*ತನ್ವೀರ್ ಸೇಠ್ ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ: ವಿಷ ಕುಡಿದ ಅಭಿಮಾನಿ*

ಪ್ರಗತಿವಾಹಿನಿ ಸುದ್ದಿ: ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಗೆ ಈಬಾರಿಯೂ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರು ಸಿಡಿದೆದ್ದಿದ್ದು, ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಮೈಸೂರಿನಲ್ಲಿ ತನ್ವೀರ್ ಸೇಠ್ ಬೆಂಬಲಿಗರು ಹಾಗೂ ಅಭಿಮಾನಿಗಳು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡದೇ ದ್ರೋಹ ಬಗೆಯಲಾಗಿದೆ. ಪ್ರಾಮಾಣಿಕ ರಾಜಕಾರಣಿಗೆ ಮಾಡಿದ ಅಪಮಾನವಿದು ಎಂದು ಕಿಡಿಕಾರಿದ್ದಾರೆ.
ತನ್ವೀರ್ ಸೇಠ್ ಅವರಿಗೆ ಮಂತ್ರಿಯಾಗಿ ಮಾಡಲೇಬೇಕು. ಇಲ್ಲವಾದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳುತ್ತೇವೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ವೇಳೆ ಅಭಿಮಾನಿಯೊಬ್ಬ ವಿಷ ಸೇವಿಸಿದ ಘಟನೆ ನಡೆದಿದೆ. ತಬರೇಜ್ ಎಂಬಾತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥನಾಗಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈ ವೇಳೆ ಮಾತನಾಡೊದ ಶಾಸಕ ತನ್ವೀರ್ ಸೇಠ್, ಕಾರ್ಯಕರ್ತರು, ಬೆಂಬಲಿಗರು ಇಂತಹ ಸ್ಥಿತಿಗೆ ತಲುಪಲು ಅವಕಾಶ ಕೊಡಬೇಡಿ. ಸಚಿವ ಸ್ಥಾನ ಕೊಡುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ವಿಶ್ವಾಸ ದ್ರೋಹವಾಗಿದೆ. ನಿರಾಸೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕಾರ್ಯಕರ್ತರು ಬೆಂಬಲಿಗರು ಇಂತಹ ದುಡುಕಿನ ನಿರ್ಧರ ಕೈಗೊಳ್ಳಬೇಡಿ. ಅತಿರೇಕದ ವರ್ತನೆಯನ್ನು ನಾನು ಸಹಿಸಲ್ಲ. ಮುಂದಿನ ನಡೆ ಬಗ್ಗೆ ಎಲ್ಲರು ಕುಳಿತು ಚರ್ಚಿಸೋಣ ಎಂದು ತಿಳಿಸಿದ್ದಾರೆ.



