*ಟ್ರೆಕಿಂಗ್ ಹೋಗಿದ್ದಾಗಲೇ ದುರಂತ: ಖ್ಯಾತ ನಿರ್ಮಾಪಕ ಭಾ.ಮಾ.ಹರೀಶ್ ಪುತ್ರ ಹೃದಯಾಘಾತಕ್ಕೆ ಬಲಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಜನಪ್ರಿಯ ನಿರ್ಮಾಪಕ ಭಾ.ಮಾ.ಹರೀಶ್ ಅವರ ಪುತ್ರ ಉಲ್ಲಾಸ್ಗೌಡ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಭಾ.ಮಾ.ಹರೀಶ್ ಪುತ್ರ ಉಲ್ಲಾಸ್ಗೌಡ ಅವರು ಶಿವಮೊಗ್ಗದ ಕೊಡಚಾದ್ರಿಗೆ ಟ್ರೆಕ್ಕಿಂಗ್ಗೆ ಹೋಗಿದ್ದರು. ಈ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗ ಮಧ್ಯೆ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಉಲ್ಲಾಸ್ಗೌಡ ಅವರಿಗೆ ಮದುವೆ ನಿಶ್ಚಯವಾಗಿತ್ತು. ದೀಪ ಶಾಸ್ತ್ರ ಕೂಡ ನಡೆದಿತ್ತು. ಆಗಸ್ಟ್ನಲ್ಲಿ ನಿಶ್ಚಿತಾರ್ಥ ಆಗಬೇಕಿತ್ತು. ಡಿಸೆಂಬರ್ನಲ್ಲಿ ಮದುವೆ ನಿಶ್ಚಯವಾಗಿತ್ತು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.
ಉಲ್ಲಾಸ ಕೂಡ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ನಿರ್ಮಲಾ ಹೆಸರಿನ ಮಕ್ಕಳ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದ್ದರು. ಉಲ್ಲಾಸ್ ಕ್ಲಾಸ್ ಆಫ್ ಸಿನಿಮಾಸ್ ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿ, ಸಿನಿಮಾ ಸಂಬಂಧಿ ತರಬೇತಿ ನೀಡುತ್ತಿದ್ದರು.
ಸದ್ಯ ಮೃತದೇಹ ಶಿವಮೊಗ್ಗ ಸಮೀಪದ ಹೊಸನಗರದ ಆಸ್ಪತ್ರೆಯಲ್ಲಿದ್ದು, ಬೆಂಗಳೂರಿನ ವಿಜಯನಗರದ ಭಾ.ಮಾ.ಹರೀಶ್ ಮನೆಗೆ ತರಲಾಗುತ್ತಿದೆ.



