*ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರ ಪೊಲೀಸರು ವಿನೂತನ ಕ್ರಮಕ್ಕೆ ಮುಂದಾಗಿದ್ದು, ಇವತ್ತಿನಿಂದ ಒಂದು ವಾರ ಕಾಲ ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೆಲ್ಮೆಟ್ ಧರಿಸದೆ ಬೇಕಾಬಿಟ್ಟಿ ಬೈಕ್ ಚಲಾಯಿಸಿ ಸಾಕಷ್ಟು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ, ಜಿಲ್ಲಾಡಳಿತ, ಪೊಲೀಸರು ಅದೇಷ್ಟೇ ಜಾಗೃತಿ ಮೂಡಿಸಿದರೂ ಸವಾರರು ಮಾತ್ರ ಬದಲಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು, ಯಾರು ಹೆಲ್ಮೆಟ್ ಹಾಕದೇ ಬರುತ್ತಾರೋ, ಅಂತವರ ಬೈಕ್ ಗಳಿಗೆ ಪೆಟ್ರೋಲ್ ಹಾಕದಂತೆ ಕೋರಿ ಬಂಕ್ ಮಾಲೀಕರಿಗೆ ಪತ್ರ ಬರೆದಿದ್ದಾರೆ.
ಇದರ ಭಾಗವಾಗಿ ಇಂದಿನಿಂದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇಂದು ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಬೈಕ್ ರ್ಯಾಲಿಗೆ ಚಾಲನೆ ಕೊಟ್ಟು, ತಾವು ಸ್ವತಃ ಹೆಲ್ಮೆಟ್ ಧರಿಸಿ ಬೈಕ್ ರೈಡ್ ಮಾಡಿ ಗಮನ ಸೆಳೆದರು.
ಈ ವೇಳೆ ಅವರಿಗೆ ಜಿ.ಪಂ.ಸಿಇಒ ರಾಹುಲ್ ಶಿಂಧೆ, ಪೊಲೀಸ್ ಕಮಿಷನರ್ ಭೂಷಣ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಎಎಸ್ಪಿ ಆರ್.ಬಿ.ಬಸರಗಿ, ಡಿಸಿಪಿ ನಾರಾಯಣ ಬರಮನಿ, ಡಿಸಿಪಿ ನಿರಂಜನರಾಜೆ ಅರಸ್, ಡಿಸಿಪಿ ಎಂ.ವೈ.ಕಾಶಪ್ಪನವರ ಸೇರಿ ಮತ್ತಿತರರು ಸಾಥ್ ಕೊಟ್ಟರು.



