*ಏರ್ ಪೋರ್ಟ್ ಕಚೇರಿಗೆ ಮಾಟ-ಮಂತ್ರದ ಬಾಕ್ಸ್ ಕಳುಸಿದ್ದ ಸ್ವಯಂ ಘೋಷಿತ ದೇವಮಾನವ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಕಚೇರಿಗೆ ಕೊರಿಯರ್ ನಲ್ಲಿ ಮಾಟ-ಮಂತ್ರದ ಸಾಮಗ್ರಿಗಳಿದ್ದ ಬಾಕ್ಸ್ ಕಳುಹಿಸಿ ಆತಂಕ ಸೃಷ್ಟಿಸಿದ್ದ ಸ್ವಯಂ ಘೋಷಿತ ದೇವಮಾನವನನ್ನು ಏರ್ ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.
ನೆದರ್ಲೆಂಡ್ ಪ್ರಜೆ ಸುಭಾಷ್ ಜೈ ಅಜೀಬ್ (65) ಬಂಧಿತ ಆರೋಪಿ. ಸುಭಾಷ್ ಜೈ ಪೂರ್ವಜರು ಭಾರತದವರು. ಹಲವು ವರ್ಷಗಳ ಹಿಂದೆಯೇ ನೆದರ್ಲೆಂಡ್ ಗೆ ಹೋಗಿ ನೆಲೆಸಿದ್ದರು. ಸುಭಾಷ್ ಪೂರ್ವಜರು ಆ ದೇಶದ ಪೌರತ್ವ ಪಡೆದುಕೊಂಡಿದ್ದರು. ಹಾಗಾಗಿ ಸುಭಾಷ್ ಕೂಡ ನೆದರ್ಲೆಂಡ್ ಪ್ರಜೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ಸುಭಷ್ ಜೈ ನೆದರ್ಲೆಂಡ್ ನಿಂದ ಉತ್ತರ ಪ್ರದೇಶಕ್ಕೆ ಬಂದಿದ್ದರು. ಬಳಿಕ ಅಲ್ಲಿಂದ ವಿಮಾನದಲ್ಲಿ ಬೆಂಗಳೂರು ಏರ್ ಪೋರ್ಟ್ ಗೆ ಬಂದಿದ್ದ. ಹೂವಿನ ಹಾರ, ಅರಿಶಿನ, ಕುಂಕುಮ, ಕಬ್ಬು, ದೇವರ ಫೋಟೋ, ಕಬ್ಬಿಣದ ರಾಡ್ ಗಳನ್ನು ಪೆಟ್ಟಿಗೆಯಲ್ಲಿ ತುಂಬಿಸಿ ಅದನ್ನು ವಿಮಾನ ನಿಲ್ದಾಣದ ಬಳಿಯ ಅಂಚೆ ಕಚೇರಿಯಿಂದ ಕೆ ಐಎ ಸಿಇಒ ಹೆಸರಿಗೆ ಕೊರಿಯರ್ ಮೂಲಕ ಕಳುಹಿಸಿದ್ದ. ಎಂದು ಪೊಲೀಸರು ತಿಳಿಸಿದ್ದಾರೆ.
ಅಂಚೆ ಕಚೇರಿ ಸಿಸಿಕ್ಯಾಮರಾ ಪರಿಶೀಲಿಸಿದಾಗ ಆರೋಪಿಯ ಸುಳಿವು ಲಭ್ಯವಾಗಿತ್ತು. ಹೈದರಾಬಾದ್ ನ ಲಾಡ್ಜ್ ನಲ್ಲಿ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆ ತರಲಾಗಿದೆ. ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



