*ಶನಿವಾರ ಬೆಳಗಾವಿಯಲ್ಲಿ ಮಹಿಳೆಯರಿಂದ ಯಕ್ಷಗಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಶಿರಸಿಯ ಯಕ್ಷಗೆಜ್ಜೆ ತಂಡದವರಿಂದ ಬೆಳಗಾವಿಯಲ್ಲಿ ಶನಿವಾರ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಅಂದು ಸಂಜೆ 5 ಗಂಟೆಯಿಂದ, ನೆಹರು ನಗರದ ಕನ್ನಡ ಭವನದಲ್ಲಿ ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ನರಕಾಸುರ ವಧೆ ಅರ್ಥಾತ್ ಪಾರಿಜಾತ ಯಕ್ಷಗಾನ ಪ್ರದರ್ಶನವಾಗಲಿದೆ.
ಹಿಮ್ಮೇಳದಲ್ಲಿ ಗಜಾನನ ಭಟ್ ತುಳಗೇರಿ, ಶಂಕರ ಭಾಗವತ ಯಲ್ಲಾಪುರ, ಪ್ರಶಾಂತ ಹೆಗಡೆ ಕೈಗಡಿ, ವೇಷಭೂಷಣ ಉಮೇಶ ಹೆಗಡೆ ಹೊಕಣಕೇರಿ ನಿರ್ವಹಿಸಲಿದ್ದಾರೆ.
ಮುಮ್ಮೇಳದಲ್ಲಿ ಕೃಷ್ಣನಾಗಿ ನಿರ್ಮಲಾ ಹೆಗಡೆ, ನರಕಾಸುರನಾಗಿ ಸೌಮ್ಯಾ ಹೆಗಡೆ, ಸತ್ಯಭಾಮೆಯಾಗಿ ಪ್ರೀತಿ ಹೆಗಡೆ, ದೇವೇಂದ್ರನಾಗಿ ರೇಣುಕಾ ನಾಗರಾಜ, ಅಗ್ನಿಯಾಗಿ ಭಾಗ್ಯಶ್ರೀ ಪವಾರ, ವರುಣನಾಗಿ ಪ್ರಕೃತಿ ಪವಾರ ಪಾತ್ರ ನಿರ್ವಹಿಸಲಿದ್ದಾರೆ.
ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಜರಾಯಿ ಇಲಾಖೆಯ ನಿವೃತ್ತ ಉಪ ಆಯುಕ್ತ ರವಿ ಕೊಟಾರಗಸ್ತಿ ಮತ್ತು ಹೊಟೆಲ್ ಮಾಲಿಕರ ಸಂಘದ ಅಧ್ಯಕ್ಷ ವಿಜಯ ಸಾಲಿಯಾನ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹವ್ಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಪೂರ್ಣಿಮಾ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಜಯಲಕ್ಷ್ಮೀ ಅನಂತ ಪರಿವಾರದವರು ಕಾರ್ಯಕ್ರಮ ಪ್ರಾಯೋಜಿಸಿದ್ದಾರೆ. ಹವ್ಯಕ ಕ್ಷೇಮಾಭಿವೃದ್ದಿ ಸಂಘ, ಬಂಟರ ಸಂಘ, ಕಲಾರಂಗ ಮತ್ತು ಕನ್ನಡ ಭವನ ಕಾರ್ಯಕ್ರಮ ಸಂಘಟಿಸಿವೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗಮಿಸಿ ಪ್ರೋತ್ಸಾಹಿಸಬೇಕೆಂದು ಸಂಘಟಕರು ಕೋರಿದ್ದಾರೆ.




