Kannada NewsKarnataka NewsLatestPolitics

​*ಎಚ್. ಕೆ. ಪಾಟೀಲ್ ಹೆಸರಿನ ವೋಟರ್ ಲಿಸ್ಟ್ ಗೊಂದಲ: ಚುನಾವಣಾ ಅಧಿಕಾರಿಯಿಂದ ತನಿಖೆಗೆ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ​ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಕುರಿತು ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಈ ಬಗ್ಗೆ ಮುಖ್ಯ ಚುನಾವಣಾ ಅಧಿಕಾರಿಯೇ ತೀವ್ರಗತಿಯಲ್ಲಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ವಿಷಯದಲ್ಲಿ ತಾವು ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ​ದಾಖಲೆ ಆಧಾರಿತ ಹೇಳಿಕೆ: ಮತಪಟ್ಟಿ (ವೋಟರ್ ಲಿಸ್ಟ್) ಯಲ್ಲಿರುವ ಅಧಿಕೃತ ದಾಖಲೆಗಳನ್ನು ಅನುಗುಣವಾಗಿಯೇ ನಿನ್ನೆ ಎಚ್.ಕೆ. ಪಾಟೀಲ್ ಅವರ ಹೆಸರಿನಲ್ಲಿ ಮೂರು ಮತಗಳಿರುವ ಕುರಿತು ಹೇಳಿಕೆ ನೀಡಲಾಗಿತ್ತು. ಒಂದೇ ಕ್ಷೇತ್ರದಲ್ಲಿ, ಒಂದೇ ಊರಿನಲ್ಲಿ ಹಾಗೂ ಪಕ್ಕದ ಊರಿನಲ್ಲಿ ವ್ಯಕ್ತಿಯ ಹೆಸರು ಮತ್ತು ತಂದೆಯ ಹೆಸರು ಒಂದೇ ತರ ಇರುವುದರಿಂದ ಪಕ್ಷದ ಮುಖಂಡರು ಸಂಶಯ ವ್ಯಕ್ತಪಡಿಸಿದ್ದರು. ಆ ಮಾಹಿತಿಯ ಆಧಾರದ ಮೇಲೆಯೇ ಈ ವಿಷಯವನ್ನು ಪ್ರಸ್ತಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ.


​ಈ ಗೊಂದಲಕ್ಕೆ ಸಂಬಂಧಿಸಿದಂತೆ ಎಚ್.ಕೆ. ಪಾಟೀಲ್ ಅವರು ಇಂದು ನೀಡಿರುವ ಸ್ಪಷ್ಟೀಕರಣವನ್ನು ಚುನಾವಣಾ ಅಧಿಕಾರಿಗಳು ಸೂಕ್ತವಾಗಿ ಮತ್ತು ಕೂಲಂಕಷವಾಗಿ ಪರಿಶೀಲಿಸಬೇಕು. ಇದು ಕೇವಲ ಎಚ್.ಕೆ. ಪಾಟೀಲ್ ಅವರಿಗೆ ಮಾತ್ರ ಸೀಮಿತವಾಗಿಲ್ಲ. ಒಂದೇ ಹೆಸರಿನಲ್ಲಿ 4 ರಿಂದ 5 ಮತಗಳಿರುವ ಹಲವಾರು ಪ್ರಕರಣಗಳಿದ್ದು, ಈಗಾಗಲೇ 3-4 ಉದಾಹರಣೆಗಳನ್ನು ನೀಡಲಾಗಿದೆ. ‘ಮ್ಯಾಪಿಂಗ್’ ಮಾಡಿದ ನಂತರವೂ ಇಂತಹ ತಪ್ಪುಗಳು ಮರುಕಳಿಸುತ್ತಿರುವುದು ಗಂಭೀರ ವಿಚಾರವಾಗಿದ್ದು, ಮುಖ್ಯ ಚುನಾವಣಾ ಅಧಿಕಾರಿಯೇ ಇದರ ಸಂಪೂರ್ಣ ಪರಿಶೀಲನೆ ನಡೆಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದ್ದಾರೆ.


​”ನನ್ನ ಬಳಿ ಇದ್ದ ಮಾಹಿತಿಯನ್ನಷ್ಟೇ ನಾನು ಬಹಿರಂಗಪಡಿಸಿದ್ದೇನೆ ಹೊರತು, ಎಚ್.ಕೆ. ಪಾಟೀಲ್ ಅವರ ಮೇಲೆ ವೈಯಕ್ತಿಕವಾಗಿ ಯಾವುದೇ ಆಪಾದನೆ ಮಾಡಿಲ್ಲ. ಹೀಗಿರುವಾಗ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕ್ಷಮೆ ಕೇಳಿ ಎನ್ನುವ ಅವರ ಬೇಡಿಕೆ ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿದ್ದಾರೆ.

Home add -Advt

Related Articles

Back to top button