*ಸುಳಗಾದಲ್ಲಿ ಭವ್ಯ ಮಹಾಲಕ್ಷ್ಮೀ ಮಂದಿರ ಉದ್ಘಾಟನೆ: ಕೊಟ್ಟ ವಚನ ಪೂರೈಸಿದ ಸಂತೃಪ್ತಿ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ನಾನು ಒಮ್ಮೆ ಕೊಟ್ಟ ಮಾತಿನಿಂದ ಎಂದಿಗೂ ಹಿಂದೆ ಸರಿಯುವ ಜಾಯಮಾನದವಳಲ್ಲ. ಕ್ಷೇತ್ರಾದ್ಯಂತ ಚುನಾವಣೆ ಪೂರ್ವ ಇರಲಿ, ನಂತರದಲ್ಲಿ ಇರಲಿ ಜನರಿಗೆ ನೀಡಿದ ಎಲ್ಲ ವಾಗ್ದಾನಗಳನ್ನೂ ಹಂತ ಹಂತವಾಗಿ ಈಡರಿಸುತ್ತಿದ್ದೇನೆ. ಇಡೀ ಕ್ಷೇತ್ರ ಅಭಿವೃದ್ಧಿಯಾಗುತ್ತಿರುವುದರಿಂದ ಜನರ ಮುಖದಲ್ಲಿ ಖುಷಿ ನೋಡಿ ಧನ್ಯತಾಭಾವ ಮೂಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳಗಾ (ಯು) ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಭವ್ಯ ಶ್ರೀ ಮಹಾಲಕ್ಷ್ಮಿ ಮಂದಿರದ ವಾಸ್ತುಶಾಂತಿ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಂದಿರವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ಮಂದಿರದ ಲೋಕಾರ್ಪಣೆಯ ಪೂರ್ವದಲ್ಲಿ ಗ್ರಾಮಸ್ಥರು ಬಾಗಿನ ರೂಪದಲ್ಲಿ ನೀಡಿದ ಸೀರೆಯನ್ನು ಉಟ್ಟುಕೊಂಡು, ಮಂದಿರದ ಲೋಕಾರ್ಪಣೆ ನೆರವೇರಿಸಿದ ಸಚಿವರು, ಇಂತಹ ಜನರಿರುವ ಕ್ಷೇತ್ರ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದರು.

ಕ್ಷೇತ್ರದಲ್ಲಿ ಕಳೆದ 7 ವರ್ಷದಲ್ಲಿ 150ಕ್ಕೂ ಹೆಚ್ಚು ದೇವಸ್ಥಾನಗಳ ಜೀರ್ಣೋದ್ಧಾರವಾಗಿದೆ. ಇದರ ಜೊತೆಗೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಸೇರಿದಂತೆ ಎಲ್ಲ ರೀತಿಯ ಕೆಲಸಗಳನ್ನು ಮಾಡಲಾಗುತ್ತಿದೆ. ಜಾತ್ರೆಗಳ ಸಂದರ್ಭದಲ್ಲಿ ಪ್ರತಿ ಗ್ರಾಮಕ್ಕೆ 3ರಿಂದ 5 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದೆ. ಕ್ಷೇತ್ರದ ಜನರು ಹೇಳಿದ ಯಾವ ಕೆಲಸವನ್ನೂ ಇಲ್ಲ ಎನ್ನುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಚುನಾವಣೆಯ ಸಂದರ್ಭದಲ್ಲಿ ಮಾತ್ಕ ಕಾಣಿಸಿಕೊಳ್ಳುವವರನ್ನು ನಂಬದೆ ನನ್ನ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಇದೇ ಸಮಯದಲ್ಲಿ ದೇವಸ್ಥಾನ ನಿರ್ಮಾಣಕ್ಕಾಗಿ ಸೇವೆ ಸಲ್ಲಿಸಿರುವ ಅನೇಕ ಮಹನೀಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ಬಾಳು ದೇಸೂರಕರ್, ಬಾಗಣ್ಣ ನರೋಟಿ, ಸಂಜಯ ಪಾಟೀಲ, ರಮೇಶ ಕಣ್ಣುಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೀಣಾ ಹಲವಾಯಿ, ಜಯವಂತ ಬಾಳೇಕುಂದರಗಿ, ಮಾರುತಿ ಪಾಟೀಲ, ಮಲ್ಲಪ್ಪ ಸುಳಗೇಕರ್, ಕಾಶಿರಾಮ್ ಪಾಟೀಲ, ಅಜಿತ್ ಕಲಕಾಂಬ್ಕರ್, ಪಪ್ಪು ಪಾಟೀಲ, ಯಲ್ಲಪ್ಪ ಕಲಕಾಂಬ್ಕರ್, ಮನೋಜ್ ಕಲಕಾಂಬ್ಕರ್, ಶೇಖರ್ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.



