರೆ ಅಂದೇ ಡಿಸಿಎಂ ಆಗಬಹುದಿತ್ತು ಎಂದು ಡಿಕೆ ಶಿವಕುಮಾರ್ ರಹಸ್ಯ ಬಿಚ್ಚಿಟ್ಟಿದ್ದಾರೆ.
ನಾನು ಮುಂದಿನ 8-10 ವರ್ಷ ಮಾತ್ರ ರಾಜಕೀಯ ಮಾಡಬಹುದು. ಯುವಕರಿಗೆ ಅವಕಾಶ ಸಿಗಬೇಕು. ಈ ಪುಸ್ತಕದಲ್ಲಿ ನನ್ನ ಬದುಕಿನ ಶೇ. 99 ರಷ್ಟು ಅಂಶಗಳು ಸತ್ಯವಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ಪವರ್ ಶೇರಿಂಗ್ ಪಾಲಿಟಿಕ್ಸ್ ಚರ್ಚೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಪರೋಕ್ಷವಾಗಿ ತಾವು ಈಗಲೂ ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು ಎಂಬ ಸಂದೇಶವನ್ನು ರವಾನಿಸಿದಂತಿದೆ.