Belagavi NewsBelgaum NewsKannada NewsKarnataka NewsPolitics

*ಮೈನವಿರೇಳಿಸುವ ‘ಏರ್ ಶೋ’ ವೀಕ್ಷಿಸಿ ರೋಮಾಂಚನಗೊಂಡ ವಸತಿ ಶಾಲೆ ವಿದ್ಯಾರ್ಥಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಸಾಂಬ್ರಾದ ಏರಮೆನ್ ಟ್ರೈನಿಂಗ್ ಸ್ಕೂಲ್ (ATS) ಆವರಣದಲ್ಲಿ ಭಾರತೀಯ ವಾಯುಸೇನೆಯ ವಿಶ್ವವಿಖ್ಯಾತ ಸಾರಂಗ್ ಹೆಲಿಕಾಪ್ಟರ್ ಡಿಸ್ಪ್ಲೇ ತಂಡದಿಂದ ಶುಕ್ರವಾರ ಆಯೋಜಿಸಿದ್ದ ಏರ್ ಶೋ ವನ್ನು ಜಿಲ್ಲೆಯ ವಿವಿಧ ವಸತಿ ಶಾಲೆಗಳ ಸರ್ಕಾರಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ವೀಕ್ಷಿಸಿ ರೋಮಾಂಚನಗೊಂಡರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಶಾಲಾ-ಕಾಲೇಜಿನ ಮಕ್ಕಳು ಏರ್  ಶೋ ವನ್ನು ವೀಕ್ಷಿಸಲು ಅನುಕೂಲ ಕಲ್ಪಿಸಿಕೊಟ್ಟಿದ್ದರು. ಅದರಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲೆಯ ವಿವಿಧ ವಸತಿ ಶಾಲೆಗಳ 373 ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಹಾಗೂ 287 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸೇರಿ ಒಟ್ಟು 660 ವಿದ್ಯಾರ್ಥಿಗಳು ಉಚಿತವಾಗಿ ಭಾಗವಹಿಸಿ, ಏರ್ ಶೋ ವನ್ನು ಕಣ್ತುಂಬಿಕೊಂಡು ಸಂತಸಪಟ್ಟರು. 

5 ಹೆಲಿಕ್ಯಾಪ್ಟರ್ ಗಳಿಂದ ಮೈನವಿರೇಳಿಸುವ ಸಾಹಸ ಪ್ರದರ್ಶನ

ಭಾರತೀಯ ವಾಯುಪಡೆಯ (IAF) ಹೆಮ್ಮೆಯ ‘ಸಾರಂಗ್’ ಹೆಲಿಕಾಪ್ಟರ್ ಪ್ರದರ್ಶನ ತಂಡವು (Sarang Helicopter Display Team) ಅದ್ಭುತ ವೈಮಾನಿಕ ಪ್ರದರ್ಶನವನ್ನು (ಏರ್ ಶೋ) ನಡೆಸಿತು. ಅಗ್ನಿವೀರವಾಯು (Agniveervayu) ಮೊದಲ ಬ್ಯಾಚ್ನ ಪಾಸಿಂಗ್ ಔಟ್ ಪರೇಡ್ ಅಂಗವಾಗಿ ಸಾಂಬ್ರಾದಲ್ಲಿರುವ ಏರ್ಮೆನ್ ಟ್ರೈನಿಂಗ್ ಸ್ಕೂಲ್ (ATS) ಆವರಣದಲ್ಲಿ ಈ ಐತಿಹಾಸಿಕ ಪ್ರದರ್ಶನ ಜರುಗಿತು.

Home add -Advt

ಏರ್ ಶೋನಲ್ಲಿ ವಿಶ್ವದಲ್ಲೇ ಏಕೈಕ 5 ಹೆಲಿಕಾಪ್ಟರ್ ಡಿಸ್ಪ್ಲೇ ತಂಡವಾದ ‘ಸಾರಂಗ್’, ಸ್ವದೇಶಿ ನಿರ್ಮಿತ ಎಎಲ್ಎಚ್ ಧ್ರುವ (ALH Dhruv) ಹೆಲಿಕಾಪ್ಟರ್ಗಳನ್ನು ಬಳಸಿ ಆಕಾಶದಲ್ಲಿ ನಾನಾ ರೀತಿಯ ಕಸರತ್ತುಗಳನ್ನು ಪ್ರದರ್ಶಿಸಿತು. ವಾಯುಪಡೆಯ ಹೆಮ್ಮೆಯ ‘ಸಾರಂಗ್’ ಹೆಲಿಕಾಪ್ಟರ್ ತಂಡವು ಆಕಾಶದಲ್ಲಿ ನಡೆಸಿದ ಮೈನವಿರೇಳಿಸುವ ಸಾಹಸ ಪ್ರದರ್ಶನ ವಿದ್ಯಾರ್ಥಿಗಳನ್ನು ರೋಮಾಂಚನಗೊಳಿಸಿತು.

ವಿದ್ಯಾರ್ಥಿಗಳೊಂದಿಗೆ ಪೈಲಟ್ ಗಳ ಸಂವಾದ

ಏರ್ ಶೋ ಬಳಿಕ ಏರ್ ಕಮಾಂಡರ್ ಸೂರಜ್ ಶಂಕರ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಏರ್ ಶೋ ಬಗ್ಗೆ ಅನಿಸಿಕೆಗಳನ್ನು ಪಡೆದರು.  ಭಾರತೀಯ ವಾಯುಸೇನೆಯ ಕುರಿತು ಹಾಗೂ ವಾಯುಸೇನೆಗೆ ಸೇರ್ಪಡೆಯಾಗಲು ಇರುವ ಅರ್ಹತೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ನಂತರ ಏರ್ ಶೋ ಪ್ರದರ್ಶನ ನೀಡಿದ ಒಟ್ಟು 7 ಜನ ಪೈಲಟ್ ಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.  ಏರ್ ಶೋ ವನ್ನು ನೇರವಾಗಿ ವೀಕ್ಷಿಸಿ, ಪೈಲಟ್ ಗಳೊಂದಿಗೆ ಸಂವಾದ ನಡೆಸುವುದರ ಜೊತೆಗೆ ಛಾಯಾಚಿತ್ರಗಳನ್ನು ಕೂಡ ತೆಗೆಸಿಕೊಳ್ಳುವ ಮೂಲಕ ವಸತಿ ಶಾಲೆಯ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಮಹಾಂತೇಶ ಮುರಗೋಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಸವರಾಜ ಕುರಿಹುಲಿ, ಕ್ರೈಸ್ ವಸತಿ ಶಾಲೆಯ ಜಿಲ್ಲಾ ಸಮನ್ವಯ ಅಧಿಕಾರಿಗಳಾದ ರಾಘವೇಂದ್ರ ಗಂಗರಡ್ಡಿ, ರಾಕೇಶ ಶಿಂಗೆ, ಸಮಾಜಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ಎಮ್.ಬಿ. ಹೊಸಮನಿ ಸೇರಿ ಇನ್ನಿತರ ಅಧಿಕಾರಿಗಳು, ವಸತಿ ಶಾಲೆಗಳು ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related Articles

Back to top button