
ಪ್ರಗತಿವಾಹಿನಿ ಸುದ್ದಿ: ಪರಿಸರ ಮತ್ತು ಜಾಗತಿಕ ವಿದ್ಯಮಾನಗಳ ಬಗ್ಗೆ ಕೋಡಿಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಮಂಡ್ಯಜಿಲ್ಲೆಯ ಕಿಕ್ಕೇರಿಯಲ್ಲಿ ಮಾತನಾಡಿರುವ ಅವರು, ‘ಅಡವಿಯಲ್ಲಿ ಕಂಡದ್ದು ಕೇಳದ್ದು ಕುರುಹೀನ ರಟ್ಟು’ ಎಂಬ ಭವಿಷ್ಯ ನುಡಿದಿದ್ದಾರೆ. ಪ್ರಕೃತಿಯ ಮುನಿಸು ಈ ಬಾರಿ ಮಿತಿಮೀರಲಿದ್ದು, ಗಾಳಿ ಮತ್ತು ಮಳೆಯ ಆರ್ಭಟದಿಂದಾಗಿ ಜನಜೀವನ ಅಸ್ತವ್ಯಸ್ತಗೊಳ್ಳುವ ಮುನ್ಸೂಚನೆ ನೀಡಿದ್ದಾರೆ.
ವಾಯು ಮಾಲಿನ್ಯ ಅಥವಾ ವಾತಾವರಣದ ಬದಲಾವಣೆಯಿಂದಾಗಿ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇನ್ನು ರಾಜಕೀಯ ಕ್ಷೇತ್ರದಲ್ಲಿ ಕೆಲವು ಅನಿರೀಕ್ಷಿತ ಸೋಲುಗಳು ಎದುರಾಗುವ ಲಕ್ಷಣಗಳಿವೆ ಎಂದು ತಿಳಿಸಿದ್ದಾರೆ. ಈ ಭವಿಷ್ಯದ ಅನ್ವಯ, ಜಾಗತಿಕ ಮಟ್ಟದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಭೂಮಿಯ ಮೇಲೆ ಕಂಡುಬರದ ಮತ್ತು ಹಿಂದೆಂದೂ ಕೇಳರಿಯದ ವಿಚಿತ್ರ ಘಟನೆಗಳು ಸಂಭವಿಸುವುದನ್ನು ಅವರು ‘ಅಡವಿಯಲ್ಲಿ ಕಂಡದ್ದು ಕೇಳದ್ದು ಕುರುಹೀನ ರಟ್ಟು’ ಎಂಬ ಸಾಲುಗಳ ಮೂಲಕ ಸಾಂಕೇತಿಕವಾಗಿ ವಿವರಿಸಿದ್ದಾರೆ.
ಇನ್ನು ಜಾಗತಿಕ ಸ್ತರದಲ್ಲಿ ಪ್ರಭಾವಶಾಲಿ ವ್ಯಕ್ತಿಯೊಬ್ಬರು ಪ್ರಾಣಾಪಾಯಕ್ಕೆ ತುತ್ತಾಗುವ ಸಂಭವವಿದೆ ಎಂಬುದು ಈ ಭವಿಷ್ಯದ ಅತ್ಯಂತ ಆತಂಕಕಾರಿ ವಿಷಯವಾಗಿದೆ. ಅನಿರೀಕ್ಷಿತ ಸಾವುಗಳು ಸಂಭವಿಸುವ ಮೂಲಕ ದೊಡ್ಡ ಮಟ್ಟದ ತಲ್ಲಣಗಳು ಉಂಟಾಗಬಹುದು ಮತ್ತು ಪ್ರಕೃತಿ ವಿಕೋಪಗಳ ಜೊತೆಗೆ ಮಾನವ ನಿರ್ಮಿತ ಅನಾಹುತಗಳು ಕೂಡ ಜನರನ್ನು ಸಂಕಷ್ಟಕ್ಕೆ ಈಡುಮಾಡಲಿವೆ ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
