*ರಂಗಸೃಷ್ಟಿಯಿಂದ ಏ.28ರಂದು “ಸೆಕೆಂಡ್ ಹ್ಯಾಂಡ್ ಸದಾಶಿವ” ಹಾಸ್ಯ ನಾಟಕ*

ಪ್ರಗತಿವಾಹಿನಿ ಸುದ್ದಿ: ರಂಗಭೂಮಿ ಚಟುವಟಿಕೆಗಳಿಗೆ ಮತ್ತಷ್ಟು ಚೈತನ್ಯ ತುಂಬುವ ನಿಟ್ಟಿನಲ್ಲಿ ಬೆಳಗಾವಿಯ ರಂಗಸೃಷ್ಟಿ ಸಾಂಸ್ಕೃತಿಕ ಸಂಘ (ರಿ.)ದಿಂದ ಏಪ್ರಿಲ್ 28ರಂದು ಹಾಸ್ಯ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.
“ಸೆಕೆಂಡ್ ಹ್ಯಾಂಡ್ ಸದಾಶಿವ” ಎಂಬ ಜನಪ್ರಿಯ ಹಾಸ್ಯ ನಾಟಕವನ್ನು ಏಪ್ರಿಲ್ 28ರಂದು, ಸಂಜೆ 6.30ಕ್ಕೆ ಕನ್ನಡ ಭವನ (ರಾಮದೇವ ಹೋಟೆಲ್ ಹತ್ತಿರ)ದಲ್ಲಿ ಪ್ರದರ್ಶಿಸಲಾಗುತ್ತಿದೆ.
ಎಂ. ಎಸ್. ನರಸಿಂಹಮೂರ್ತಿ ರಚಿಸಿರುವ ಈ ನಾಟಕವನ್ನು ಶರಣಗೌಡ ಪಾಟೀಲ ಅವರು ನಿರ್ದೇಶಿಸಿದ್ದಲ್ಲದೆ, ಸಂಗೀತನಿರ್ದೇಶನ, ರಂಗವಿನ್ಯಾಸ ಮತ್ತು ಬೆಳಕಿನ ವಿನ್ಯಾಸವನ್ನೂ ಮಾಡಲಿದ್ದಾರೆ. ಉದ್ಘಾಟನೆಯನ್ನು ಲೋಕೋಪಯೋಗಿ ಇಲಾಖೆ ಕಾಯನಿರ್ವಾಹಕ ಇಂಜಿನಿಯರ್ ಪ್ರವೀಣ ಹುಲಜಿ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಮಾಜ ಸೇವಕರಾದ ಬಸವರಾಜ ಕಾಮಗಾರಕರ ಹಾಗೂ ಆಕ್ಮೆ ಇಂಜಿನಿಯರಿಂಗ್ ವರ್ಕ್ಸ್ನ ಪುಂಡಲೀಕ್ ಅವರು ಭಾಗವಹಿಸಲಿದ್ದಾರೆ. ಇದೇ ವೇಳೆ ರಂಗಾಯಣದ ನಿರ್ದೇಶಕ ಝಾಕೀರ್ ನದಾಫ್ ಅವರನ್ನು ಸನ್ಮಾನಿಸಲಾಗುವುದು. ಅಧ್ಯಕ್ಷತೆಯನ್ನು ರಂಗಸೃಷ್ಟಿ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ರಮೇಶ ಜಂಗಲ್ ವಹಿಸಲಿದ್ದಾರೆ.
ಈ ಹಾಸ್ಯ ನಾಟಕವು ಕುಟುಂಬ ಮೌಲ್ಯಗಳು, ಸಾಮಾಜಿಕ ಪರಿಸ್ಥಿತಿಗಳು ಹಾಗೂ ಮನರಂಜನೆಯನ್ನು ಒಳಗೊಂಡ ಕಥಾವಸ್ತುವಿನ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಲಿದ್ದು, ಸ್ಥಳೀಯ ಕಲಾವಿದರಾದ ವಾಮನ ಮಳಗಿ, ಶಾಂತಾ ಆಚಾರ್ಯ, ಶಿರೀಶ್ ಜೋಶಿ, ವಿಶ್ವನಾಥ ದೇಸಾಯಿ, ಅನುಶ್ರೀ ರಘುವೀರ, ಶರಣಯ್ಯ ಮಠಪತಿ ಅಭಿನಯ ವಿಶೇಷ ಆಕರ್ಷಣೆಯಾಗಲಿದೆ. ನಾರಾಯಣ ಗಣಾಚಾರಿ ತಬಲಾ ಸಾಥ್ ನೀಡಲಿದ್ದಾರೆ. ಕನ್ನಡ ಭವನ ಕಾರ್ಯಕ್ರಮಕ್ಕೆ ಸಹಯೋಗ ನೀಡಿದೆ.
ಉಚಿತ ಪ್ರದರ್ಶನವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕವನ್ನು ಆಸ್ವಾದಿಸುವಂತೆ ರಂಗಸೃಷ್ಟಿಯ ಉಪಾಧ್ಯರಾದ ಎಂ.ಕೆ.ಹೆಗಡೆ ಮತ್ತು ಶೈಲಜಾ ಭಿಂಗೆ, ಕನ್ನಡಭವನದ ಕಾರ್ಯದರ್ಶಿ ಯ.ರು.ಪಾಟೀಲ ಹಾಗೂ ಎರಡೂ ಸಂಘಟನೆಗಳ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.




