*ಬೆಳಗಾವಿ ಜಿಲ್ಲೆಯ ರೈತರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ 2024-25 ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರೈತರ ಬೆಳೆ ವಿಮೆಗೆ ನೋಂದಣಿಯಾದ ಪ್ರಸ್ತಾವನೆಗಳನ್ನು ಬೆಳೆ ಸಮೀಕ್ಷೆಯ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿ ಸರ್ಕಾರದಿಂದ ಅನುಮೋದನೆಯಾದ ವಿನಾಯಿತಿಗಳನ್ನು ಅಳವಡಿಸಿ ತಾಳೆ ಆಗಿರುವ ಪ್ರಸ್ತಾವನೆಗಳಿಗೆ ಸಂರಕ್ಷಣೆ ತಂತ್ರಾಂಶದಲ್ಲಿ ವಿಮಾ ಪರಿಹಾರಕ್ಕಾಗಿ ಲೆಕ್ಕ ಹಾಕಲಾಗಿದೆ.
2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಿಮಾ ಸಂಸ್ಥೆಯಿಂದ ತಿರಸ್ಕೃತವಾದ ಒಟ್ಟು 7490 ಹಾಗೂ ಹಿಂಗಾರು ಹಂಗಾಮಿನಲ್ಲಿ ತಿರಸ್ಕರತವಾದ ಒಟ್ಟು 819 ಪ್ರಸ್ತಾವನೆಗಳನ್ನು ರೈತರ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ಮಟ್ಟದ ಕಛೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕಕ್ಕೆ ಲಗತ್ತಿಸಿ ಪ್ರಚಾರ ಪಡಿಸಲಾಗಿದೆ.
ರೈತರು ವಿಮಾ ಅರ್ಜಿ ತಿರಸ್ಕೃತಗೊಂಡ ಬಗ್ಗೆ ಮನವರಿಕೆ ಮಾಡಿಕೊಂಡು ಆಕ್ಷೇಪಣೆ ಇದ್ದಲ್ಲಿ ಮರು ಪರಿಶೀಲಿಸಲು ಮನವಿಗಳನ್ನು 15 ದಿನಗಳ ಒಳಗಾಗಿ ತಮ್ಮ ಆಕ್ಷೇಪಣೆಗಳನ್ನು ವಿಮೆ ಮಾಡಿದ ಬೆಳೆ ಬಗ್ಗೆ 1) 2024-25 ರ ಪಹಣಿ ಪತ್ರಿಕೆಯಲ್ಲಿ (RTC) ವಿಮೆಗೆ ನೊಂದಾಯಿಸಿದ ಬೆಳೆ ನಮೂದಾಗಿರಬೇಕು 2) ಬೆಂಬಲ ಬೆಲೆ ಪ್ರಯೋಜನೆ ಪಡೆದಿದ್ದಲ್ಲಿ ರಶೀದಿ 3) ವಿಮೆಗೆ ನೊಂದಾಯಿತ ಬೆಳೆಯ ಉತ್ಪನ್ನವನ್ನು ಎ.ಪಿ.ಎಂ.ಸಿ ಮಾರುಕಟ್ಟೆಗೆ ಮಾರಾಟ ಮಾಡಿದ್ದಲ್ಲಿ ಸದರಿ ದಾಖಲೆ ಈ ದಾಖಲಾತಿಗಳಲ್ಲಿ ಯಾವುದಾದರೊಂದು ದಾಖಲಾತಿಗಳನ್ನು ಸಂಬಂಧಿಸಿದ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ಸಹಾಯಕ ಕೃಷಿ/ತೋಟಗಾರಿಕೆ ನಿರ್ದೇಶಕರ ಕಛೇರಿಗಳಿಗೆ ಸಲ್ಲಿಸಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿರುತ್ತಾರೆ.



