
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ
ಪ್ರಗತಿವಾಹಿನಿ ಸುದ್ದಿ: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ತೆರೆ ಬಿದ್ದಿದೆ. ಬಡಿಗೇರ್ ದೇವೇಂದ್ರ ನಿರ್ದೇಶನದ ಕನ್ನಡದ ‘ವನ್ಯ’ ಚಲನಚಿತ್ರಕ್ಕೆ ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭ್ಯವಾಗಿದೆ.
ಜಪಾನ್ ನ ‘ಲಾಸ್ಟ್ ಲ್ಯಾಂಡ್’ ಏಷ್ಯದ ಅತ್ಯುತ್ತಮ ಹಾಗೂ ಮರಾಠಿಯ ‘ಸಬರ್ ಬೊಂದಾ’ ಭಾರತದ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆದಿವೆ.
‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ವಿಜೇತರಿಗೆ ಪಾರಿತೋಷಕದ ಜೊತೆಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯಿತು. ದ್ವಿತೀಯ ಮತ್ತು ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಗೆದ್ದವರಿಗೆ ಅನುಕ್ರಮವಾಗಿ 5 ಲಕ್ಷ ರೂ. ಹಾಗೂ 2 ಲಕ್ಷ ರೂ. ನೀಡಿ ಗೌರವಿಸಲಾಯಿತು.
ಏಷ್ಯನ್ ಚಿತ್ರ ವಿಭಾಗದಲ್ಲಿ ಈ ವರ್ಷ ಒಟ್ಟು 15 ಸಿನಿಮಾಗಳು ಪ್ರಶಸ್ತಿಯ ಕಣದಲ್ಲಿದ್ದವು. ಈ ಪೈಕಿ ಜಪಾನ್ನ ‘ಲಾಸ್ಟ್ ಲ್ಯಾಂಡ್’ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಪಾತ್ರವಾಗಿದೆ. ಭಾರತದ ‘ಶೇಪ್ ಆಫ್ ಮೋಮೋ’ ಮತ್ತು ಜಪಾನ್ನ ‘ದಿ ಡೀಪೆಸ್ಟ್ ಸ್ಪೇಸ್ ಇನ್ ಅಸ್’ ಸಿನಿಮಾಗಳು ದ್ವಿತೀಯ ಮತ್ತು ತೃತೀಯ ಸಿನಿಮಾ ಪ್ರಶಸ್ತಿಗೆ ಭಾಜನವಾಗಿವೆ. ಫಿಲಿಪೈನ್ಸ್ನ ‘ರಿಪಬ್ಲಿಕ್ ಆಫ್ ಪಿಪೊಲಿಪಿನಾಸ್’ ಚಿತ್ರವು ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಪಡೆದಿದೆ.
ಭಾರತೀಯ ವಿಭಾಗದಲ್ಲಿ ಮರಾಠಿ ಚಿತ್ರ ‘ಸಬರ್ ಬೊಂಡಾ’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪದೇದಿದೆ. ಮಲಯಾಳಂನ ‘ಮೋಹಂ’ ಮತ್ತು ‘ಕಾಡು’ ಸಿನಿಮಾಗಳು ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸಿನಿಮಾ ಪ್ರಶಸ್ತಿಗಳನ್ನು ಗೆದ್ದಿವೆ. ಮರಾಠಿ ಭಾಷೆಯ ‘ಗೊಂದಾಳ್’ ಚಿತ್ರವು ಫಿಪ್ರೆಸ್ಕಿ ಪ್ರಶಸ್ತಿ ಪಡೆದರೆ, ಮಲಯಾಳಂ ಭಾಷೆಯ ‘ಸರ್ಕೀಟ್’ ಚಿತ್ರವು ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಪಡೆದಿದೆ.

ಕನ್ನಡ ಸ್ಪರ್ಧಾ ವಿಭಾಗದಲ್ಲಿ ಈ ಬಾರಿ 14 ಸಿನಿಮಾಗಳು ಸ್ಪರ್ಧಿಸಿದ್ದವು. ಈ ಪೈಕಿ ‘ವನ್ಯ’ ಚಿತ್ರವು ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪಡೆದಿದೆ. ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರಗಳಾಗಿ ‘ನಮ್ ಸಾಲಿ’ ಮತ್ತು ‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಆಯ್ಕೆಯಾಗಿವೆ. ‘ಹಕ್ಕಿಗಾಗಿ’ ಚಿತ್ರಕ್ಕೆ ನೆಟ್ಪ್ಯಾಕ್ ತೀರ್ಪುಗಾರರ ಪ್ರಶಸ್ತಿ ಸಿಕ್ಕಿದೆ. ‘ಮೃಗತೃಷ್ಣ’ ಮತ್ತು ‘ಫೋರ್ ಬೈ ಫೋರ್’ ಚಿತ್ರಗಳು ತೀರ್ಪುಗಾರರ ವಿಶೇಷ ಮನ್ನಣೆಗೆ ಭಾಜನವಾಗಿವೆ.
ಇನ್ನು ಕನ್ನಡದ ‘ವನ್ಯ’ ಸಿನಿಮಾ 2025ರ ಗೋವಾ ಇಂಡಿಯನ್ ಫಿಲಂ ಫೆಸ್ಟಿವಲ್ಗೆ ಆಯ್ಕೆಯಾಗಿದೆ. ಬಡಿಗೇರ್ ದೇವೇಂದ್ರ ಈ ಸಿನಿಮಾದ ನಿರ್ದೇಶಕರು. ಕಾರ್ಪೊರೇಟ್ ಮಾಫಿಯಾ ವಿರುದ್ಧ ತಂದೆ-ಮಗಳ ಹೋರಾಟವನ್ನು ಒಳಗೊಂಡಿದೆ. ವೈಜನಾಥ್ ಬಿರಾದಾರ್, ಮೇಘನಾ ಬೆಳವಾಡಿ, ಬೇಬಿ ಧಾತ್ರಿ ಭಟ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಗೋವಾ ಇಂಡಿಯನ್ ಫಿಲಂ ಫೆಸ್ಟಿವಲ್ ಇದೇ ನವೆಂಬರ್ 20 ರಿಂದ 28ರ ವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದೆ. ಈ ವರ್ಷ ಇಂಡಿಯನ್ ಪನೋರಮಾಗೆ ಆಯ್ಕೆಯಾದ ಏಕೈಕ ಕನ್ನಡ ಚಲನಚಿತ್ರ ಎಂಬ ಹೆಗ್ಗಳಿಕೆಯನ್ನು ವನ್ಯ ಚಲನಚಿತ್ರ ಪಡೆದಿದೆ.



