
ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಎಲಿಗೆಂಟ್ ಟ್ರ್ಯಾನ್ ಕ್ವಾಲಿಟಿ ಅಪಾರ್ಟ್ ಮೆಂಟ್ ನಲ್ಲಿ ಕೃಷಿ ತಾಪಂಡ ಅವರ ಮನೆಯಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಶಾಕ್ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಆರ್.ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವೈಷಾಕ್ ಕಳೆದ ಒಂದು ವರ್ಷದಿಂದ ಆಗಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳುತ್ತಿದ್ದರು. ಪದೇ ಪದೇ ಆತ ಹೀಗೆ ಹೇಳುತ್ತಿದ್ದುದರಿಂದ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ನಿನ್ನೆ ಕೃಷಿ ತಾಪಂಡ ಸೇರಿದಂತೆ ಮನೆಯಲ್ಲಿ ಯಾರೂ ಇರಲಿಲ್ಲ. ರಾತ್ರಿ 8 ಗಂಟೆ ಸುಮಾರಿಗೆ ಕೃಷಿಗೆ ಕರೆ ಮಾಡಿದ್ದ ವೈಶಾಕ್ ತಾನು ಸಾಯುವುದಾಗಿ ಹೇಳಿದ್ದಾನೆ. ಹೀಗೆ ಹೇಳಿದ ಕೆಲ ಸಮಯದಲ್ಲೇ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ವೈಶಾಕ್ ಕರೆ ಮಾಡಿ ಹೇಳುತ್ತಿದ್ದಂತೆ ಕೃಷಿ ತಕ್ಷಣ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಮನೆಗೆ ಬಂದು ನೋಡುವಷ್ಟರಲ್ಲಿ ಆತ ಸಾವಿಗೆ ಶರಣಾಗಿದ್ದ. ಘಟನಾ ಸ್ಥಳಕ್ಕೆ ಆರ್.ಆರ್.ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


