*ಒಂದೇ ಒಂದು ಮತದಿಂದ ಡಿಎಂಕೆ ಸಚಿವರನ್ನೇ ಸೋಲಿಸಿ ಗೆದ್ದು ಬೀಗಿದ ಟಿವಿಕೆ ಅಭ್ಯರ್ಥಿ*

ಪ್ರಗತಿವಾಹಿನಿ ಸುದ್ದಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಮತ ಕೂಡ ಎಷ್ಟು ಅಮೂಲ್ಯವಾದದ್ದು, ಒಂದು ವೋಟ್ ಕೂಡ ಎಂತಹ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಕೇವಲ ಒಂದು ಮತದ ಅಂತರದಿಂದ ಸಾಮಾನ್ಯ ಅಭ್ಯರ್ಥಿಯೊಬ್ಬ ಸಚಿವರೊಬ್ಬರನ್ನು ಸೋಲಿಸಿ ಶಾಸಕರಾಗಿ ಹೊರ ಹೊಮ್ಮಿರುವ ಘಟನೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಡೆದಿದೆ.
ತಮಿಳುನಾಡಿನ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ಇಂತದ್ದೊಂದು ಅದ್ಭುತಕ್ಕೆ ಸಾಅಕ್ಷಿಯಾಗಿದೆ. ದಶಕಗಳ ಕಾಲದ ರಾಜಕೀಯ ಅನುಭವವಿರುವ ಡಿಎಂಕೆ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರನ್ನು ನಟ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ಕೇವಲ ಒಂದೇ ಒಂದು ಮತದಿಂದ ಸೋಲಿಸಿದ್ದಾರೆ.
ಮತ ಎಣಿಕೆಯ ಆರಂಭದಿಂದಲೂ ಪೆರಿಯಕರುಪ್ಪನ್ ಮತ್ತು ಶ್ರೀನಿವಾಸ ಸೇತುಪತಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪ್ರತಿ ಸುತ್ತಿನಲ್ಲೂ ಮುನ್ನಡೆಯು ಕ್ಷಣಕ್ಷಣಕ್ಕೂ ಬದಲಾಗುತ್ತಿತ್ತು. ಅಂತಿಮ ಸುತ್ತಿನ ಎಣಿಕೆ ಮುಗಿದಾಗ ಇಬ್ಬರ ನಡುವಿನ ವ್ಯತ್ಯಾಸ ಕೇವಲ ಒಂದು ಮತವಾಗಿತ್ತು. ಮರು ಎಣಿಕೆಯ ನಂತರವೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗದ ಕಾರಣ, ಶ್ರೀನಿವಾಸ ಸೇತುಪತಿ ಅವರನ್ನು ಒಂದಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾಗಿ ಘೋಷಿಸಲಾಗಿದೆ.
ವಿಜಯ್ ಅವರ ಟಿವಿಕೆ ಪಕ್ಷ ಇದೇ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ತಮಿಳುನಾಡಿನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. 108 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ.



