*ಪಾಲಿಕೆಯ ಕಂದಾಯ ವಾರ್ಡ್ ಗಳು ಇನ್ನು ಮುಂದೆ ಚುನಾವಣಾ ವಾರ್ಡ್ ಗಳು : ಆಯುಕ್ತ ಕಾರ್ತಿಕ್ ಎಂ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಕಂದಾಯ ವಾರ್ಡಗಳು ಇನ್ನು ಮುಂದೆ ಚುನಾವಣಾ ವಾರ್ಡ್ ಗಳಾಗಲಿವೆ ಎಂದು ಪಾಲಿಕೆಯ ಆಯುಕ್ತ ಕಾರ್ತಿಕ್ ಎಂ. ಹೇಳಿದರು.
ಈ ಕುರಿತು ಪಾಲಿಕೆ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 58 ವಾರ್ಡಗಳ ಗಡಿ ಗುರುತಿಸಿ ನಿಗದಿಗೊಳಿಸಲಾಗಿದೆ. ಈ ಹಿಂದಿನಿಂದ ಸದರಿ ವಾರ್ಡುಗಳನ್ನು ಕಂದಾಯ ವಾರ್ಡ್ ಗಳೆಂದು ಕರೆಯಲಾಗುತ್ತಿತ್ತು. ಆದರೆ ಪಾಲಿಕೆಯ ಅಭಿಯಂತರ ವಿಭಾಗ ಸೇರಿದಂತೆ ವಿವಿಧ ವಿಭಾಗದವರು ಹಾಗೂ ನಗರಸೇವಕರು ಬೇರೆ ಬೇರೆ ರೀತಿಯಲ್ಲಿ ಗುರುತಿಸುತಿಸುವಂತಾಗಿತ್ತು. ಇದರಿಂದಾಗಿ ಆಡಳಿತದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗಿತ್ತು. ಕಾರಣ ಇನ್ನು ಮುಂದೆ ಕಂದಾಯ ವಾರ್ಡ್ ಗಳೆಂಬುದು ರದ್ದಾಗಿ, ಅದರ ಬದಲಾಗಿ ಚುನಾವಣಾ ವಾರ್ಡ್ ಗಳೆಂಬ ಪರಿಕಲ್ಪನೆ ಮುಂದುವರೆಯಲಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಸಂಪೂರ್ಣ ಆಡಳಿತವು ಚುನಾವಣಾ ವಾರ್ಡ್ ಗಳ ವ್ಯಾಪ್ತಿಗೆ ಒಳಪಡುತ್ತಿದೆ. ಈ ಹಿಂದೆ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ ವಸೂಲಿಗಾರರು ಹಾಗೂ ಕಂದಾಯ ನಿರೀಕ್ಷಕರು ಸೇರಿದಂತೆ ಇನ್ನಿತರ ಸಿಬ್ಬಂದಿಗೆ ಚುನಾವಣಾ ವಾರ್ಡ್ ಪ್ರಕಾರ ಮರು ಕಾರ್ಯ ನಿಯೋಜನೆ ಮಾಡಲಾಗಿದೆ. ಚುನಾವಣಾ ವಾರ್ಡ್ ಗಳ ಪ್ರಕಾರವೇ ಪಿಐಡಿ ರಚನೆಯಾಗುತ್ತವೆ ಹಾಗೂ ಇದರಂತೆಯೇ ಕರ ಪಾವತಿ ಮಾಡಬೇಕಾಗುವದು. ಈ ಬದಲಾವಣೆಯನ್ನು ಸಾರ್ವಜನಿಕರು ಗಮನಿಸಬೇಕೆಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ತಿಳಿಸಿದ್ದಾರೆ.


