Kannada NewsKarnataka News

ಸಂಗೀತ ವಿಶ್ವದ ಭಾಷೆ -ಡಾ. ಸೌಭಾಗ್ಯ ಭಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಂಗೀತವೆನ್ನುವುದು ವಿಶ್ವದ ಭಾಷೆ. ಜಾತಿ, ಮತ, ಪಂಥ ಯಾವುದೇ ಬೇಧವಿಲ್ಲದ ಭಾಷೆಯಿದು. ಕೋಪ, ತಾಪ, ಸಂತೋಷ, ದುಃಖ, ಪ್ರೀತಿ ಹೀಗೆ ಮನುಷ್ಯನ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ. ಈ ಲಯಬದ್ದವಾದ ಸಂಗೀತವನ್ನು ಕಲಿತಾಗ ಜೀವನವೇ ಲಯಬದ್ದವಾಗಿರುತ್ತೆ. ಅದು ಜೀವನದಲ್ಲಿ ಬದುಕಬೇಕಾದ ಶಿಸ್ತನ್ನು ತಂದುಕೊಡುತ್ತದೆ ಎಂದು ಸ್ತ್ರೀರೋಗ ತಜ್ಞೆ ಡಾ. ಸೌಭಾಗ್ಯ ಭಟ್ ಹೇಳಿದರು.

ಗುರುಪ್ರಸಾದ ನಗರದಲ್ಲಿರುವ ಸಪ್ತಸ್ವರ ಸಂಗೀತ ವಿದ್ಯಾಲಯದ  ೧೯ ನೇ ವಾರ್ಷಿಕ ಸಂಗೀತೋತ್ಸವವನ್ನು ಹಿಂದವಾಡಿಯಲ್ಲಿರುವ ಆಯ್.ಎಂ.ಇ.ಆರ್. ಸಭಾಭವನದಲ್ಲಿ  ಉದ್ಘಾಟಿಸಿದ ಡಾ. ಸೌಭಾಗ್ಯ ಭಟ್ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಗೀತವನ್ನು ಕೇಳಿದಾಗ ಮನಸ್ಸಿನಲ್ಲಿ ಶಾಂತಿ ಮೂಡುತ್ತದೆ. ಈ ರೀತಿ ಶಾಂತಿ ಮೂಡಿಸುವ ವಾತಾವರಣವನ್ನು ದೇಶದ ತುಂಬೆಲ್ಲ ಪಸರಿಸಿದರೆ ದೇಶದಲ್ಲಿ ನಡೆಯುತ್ತಿರುವ ಅಶಾಂತಿಮಯ ವಾತಾವರಣದಿಂದ ಶಾಂತಿಯೆಡೆಗೆ ಒಯ್ಯಬಹುದು ಎಂದು ಹೇಳಿದರು.
ಪುಟ್ಟ ಪುಟ್ಟ ಮಕ್ಕಳು ತುಂಬ ಸುಶ್ರಾವ್ಯವಾಗಿ ಹಾಡುವುದನ್ನು ಕೇಳಿದಾಗ ಮನಸ್ಸಿಗೆ ತುಂಬ ಆನಂದವಾಯಿತು. ಇದರ ಹಿಂದೆ ನಿರ್ಮಲಾ ಪ್ರಕಾಶ ಅವರ ಶ್ರಮ ತುಂಬ ಇದೆ. ಎಪ್ಪತ್ತು ವರ್ಷ ದಾಟಿರುವ ನಿರ್ಮಲಾ ಪ್ರಕಾಶ ದಪಂತಿಗೆ ನಮ್ಮ ಸಹಾಯ ಯಾವಾಗಲೂ ಇದ್ದೇ ಇದೆ ಎಂದು ಹೇಳಿದರು.

ಚಿತ್ರಗೀತೆ, ಭಾವಗೀತೆ, ಭಕ್ತಿಗೀತೆ ಯಾವುದೇ ಇರಲಿ ಎಲ್ಲದಕೂ ಶಾಸ್ತ್ರೀಯ ಸಂಗೀತವೇ ಮೂಲ. ಶಾಸ್ತ್ರಿಯ ತಳಹದಿಯಲ್ಲೇ ನಾವು ಗಾಯಕರಾಗಲು ಸಾಧ್ಯವಿಲ್ಲವೆಂಬುದನ್ನು ನಾವು ಮೊದಲು ಅರಿತುಕೊಳ್ಳಬೇಕು ಎಂದು ಹೇಳಿ ಲಲಿತ ರಾಗದ ಕಣ್ಣೀರಧಾರೆ ಇದೇಕೆ ಇದೇಕೆ(ಹೊಸ ಬೆಳಕು), ಭೀಮಪಲಾಸರಾಗದ ಏ ಜಿಂದಗಿ ಉಸಿಕಿ ಹೈ(ಅನಾರಕಲಿ), ವಚನದಲ್ಲಿ ನಿಮ್ಮ ನಾಮಾಮೃತವ ತುಂಬಿ(ವಚನ), ಭೂಪರಾಗದ ಜ್ಯೋತಿ ಕಳಸ ಛಲಕಿ(ಭಾಭಿಕಿ ಚೂಡಿಯಾ), ಪಿಳ್ಳಂಗೋವಿ ಚಲ್ವಕೃಷ್ಣನ್(ಪುರಂದರದಾಸರ ಕೃತಿ), ದುರ್ಗಾ ರಾಗದ ಆಡ ಪೋಗೋಣ ಬಾರೋ ರಂಗ(ದಾಸರಪದ) ಆಯಾ ರಾಗಗಳ ಕಲ್ಪನೆಗಳನ್ನು ನೀಡಿ ರಾಗಗಳ ಮೇಲೆ ರಚಿತಗೊಂಡಿರುವ ಚಲನಚಿತ್ರಗೀತೆ, ದಾಸರಪದಗಳು, ವಚನಗಳನ್ನು ಹಾಡಿ ತೋರಿಸಿ ಎಲ್ಲರ ಮನಗೆದ್ದರು.

ಇದೇ ಸಂದರ್ಭದಲ್ಲಿ ಡಾ. ಸೌಭಾಗ್ಯ ಭಟ್ ಅವರಿಗೆ ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆಯನ್ನಿಟ್ಟು ಗೌರವಿಸಲಾಯಿತು.
ಸಪ್ತಸ್ವರ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇದಾರ, ಮಾಲಕಂಸ, ಸಾರಂಗ, ಯಮನ ಮುಂತಾದ ರಾಗಗಳನ್ನು ಪ್ರಸ್ತುತಪಡಿಸುವುದರೊಂದಿಗೆ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆಗಳನ್ನು ಹಾಡಿ ತಮ್ಮಲ್ಲಿರುವ ಪ್ರತಿಭೆಯನ್ನು ಹಂಚಿಕೊಂಡರು.

ವಾಮನ ವಾಗೂಕರ, ನಿರಂಜ ಮೂರ್ತಿ, ನಾರಾಯಾಣ ಗಣಾಚಾರಿ, ಜಿತೇಂದ್ರ ಸಾಬಣ್ಣವರ ಹಾರ್ಮೊನಿಯಮ್ ಹಾಗೂ ತಬಲಾ ಸಾಥ ನೀಡಿದರು.
ಡಾ. ಕಿಶೋರ ಭಟ್, ಪ್ರಕಾಶ ಅಯ್ಯರ ಉಪಸ್ಥಿತರಿದ್ದರು. ಸುಷ್ಮಾ ಕೃಷ್ಣಮೂರ್ತಿ ಸ್ವಾಗತಿಸಿದರು. ಡಾ. ಸ್ವಪ್ನಾ ಕುಲಕರ್ಣಿ ಪರಿಚಯಿಸಿದರು. ವರ್ಷಾ ಹೆಗಡೆ ವಂದಿಸಿದರು. ವೀಣಾ ಹೆಗಡೆ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button