*ಪರಿಷತ್ ಚುನಾವಣೆ ಅಡ್ಡ ಮತದಾನ: ಸತ್ಯಶೋಧನಾ ಸಮಿತಿಯಿಂದ ಬಿ.ವೈ.ವಿಜಯೇಂದ್ರಗೆ ವರದಿ ಸಲ್ಲಿಕೆ*

ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ.ರವಿ ನೇತೃತ್ವದ ಸತ್ಯಶೋಧನಾ ಸಮಿತಿ ತನಿಖೆ ಪೂರ್ಣಗೊಳಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ವರದಿ ಸಲ್ಲಿಸಿದೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಎನ್ ಮಹೇಶ್ ನೇತೃತ್ವದ ತ್ರಿಸದಸ್ಯ ಸಮಿತಿಯು ಅಡ್ಡ ಮತದಾನದ ಬಗ್ಗೆ ಆಂತರಿಕ ಸತ್ಯಶೋಧನೆ ನಡೆಸಿ, ಸಾಂದರ್ಭಿಕ ಸಾಕ್ಷಿ, ಶಂಕೆ, ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಹಾಗೂ ಅನುಮಾನ ಇದ್ದ ಶಾಸಕರಿಂದ ಪಡೆದ ಮಾಹಿತಿ ಆಧರಿಸಿ ವರದಿ ಸಿದ್ಧಪಡಿಸಿದ್ದಾರೆ. ಮಧ್ಯಂತರ ವರದಿಯನ್ನು ಬಿಜೆಪಿ ಕಚೇರಿಯಲ್ಲಿ ಸಲ್ಲಿಕೆ ಮಾಡಿದ್ದು, ಬಳಿಕ ಬಿ.ವೈ.ವಿಜಯೇಂದ್ರ ಹಾಗೂ ಸಿ.ಟಿ ರವಿ ಇಬ್ಬರೂ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.
ನಾಲ್ಕು ದಿನಗಳ ಕಾಲ ಆಂತರಿಕ ತನಿಖೆ ನಡೆಸಿದ ಸಮಿತಿಯು ಒಟ್ಟು ಮೂರು ಪುಟಗಳ ವರದಿಯನ್ನು ಸೀಲ್ಡ್ ಕವರ್ನಲ್ಲಿ ಸಲ್ಲಿಕೆ ಮಾಡಿದೆ. ಮೈತ್ರಿ ಪಕ್ಷಗಳಿಂದ ಒಟ್ಟು 12 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಈ ಪೈಕಿ 1 ಅಸಿಂಧು ಮತ. ಬಿಜೆಪಿಯಿಂದ 1 ಅಸಿಂಧು ಮತ ಸೇರಿ ಒಟ್ಟು 4 ಅಡ್ಡಮತದಾನ ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯಾರೆಲ್ಲ ಶಾಸಕರು ಅಡ್ಡ ಮತದಾಅನ ಮಾಡಿದ್ದಾರೆ ಎಂಬ ಬಗ್ಗೆ ಯಾವುದೇ ಹೆಸರನ್ನು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿಲ್ಲ ಎನ್ನಲಾಗಿದೆ.




