*ಡಿಸೆಂಬರ್ 13 ರಂದು ವರ್ಷದ ಕೊನೆಯ ಲೋಕ ಅದಾಲತ್: ಮಂಜುನಾಥ ನಾಯಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ವರ್ಷದ ಕೊನೆಯ (4ನೇ) ಲೋಕ ಅದಾಲತ್ ಡಿಸೆಂಬರ್ 13 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ ಅವರು ತಿಳಿಸಿದರು.
ಬೆಳಗಾವಿ ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರ ಕಚೇರಿ(ಚೇಂಬರ್)ಯಲ್ಲಿ ಶನಿವಾರ (ನ.22) ನಡೆದ ಪತ್ರಿಕಾಗೋಷ್ಠಿ ಅವರು ಮಾಹಿತಿ ನೀಡಿದರು.
ಈ ವರ್ಷದ ಕೊನೆಯ ಲೋಕ ಅದಾಲತ್ ಇದಾಗಿದ್ದು, ಇದಕ್ಕೂ ಮುಂಚೆ 3 ಲೋಕ್ ಅದಾಲತ್ ಗಳು ನಡೆದಿವೆ. ಈ ವರ್ಷದ ಕೊನೆಯ ಲೋಕ ಅದಾಲತ್ ಡಿಸೆಂಬರ್ 13 ರಂದು
ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ನ್ಯಾಯಾಲಯದಲ್ಲಿ ಬಾಕಿ ಇರುವ ವಿವಿಧ ಪ್ರಕರಣಗಳನ್ನು ರಾಜಿ ಮಾಡಲಾಗುವುದು ಎಂದರು.
ವೈವಾಹಿಕ, ಕೌಟುಂಬಿಕ ಮತ್ತು ಪಾಲು, ಬ್ಯಾಂಕುಗಳಿಗೆ ಸಂಬಂಧಪಟ್ಟ ಪ್ರಕರಣಗಳು, ಚೆಕ್ ಬೌನ್ಸ್, ಭಾರತ ದಂಡ ಸಂಹಿತೆಯ ರಾಜಿಯಾಗಬಲ್ಲ ಪ್ರಕರಣಗಳು, ವ್ಯಾಜ್ಯಗಳು, ಮೋಟಾರ ವಾಹನ ಅಪಘಾತ ಪರಿಹಾರ, ಕಂದಾಯ ಮತ್ತು ಇತರೆ ಎಲ್ಲಾ ರೀತಿಯ ರಾಜಿಯಾಗಬಹುದಾದಂತಹ ಪ್ರಕರಣಗಳ ಹಾಗೂ ನ್ಯಾಯಾಲಯಗಳಲ್ಲಿ ತನಿಕೆಗೆ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು.
ಲೋಕ ಅದಾಲತ್ ನಲ್ಲಿ ಪರಿಹರಿಸಬಹುದಾದ ಪ್ರಕರಣಗಳನ್ನು ಗುರುತಿಸಿ ಲೋಕ ಅದಾಲತ್ ನಲ್ಲಿ ಇತ್ಯರ್ಥಪಡಿಸಿ ನ್ಯಾಯಾಲಯದ ಸಮಯ ಉಳಿತಾಯ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
ವಾಹನ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡವನ್ನು ಶೇಕಡಾ 50% ಪ್ರತಿಶತ ರಿಯಾಯತಿ ನೀಡಿ ದಂಡ ಪಾವತಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯ ಎಲ್ಲಾ 14 ತಾಲೂಕು ಕೇಂದ್ರಗಳ ನ್ಯಾಯಾಲಯ ಸಮುಚ್ಚಯದಲ್ಲಿ ಲೋಕ ಅದಾಲತ್ ಏಕ ಕಾಲದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ ಹೇಳಿದರು.
ಇದೇ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ಮಾತನಾಡಿ ಕಳೆದ ಲೋಕ ಅದಾಲತ್ ನಲ್ಲಿ 14500 ಪ್ರಕರಣಗಳನ್ನು ಜಿಲ್ಲೆಯ ನ್ಯಾಯಾಲಯಗಳಲ್ಲಿ ಇತ್ಯರ್ಥ ಪಡಿಸಲಾಗಿದೆ. ಅದೇ ರೀತಿಯಲ್ಲಿ ಈಗ ನಡೆಯಲಿರುವ ಲೋಕ ಅದಾಲತ್ ನಲ್ಲಿ ಸುಮಾರು 20 ಸಾವಿರ ಪ್ರಕರಣಗಳನ್ನು ಗುರುತಿಸಲಾಗಿದ್ದು, ಕನಿಷ್ಠ 14 ರಿಂದ 16 ಸಾವಿರದ ವರೆಗೂ ಪ್ರಕರಣಗಳ ಇತ್ಯರ್ಥ ಪಡಿಸುವ ಎಂದು ಗುರಿ ನಿಗದಿಪಡಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.



