*ಎರಡು ತಿಂಗಳು ಹೈಕಮಾಂಡ್ ಮನೆ ಬಾಗಿಲು ಕಾದು ಅದ್ಭುತ ಭ್ರಷ್ಟ ಸಂಪುಟ ರಚನೆ ಮಾಡಿದ್ದೀರಿ: ಸಿಎಂ ಡಿ.ಕೆ.ಶಿವಕುಮಾಅರ್ ವಿರುದ್ಧ ವಿಜಯೇಂದ್ರ ವ್ಯಂಗ್ಯ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಎರಡು ತಿಂಗಳು ಹೈಕಮಾಂಡ್ ಮನೆ ಬಾಗಿಲು ಕಾದು ಕೊನೆಗೂ ಭ್ರಷ್ಟಾಚಾರ ಆರೋಪ ಹೊತ್ತಿರುವವರು, ಪಬ್ ಗಳಲ್ಲಿ ಗಲಾಟೆ ಮಾಡಿರುವವರು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯದವರಿಗೆ ಮಂತ್ರಿ ಸ್ಥಾನ ಕೊಟ್ಟು ರಾಜ್ಯದ ಜನತೆಗೆ ಒಂದು ಅದ್ಭುತ ಸಚಿವ ಸಂಪುಟ ಮಾಡಿದ್ದೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ.
ಮಹಿಳೆಯರ ಬಗ್ಗೆ ಭಾಷಣ ಮಾಡುವವರು ಕೇಂದ್ರ ಸರ್ಕಾರದ ಮಹಿಳಾ ಬಿಲ್ ವಿರೋಧ ಮಾಡಿದ್ದೀರಿ, ಈಗ ಸಂಪುಟದಲ್ಲಿ ಒಬ್ಬರೇ ಒಬ್ಬ ಮಹಿಳೆಗೆ ಸ್ಥಾನ ನೀಡಿಲ್ಲ, ಇದೇನಾ ನಿಮ್ಮ ಮಹಿಳೆಯರ ಬಗ್ಗೆ ಇರುವ ಕಾಳಜಿ? ಎಂದು ಪ್ರಶ್ನಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 183 ಕೋಟಿ ರೂ ಹಗರಣದಲ್ಲಿ ಭಾಗಿಯಾಗಿ, ಜೈಲಿಗೆ ಹೋಗಿ ಬಂದವರು, ನ್ಯಾಯಾಲಯಕ್ಕೆ ಸಾವಿರ ಪುಟದಷ್ಟು ಆರೋಪಪಟ್ಟಿ ಸಲ್ಲಿಕೆಯಾದವರನ್ನು ಸಚಿವರಾನ್ನಾಗಿ ಮಾಡಿಕೊಂಡಿದ್ದೀರಿ. ಇದು ಭ್ರಷ್ಟಾಚಾರಕ್ಕೆ ನಿಮ್ಮ ಸರ್ಕಾರದ ಸಮ್ಮತಿಯಿದೆ ಎನ್ನುವುದು ತೋರಿಸುತ್ತದೆ.
ಇನ್ನೂ ಒಂದು ಸಾಧನೆ ಅಂದ್ರೆ 8 ಜಿಲ್ಲೆಗಳಿಗೆ ಒಂದೇ ಒಂದು ಸಚಿವ ಸ್ಥಾನ ನೀಡದಿರಿವುದು. ಎಂಟು ಜಿಲ್ಲೆಗಳಲ್ಲಿ ಸಚಿವನಾಗುವ ಅರ್ಹತೆ ಹೊಂದಿರುವ ಒಬ್ಬನೇ ಒಬ್ಬ ಸಮರ್ಥ ವ್ಯಕ್ತಿ ಸಿಗಲಿಲ್ಲವೇ ನಿಮಗೆ?
ಎಐಸಿಸಿ ಅಧ್ಯಕ್ಷರು ತಮ್ಮ ಜಿಲ್ಲೆಯ ಮೂವರನ್ನು ಸಚಿವರಾನ್ನಾಗಿ ಮಾಡಿದ್ದಾರೆ. ಪಕ್ಕದ ಯಾದಗಿರಿ, ರಾಯಚೂರು, ವಿಜಯನಗರ ಕಾಣಿಸಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಮಹಿಳಾ ವಿರೋಧಿ, ಭ್ರಷ್ಟಚಾರ ಪೋಷಣೆ ಮಾಡುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಜನ ಕಲಿಸುತ್ತಾರೆ ಎಂದು ತಿಳಿಸಿದ್ದಾರೆ.




