*ಕೆಲಸದಿಂದ ತೆಗೆದುಹಾಕಿದ್ದಕ್ಕೆ ಸಿಡಿದೆದ್ದ ಉದ್ಯೋಗಿ: ಮ್ಯಾನೇಜರ್ ನನ್ನು ಚಾಕುವಿನಿಂದ ಇರಿದು ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆದಿದ್ದಕ್ಕೆ ಕೋಪಗೊಂಡ ವ್ಯಕ್ತಿಯೋರ್ವ, ಕಂಪನಿಯ ಮ್ಯಾನೇಜರ್ನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಬೆಂಗಳೂರಿನ ತಿಗಳರಪಾಳ್ಯದ ಪವರ್ ಪ್ಲಾಸ್ಟಿಕ್ ಪ್ರೈವೆಟ್ ಲಿಮಿಟೆಡ್ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಮ್ಯಾನೇಜರ್ ರಾಹುಲ್(38)ನನ್ನು ವ್ಯಕ್ತಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಹನುಮಂತಪ್ಪ ಕೊಲೆ ಮಾಡಿರುವ ಉದ್ಯೋಗಿ. ಯಾದಗಿರಿ ಮೂಲದ ಹನುಮಂತಪ್ಪ, ತನ್ನನ್ನು ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡು ಮ್ಯಾನೇಜರ್ ನನ್ನು ಚಾಕುವಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮ್ಯಾನೇಜರ್ ರಾಹುಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮ್ಯಾನೇಜರ್ ಕೊನೆಯುಸಿರೆಳೆದಿದ್ದಾರೆ.
ಹನುಮಂತಪ್ಪ, ಕಂಪನಿಯಲ್ಲಿದ್ದ ಮ್ಯಾನೇಜರ್ ರಾಹುಲ್ಗೆ ಸುಮಾರು 10 ಬಾರಿ ಚಾಕುವಿನಿಂದ ಇರಿದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ರಾಹುಲ್, ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮೃತ ರಾಹುಲ್ ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸದ್ಯ ರಾಜಗೋಪಾಲ್ ನಗರ ಪೊಲೀಸರು, ಆರೋಪಿ ಹನುಮಂತಪ್ಪನನ್ನ ಬಂಧಿಸಿದ್ದಾರೆ.



